'ಬಂಗಾರದ ಮನುಷ್ಯ' ರೀಮೇಕ್ ಗೆ ರಜನಿಕಾಂತ್ ರೆಡಿ
ಟಿ.ಕೆ ರಾಮರಾವ್ ಅವರ ಕಾದಂಬರಿ ಆಧರಿಸಿದ 'ಬಂಗಾರದ ಮನುಷ್ಯ' (1972) ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ಈ ಚಿತ್ರ ತಮಿಳಿಗೆ ರೀಮೇಕ್ ಆಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಬಂಗಾರದ ಮನುಷ್ಯ' ಆಗಲು ಹೊರಟಿದ್ದಾರೆ.
ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಹಾಗೂ ಭಾರತಿ ಅವರ ಅಮೋಘ ಅಭಿನಯ ಈ ಚಿತ್ರ ಬೆಂಗಳೂರಿನ ಸ್ಟೇಟ್ಸ್ (ಇಂದಿನ ಭೂಮಿಕಾ) ಚಿತ್ರಮಂದಿರದಲ್ಲಿ ಸತತ ಎರಡು ವರ್ಷಗಳ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದೆ. [ರಜನಿ 'ಲಿಂಗಾ' ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ವಿರೋಧ]

ಆ ಚಿತ್ರವನ್ನು ಒಮ್ಮೆ ನೋಡಿದವರಿಗಿಂತ ಹತ್ತಾರು ಬಾರಿ ನೋಡಿರುವವರೇ ಹೆಚ್ಚು. ಅಷ್ಟರ ಮಟ್ಟಿಗೆ ಆ ಕಾಲದ ಸಮಾಜವನ್ನು 'ಬಂಗಾರದ ಮನುಷ್ಯ' ಚಿತ್ರ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತ್ತು. ಆ ಚಿತ್ರವನ್ನು ಇಂದಿಗೂ ಜನರು ನೆನಪಿಸಿಕೊಂಡು ಬಂಗಾರದ ಮನುಷ್ಯ ರೈತನ ಪಾತ್ರದಲ್ಲಿ ನಟಿಸಿದ್ದ ಡಾ ರಾಜ್ ಕುಮಾರ್ ಅವರನ್ನು ಮನದುಂಬಿ ನೆನಪಿಸಿಕೊಳ್ಳುತ್ತಾರೆ.
ಅಂತಹ ಒಂದು ಪಾತ್ರ ಮಾಡಬೇಕು ಎಂಬುದು ಎಲ್ಲ ನಟರ ಕನಸು. ಆ ಕನಸನ್ನು ರಜನಿಕಾಂತ್ ನೆರವೇರಿಸಿಕೊಳ್ಳಲು ಹೊರಟಿದ್ದಾರೆ. ಅವರ 'ಲಿಂಗಾ' ಚಿತ್ರದ ಬಳಿಕ ಬಂಗಾರದ ಮನುಷ್ಯ ಚಿತ್ರ ಸೆಟ್ಟೇರಲಿದೆ. ಕಥೆ ಇಂದಿಗೂ ಪ್ರಸ್ತುತವಾಗಿರುವುದೇ ಇದಕ್ಕೆ ಕಾರಣ ಎನ್ನಬಹುದು.
ಕೆ.ಎಸ್.ರವಿಕುಮಾರ್ ಅವರ ಆಕ್ಷನ್ ಕಟ್ ನಲ್ಲಿ ಈ ಚಿತ್ರ ಮೂಡಿಬರಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಲಿಂಗಾ ಚಿತ್ರಕ್ಕೂ ಮೊದಲು ಬಂಗಾರದ ಮನುಷ್ಯ ರೀಮೇಕ್ ಚಿತ್ರ ಸೆಟ್ಟೇರಬೇಕಿತ್ತು. ಆದರೆ ಲಿಂಗಾ ಚಿತ್ರಕ್ಕೆ ಅದಾಗಲೇ ಡೇಟ್ಸ್ ಕೊಟ್ಟ ಅದರ ಬಳಿಕ ಇದು ಸೆಟ್ಟೇರಲಿದೆ ಎನ್ನುತ್ತಾರೆ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್.
ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ಸಮಯದಲ್ಲಿ ಅವರ ಗೆಳೆಯ ರಾಜ್ ಬಹದ್ದೂರ್ ಡ್ರೈವರ್ ಆಗಿದ್ದರು. ಇಬ್ಬರೂ ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರವನ್ನು ಸಾಕಷ್ಟು ಭಾರಿ ನೋಡಿದ್ದರು. ಪಾತ್ರದಲ್ಲಿ ಅಣ್ಣಾವ್ರು ಲೀನವಾಗುತ್ತಿದ್ದ ಬಗ್ಗೆ ರಜನಿ ಆಗಲೇ ಸಾಕಷ್ಟು ತಲೆಕೆಡಿಸಿಕೊಂಡಿದ್ದರಂತೆ. ಈಗ ಅವರ ಕನಸು ನನಸಾಗುತ್ತಿದೆ.


Click it and Unblock the Notifications











