ಮದ್ರಾಸ್ ಕೆಫೆ ಬಿಡುಗಡೆಗೆ ತಮಿಳರ ವಿರೋಧ

ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಈ) ಅನ್ನು ಮದ್ರಾಸ್ ಕೆಫೆ ಚಿತ್ರದಲ್ಲಿ ಕೀಳುಮಟ್ಟದಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿದ್ದ ಸಂಘಟನೆಗಳು, ತಮಗೆ ವಿಶೇಷ ಚಿತ್ರಪ್ರದರ್ಶನ ಹಮ್ಮಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದವು.
ಅದರಂತೆ, ಭಾನುವಾರ ಚೆಪಾಕ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ ನಾಮ್ ತಮಿಳಗಾರ್ ಕಚ್ಚಿ ಸಂಘಟನೆ ಚಿತ್ರದಲ್ಲಿ, ತಮಿಳು ವಿರೋಧಿ ದೃಶ್ಯಗಳಿವೆ ಆದ್ದರಿಂದ ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದೆ.
ಆ.23ರಂದು 'ಮದ್ರಾಸ್ ಕೆಫೆ' ಚಿತ್ರ ದೇಶಾದ್ಯಂತ ತೆರೆಗೆ ಬರಲಿದೆ. ಆದರೆ, ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ದೊರೆಯುವದೇ ಎಂದು ಕಾದು ನೋಡಬೇಕು. ಚಿತ್ರ ಬಿಡುಗಡೆಗೆ ಅವಕಾಶ ನೀಡಿದರೆ, ಪ್ರತಿಭಟನೆ ನೆಡಸುವುದಾಗಿ ಸಂಘಟನೆಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಶೂಜಿತ್ ಸರ್ಕಾರ್ ನಿರ್ದೇಶಿಸಿರುವ ಮದ್ರಾಸ್ ಕೆಫೆ ಚಿತ್ರದಲ್ಲಿ ಜಾನ್ ಅಬ್ರಹಾಂ ಮತ್ತು ನರ್ಗೀಶ್ ಫಕ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಚಿತ್ರಕಥೆಯನ್ನು ಹೊಂದಿದೆ. (ವಿವಾದದ ಸುಳಿಯಲ್ಲಿ ಜಾನ್ ಅಬ್ರಹಾಂ 'ಮದ್ರಾಸ್ ಕೆಫೆ)
ತಮಿಳುನಾಡಿನಲ್ಲಿ ಇತ್ತೀಚೆಗೆ ಚಿತ್ರಗಳು ಭಾರೀ ವಿವಾದಕ್ಕೆ ಗುರಿಯಾಗುತ್ತಿವೆ. ನಟ ವಿಜಯ್ ನಟಿಸಿರುವ ತಲೈವಾ ಚಿತ್ರ ತಮಿಳುನಾಡಿನಲ್ಲಿ ಬಿಡುಗಡೆಗೊಂಡಿಲ್ಲ. ಕೆಲವು ತಿಂಗಳ ಹಿಂದೆ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ನಟಿಸಿದ್ದ ವಿಶ್ವರೂಪಂ ಕೂಡ ವಿವಾದದಲ್ಲಿ ಸಿಲುಕಿತ್ತು.


Click it and Unblock the Notifications











