ಖ್ಯಾತ ಹಾಸ್ಯನಟ ಎಂ.ಎಸ್ ನಾರಾಯಣ ವಿಧಿವಶ
ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಎಂ.ಎಸ್ ನಾರಾಯಣ ಎಂದೇ ಖ್ಯಾತರಾಗಿದ್ದ ಮೈಲವರಪು ಸೂರ್ಯ ನಾರಾಯಣ (63) ಶುಕ್ರವಾರ (ಜ.23) ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಹೈದರಾಬಾದಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಟ, ನಿರ್ದೇಶಕರಾಗಿಯೂ ಅವರು ಕೆಲಸ ಮಾಡಿದ್ದು ಹಾಸ್ಯನಟರಾಗಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದರು. ತೆಲುಗಿನ ಹಾಸ್ಯನಟರಲ್ಲಿ ತಮ್ಮದೇ ಆದಂತಹ ವರ್ಚಸ್ಸು ಇದ್ದಂತಹ ನಟ. ಇದುವರೆಗೂ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ['ಬೆಟ್ಟದ ಹುಲಿ' ಖ್ಯಾತಿಯ ಕೆ ಜಾನಕಿರಾಮ್ ವಿಧಿವಶ]

ಬೆಳ್ಳಿಪರದೆಯ ಮೇಲೆ ಅವರ ಪ್ರವೇಶವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಹಾಸ್ಯದ ಹೊನಲು ಹರಿಯುತ್ತಿತ್ತು. ತಮ್ಮದೇ ಆದಂತಹ ಕಾಮಿಕ್ ಟೈಮಿಂಗ್ ಹಾಗೂ ಮುಖಭಾವನೆಯ ಚಮತ್ಕಾರಿಕ ಡೈಲಾಗ್ ಗಳಿಗೆ ಹೆಸರಾಗಿದ್ದರು. ಜನವರಿ 19ರಂದು ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಆಂಧ್ರದ ಭೀಮವರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಹೈದರಾಬಾದಿನ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ತೆಲುಗು ಚಿತ್ರರಂಗದಲ್ಲಿ ಬ್ರಹ್ಮಾನಂದಂ, ಸುನಿಲ್, ಧರ್ಮವರಪು ಸುಬ್ರಹ್ಮಣ್ಯಂನಂತಹ ಕಾಮಿಡಿ ನಟರ ದೊಡ್ಡ ಪರಂಪರೆಯೇ ಇದೆ. ಎಂಎಸ್ಎನ್ ನಿಧನದಿಂದ ಆ ಪರಂಪರೆಯ ಒಂದು ಕೊಂಡಿ ಕಳಚಿಬಿದ್ದಂತಾಗಿದೆ. 'ದೂಕುಡು' (ಕನ್ನಡದಲ್ಲಿ 'ಪವರ್ ***') ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನೂ ಪಡೆದ ಅತ್ಯುತ್ತಮ ಹಾಸ್ಯನಟ ನಾರಾಯಣ. [ಪವರ್ *** ಚಿತ್ರ ವಿಮರ್ಶೆ]
ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಅಭಿಮಾನಿ ಬಳಗವನ್ನು ಎಂ.ಎಸ್ ನಾರಾಯಣ ಅಗಲಿದ್ದಾರೆ. ಒಬ್ಬ ಮಹಾನ್ ಹಾಸ್ಯನಟನನ್ನು ಕಳೆದುಕೊಂಡಿರುವ ಟಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ಕನ್ನಡದ ಸತ್ಯ ಇನ್ ಲವ್ ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ. (ಏಜೆನ್ಸೀಸ್)


Click it and Unblock the Notifications











