'ತಲೆದಂಡ' ಸಿನಿಮಾಕ್ಕೆ ಅನ್ಯಾಯ: ಮನವಿ ಮಾಡಿದ ಸಂಚಾರಿ ವಿಜಯ್
'ತಲೆದಂಡ' ಕನ್ನಡ ಸಿನಿಮಾಕ್ಕೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಆಯ್ಕೆ ಸಮಿತಿಯಿಂದ ಅನ್ಯಾಯವಾಗಿದೆ ಎಂದು ನಟ ಸಂಚಾರಿ ವಿಜಯ್ ಆರೋಪಿಸಿದ್ದಾರೆ.
'ತಲೆದಂಡ' ಸಿನಿಮಾವನ್ನು ಸಿನಿಮೋತ್ಸವದ ಸ್ಪರ್ಧೆ ವಿಭಾಗಕ್ಕೆ ಪರಿಗಣಿಸುವಂತೆ ಕೋರಲಾಗಿತ್ತು. ಆದರೆ ಕರ್ನಾಟಕ ಚಲನಚಿತ್ರ ಅಕಾಡೆಮಿಯು 'ತಲೆದಂಡ' ಸಿನಿಮಾವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಮಾತನಾಡಿರುವ ಸಂಚಾರಿ ವಿಜಯ್, 'ತಲೆದಂಡ' ಸಿನಿಮಾವು 2020 ರಲ್ಲಿ ಸೆನ್ಸಾರ್ ಆಗಿದೆ. ಹಾಗಾಗಿ ಈ ಸಿನಿಮಾವನ್ನು ಮುಂದಿನ ವರ್ಷ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಅವರಿವರ ಕಾಲು ಹಿಡಿದು ದುಡ್ಡು ಹೊಂದಿಸಿ ಸಿನಿಮಾ ಮಾಡಿದ್ದಾರೆ. ಈಗ ಈ ಸಿನಿಮಾ ಅನ್ಯಾಯಕ್ಕೆ ತುತ್ತಾಗಿದೆ' ಎಂದಿದ್ದಾರೆ ಸಂಚಾರಿ ವಿಜಯ್.

'ತಲೆದಂಡ' ಒಂದು ಸಾಮಾಜಿಕ ಕಳಕಳಿ ಇರುವ ಸಿನಿಮಾ. ಮರಗಳನ್ನು ಕಡಿಯಬೇಡಿ, ಇದರಿಂದ ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗುತ್ತದೆ ಎಂದು ಸಾರುವ ಪರಿಸರ ಜಾಗೃತಿ ಸಾರುವ ಸಿನಿಮಾ ಒಳ್ಳೆಯ ಸಿನಿಮಾವನ್ನು ಹೇಗೆ ನೀವು ಸ್ಪರ್ಧೆಯಿಂದ ಹೊರಗೆ ಇಟ್ಟಿರಿ' ಎಂದು ಚಲನಚಿತ್ರ ಅಕಾಡೆಮಿಯನ್ನು ಪ್ರಶ್ನಿಸಿದ್ದಾರೆ ಸಂಚಾರಿ ವಿಜಯ್.
'ಈ ಸಿನಿಮಾವನ್ನು ಬಹಳ ಕಷ್ಟಪಟ್ಟು ತೆಗೆದಿದ್ದೇವೆ. ನಾನು ಸಹ ಬಹಳ ಕಷ್ಟಪಟ್ಟು ನಟಿಸಿದ್ದೇನೆ. ಕೆಲವೊಂದು ಸನ್ನಿವೇಶದಲ್ಲಿ ಜೀವವನ್ನು ಒತ್ತೆ ಇಟ್ಟು ನಟಿಸಿದ್ದೇನೆ. ಬದುಕುಳಿದಿದ್ದೇ ಹೆಚ್ಚು ಎಂಬಂಥಹಾ ಸನ್ನಿವೇಶಗಳು ಸಹ ಇದ್ದವು. ಆದರೆ ಇಂಥಹಾ ಸಿನಿಮಾಕ್ಕೆ ಸಿನಿಮೋತ್ಸವದಲ್ಲಿ ಅನ್ಯಾಯವಾಗಿದೆ. ದಯವಿಟ್ಟು ಈ ಬಗ್ಗೆ ಎಲ್ಲರೂ ಪ್ರಶ್ನೆ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಿ' ಎಂದು ಸಂಚಾರಿ ವಿಜಯ್ ಮನವಿ ಮಾಡಿದ್ದಾರೆ.
''ತಲೆದಂಡ' ಸಿನಿಮಾಕ್ಕೆ ಕೆಲಸ ಮಾಡಿರುವ ಅಶೋಕ್ ಕಶ್ಯಪ್ ಅವರು ಚಲನಚಿತ್ರ ಅಕಾಡೆಮಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವು ಚಲನಚಿತ್ರ ಅಕಾಡೆಮಿ ಇಂದಲೇ ಆಯೋಜಿತವಾಗುತ್ತಿರುವ ಕಾರಣ ಅಕಾಡೆಮಿಗೆ ಸಂಭಂಧಿಸಿದವರು ಕೆಲಸ ಮಾಡಿರುವ ಅಥವಾ ಹಣ ಹೂಡಿರುವ ಯಾವುದೇ ಸಿನಿಮಾವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ' ಎಂದು ಚಲನಚಿತ್ರ ಅಕಾಡೆಮಿಯು ತಿಳಿಸಿದೆ.
Recommended Video
ಮಾರ್ಚ್ 24 ರಿಂದ ಮಾರ್ಚ್ 31 ರವರೆಗೆ ಅಂತರಾಷ್ಟ್ರೀಯ ಬೆಂಗಳೂರು ಸಿನಿಮಾ ಉತ್ಸವವು ನಡೆಯಲಿದೆ.


Click it and Unblock the Notifications











