ಗುರು ಶಿಷ್ಯರು ಚಿತ್ರದಲ್ಲಿ ದರ್ಶನ್ ಮಗ, ವಿಜಯ್ ಮಗನಿಗೆ ಏಕೆ ಅವಕಾಶವಿಲ್ಲ? ಕಾರಣ ಬಿಚ್ಚಿಟ್ಟ ತರುಣ್
ಗುರು ಶಿಷ್ಯರು ನಾಳೆ ( ಸೆಪ್ಟೆಂಬರ್ 23 ) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶರಣ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶರಣ್ ಚಿತ್ರದಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ ಅನುಭವದ ಪತ್ರ ಪಡೆಯುವುದಕ್ಕಾಗಿ ಬೆಟ್ಟದ ಪುರ ಎಂಬ ಊರಿಗೆ ಬರುವ 'ಸಿಟಿ ದೈಹಿಕ ಮೇಷ್ಟ್ರು' ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟಿ ನಿಶ್ವಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಚಿತ್ರದಲ್ಲಿ ನಟ ಮತ್ತು ನಟಿ ಮಾತ್ರ ಪ್ರಮುಖ ಪಾತ್ರಗಳಲ್ಲ. ಬದಲಾಗಿ ಈ ಚಿತ್ರದಲ್ಲಿ ಇನ್ನೂ ಹನ್ನೆರಡು ಪ್ರಮುಖ ಪಾತ್ರಗಳಿವೆ. ಶೀರ್ಷಿಕೆಯಲ್ಲಿನ ಗುರು ಶರಣ್ ಆದರೆ, ಶಿಷ್ಯಂದಿರು ಈ ಹನ್ನೆರಡು ಜನರು. ಹೀಗೆ ಶೀರ್ಷಿಕೆಯ ಭಾಗವಾಗಿರುವ ಈ ಹುಡುಗರು ಚಿತ್ರದಲ್ಲಿಯೂ ಸಹ ಪ್ರಮುಖರು. ಶರಣ್ ಶಿಕ್ಷಕನಾಗಿ ಸೇರುವ ಬೆಟ್ಟದ ಪುರ ಎಂಬ ಊರಿನಲ್ಲಿ ಇರುವ ಈ ಹನ್ನೆರಡು ವಿದ್ಯಾರ್ಥಿಗಳು ಖೋ ಖೋ ಆಟಗಾರರಾಗಿದ್ದು, ಈ ಗುರು ಶಿಷ್ಯರು ಹಾಗೂ ಊರಿನ ನೆಲದ ಸಮಸ್ಯೆಯೊಂದರ ನಡುವೆ ನಡೆಯುವ ಕತೆಯೇ ಗುರು ಶಿಷ್ಯರು ಎಂಬುದು ಚಿತ್ರದ ಟ್ರೈಲರ್ನಲ್ಲಿಯೇ ರಿವೀಲ್ ಆಗಿದೆ.
ಇನ್ನು ಈ ಟ್ರೈಲರ್ನಲ್ಲಿ ಹೆಚ್ಚಾಗಿ ಖೋ ಖೋ ಆಟದ ದೃಶ್ಯಗಳಿದ್ದು, ಆ ಹನ್ನೆರಡು ಮಕ್ಕಳು ನಟನೆಯ ಜತೆಗೆ ಖೋ ಖೋ ಆಟದ ವೇಳೆ ಸಾಹಸ ಮಾಡಬೇಕಾದ ಅನಿವಾರ್ಯವೂ ಇತ್ತು. ಹೀಗಾಗಿಯೇ ಆ ಹುಡುಗರ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಚಿತ್ರತಂಡ ಸಾಕಷ್ಟು ಚಿಂತನೆಯನ್ನೂ ಸಹ ನಡೆಸಿತ್ತು. ಅಂತಿಮವಾಗಿ ಹನ್ನೆರಡು ಹುಡುಗರ ಪಾತ್ರಕ್ಕೆ ಆರು ಕನ್ನಡ ನಟರ ಮಕ್ಕಳನ್ನು ಆಯ್ಕೆ ಮಾಡಲಾಯಿತು. ಆದರೆ, ಇಲ್ಲಿ ದರ್ಶನ್ ಹಾಗೂ ದುನಿಯಾ ವಿಜಯ್ ಅವರ ಪುತ್ರರನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆ ಚಿತ್ರದ ಪ್ರಚಾರದ ಪ್ರೆಸ್ ಮೀಟ್ ಸಮಯದಲ್ಲಿಯೂ ಸಹ ಎದ್ದಿತ್ತು ಹಾಗೂ ಇದಕ್ಕೆ ಚಿತ್ರದ ನಿರ್ಮಾಪಕ ತರುಣ್ ಸುಧೀರ್ ಈ ಕೆಳಕಂಡಂತೆ ಕಾರಣವನ್ನೂ ಸಹ ಬಿಚ್ಚಿಟ್ಟಿದ್ದಾರೆ.

ದುನಿಯಾ ವಿಜಯ್ ಮಗನನ್ನು ಏಕೆ ಆಯ್ಕೆ ಮಾಡಲಿಲ್ಲ?
ದುನಿಯಾ ವಿಜಯ್ ನಂಗೆ ತುಂಬಾ ಒಳ್ಳೆ ಸ್ನೇಹಿತರು, ಅವರ ಮಗನನ್ನೂ ಸಹ ಈ ಚಿತ್ರದಲ್ಲಿ ಹಾಕಿಕೊಳ್ಳಲು ಯೋಚಿಸಿದ್ವಿ, ಆದರೆ ಆತನನ್ನು ಲಾಂಚ್ ಮಾಡಲು ದೊಡ್ಡದಾಗಿ ಯೋಜನೆಗಳು ನಡಿತಾ ಇವೆ ಎಂಬ ವಿಷಯ ತಿಳಿದು ತೊಂದರೆ ಕೊಡೋದು ಬೇಡ ಅಂತ ಸುಮ್ನೆ ಆದೆವು ಎಂದು ತರುಣ್ ಸುಧೀರ್ ಉತ್ತರಿಸಿದರು.

ದರ್ಶನ್ ಮಗನನ್ನು ಏಕೆ ಆರಿಸಲಿಲ್ಲ?
ಇನ್ನು ದರ್ಶನ್ ಮಗ ಸದ್ಯಕ್ಕೆ ಓದಿನ ಕಡೆ ಗಮನ ಕೊಡುತ್ತಿದ್ದಾರೆ ಹಾಗೂ ಸ್ನೇಹಿತನ ಮಗ ಎಂದು ಸಿನಿಮಾಗೆ ಕರೆದು ಅಡ್ವಾಂಟೇಜ್ ತೆಗೆದುಕೊಳ್ಳುವುದು ಬೇಡ ಎಂದು ಚಿತ್ರದ ಪಾತ್ರಕ್ಕೆ ಯಾರು ಹೊಂದುತ್ತಿದ್ದರೋ ಅಂತವರನ್ನು ಮಾತ್ರ ಆರಿಸಿದೆವು ಎಂದಿದ್ದಾರೆ.

ಮಕ್ಕಳ ಪಾತ್ರಕ್ಕಾಗಿ ಬಂದಿತ್ತು 600 ಅರ್ಜಿಗಳು
ಇನ್ನು ಮೊದಲಿಗೆ ಗುರು ಶಿಷ್ಯರು ತಂಡದ ಬಳಿ ಮೊದಲಿಗೆ ಸ್ಟಾರ್ ನಟರ ಮಕ್ಕಳನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಉದ್ದೇಶ ಇರಲಿಲ್ಲ. ಹೀಗಾಗಿ ಆಡಿಷನ್ ಕರೆಯನ್ನು ಮಾಡಿದ್ದ ಚಿತ್ರತಂಡಕ್ಕೆ ಬರೋಬ್ಬರಿ 600 ಮಕ್ಕಳ ಅರ್ಜಿಗಳು ಬಂದಿದ್ದವು. ಈ ಪೈಕಿ 180 ಮಕ್ಕಳ ಕಿರುಪಟ್ಟಿಯನ್ನು ತಯಾರಿಸಿದ್ದ ತಂಡ ಆಡಿಷನ್ ನಡೆಸಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಬುಲೆಟ್ ಪ್ರಕಾಶ್ ಮಗ ಹಾಗೂ ನೆನಪಿರಲಿ ಪ್ರೇಮ್ ಮಗನ ವಿಭಿನ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ್ದನ್ನು ನೆನಪಿಸಿಕೊಂಡಿದ್ದ ತರುಣ್ ಸುಧೀರ್ ನಟರ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾದರು.


Click it and Unblock the Notifications











