ಮಂಡ್ಯದಲ್ಲಿ ನಿಖಿಲ್ ಅವರನ್ನ ಸೋಲಿನ ಸುಳಿಗೆ ನೂಕಿದ್ದೇ ಈ '7' ಹೇಳಿಕೆಗಳು
ಮಂಡ್ಯದಲ್ಲಿ ಸುಮಲತಾ ಗೆಲ್ಲಲು ಸ್ವತಃ ಜೆಡಿಎಸ್ ನಾಯಕರೇ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪವೂ ಇದೆ. ಸುಮಲತಾ, ದರ್ಶನ್ ಮತ್ತು ಯಶ್ ಅವರನ್ನ ಟೀಕಿಸುವ ಬರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಮತಗಳನ್ನ ನೀಡುತ್ತಿದ್ದೇವೆ ಎಂಬ ಕಲ್ಪನೆ ಅವರಿಗೆ ಬಂದಿಲ್ಲ ಎನ್ನಲಾಗುತ್ತಿದೆ.
ಅದ್ಯಾವಾಗ ಸುಮಲತಾ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದರೋ ಅಲ್ಲಿಂದ ಆರಂಭವಾದ ಟೀಕೆಗಳು, ಚುನಾವಣೆ ಮುಗಿಯವರೆಗೂ ನಿಂತಿರಲಿಲ್ಲ. ಒಬ್ಬರನ್ನ ಬಿಟ್ಟು ಮತ್ತೊಬ್ಬರು, ಆವೇಶದಲ್ಲಿ ಅಥವಾ ಸೋಲಿನ ಆತಂಕದಲ್ಲೋ ಒಟ್ನಲ್ಲಿ ಸುಮಲತಾ ಮತ್ತು ಬೆಂಬಲಿಗರನ್ನ ಹೀಯಾಳಿಸಿದ್ದೇ ಅವರಿಗೆ ಮುಳುವಾಯಿತು ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಶಿವರಾಮೇಗೌಡ, ರೇವಣ್ಣ, ಕುಮಾರಸ್ವಾಮಿ, ಡಿಸಿ ತಮ್ಮಣ್ಣ ಟೀಕೆಗಳನ್ನ ಮಾಡದೆ, ಅವರ ಪಾಡಿಗೆ ಅವರನ್ನ ಬಿಟ್ಟಿದ್ದರೆ ಇಷ್ಟೊಂದು ಪೈಪೋಟಿ ಎದುರಾಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ಇದೆ. ಹಾಗಿದ್ರೆ, ಸುಮಲತಾ ಗೆಲುವಿಗೆ ಕಾರಣವಾದ ಆ 9 ವಿರೋಧಿ ಹೇಳಿಕೆಗಳು ಯಾವುದು? ಮುಂದೆ ಓದಿ....

ಮಾಯಾಂಗನೆ ಸುಮಲತಾ
'ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗಿಂತ ಮಾಯಾಂಗನೆ ಎಂದು ಮಾಜಿ ಸಂಸದ ಶಿವರಾಮೇಗೌಡ ಟೀಕೆ ಮಾಡಿದ್ದರು. ಈ ಹೇಳಿಕೆಗೆ ಸುಮಲತಾ ಬೆಂಬಲಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಯಶ್ ಮತ್ತು ದರ್ಶನ್ ಕೂಡ ಖಂಡಿಸಿದ್ದರು.

ಮಂಡ್ಯ ಗೌಡ್ತಿ ಅಲ್ಲ, ನಾಯ್ಡು
'ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಪ್ರದೇಶದ ಗೌಡ್ತಿ' ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಟೀಕಿಸಿದ್ದರು. ಶಿವರಾಮೇಗೌಡ ಮಾತನಾಡುವಾಗ 'ಸುಮಲತಾ ಅವರು ನಾಯ್ಡು, ದರ್ಶನ್ ನಾಯ್ಡು ಇವರ ಆಗಮನದಿಂದ ಮಂಡ್ಯವನ್ನ ನಾಯ್ಡುಮಯ ಮಾಡಲು ಹೊರಟಿದ್ದಾರೆ' ಎಂದಿದ್ದರು. ಆಗಲೂ ಜೆಡಿಎಸ್ ನಾಯಕರ ವಿರುದ್ಧ ಅಂಬಿರೀಶ್ ಅಭಿಮಾನಿಗಳು ತಿರುಗಿಬಿದ್ದರು.

ಗಂಡ ಸತ್ತು ತಿಂಗಳು ಆಗಿಲ್ಲ
ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ಬೆಳವಣಿಗೆ ನಡೆಯುತ್ತಿದ್ದಾಗ, ಸಚಿವ ರೇವಣ್ಣ ಅಂಬಿ ಪತ್ನಿ ವಿರುದ್ಧ ಟೀಕೆ ಮಾಡಿದ್ದರು. 'ಗಂಡ ಸತ್ತು ಒಂದು ತಿಂಗಳಾಗಿಲ್ಲ ಆಗಲೆ ರಾಜಕೀಯ ಬೇಕಾಯ್ತಾ' ಎಂದು ಕೀಳಾಗಿ ಮಾತನಾಡಿದ್ದರು. ಈ ಹೇಳಿಕೆ ವಿರುದ್ಧ ಸ್ವಪಕ್ಷ ಹಾಗೂ ಇತರೆ ಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಮುಖದಲ್ಲಿ ನೋವು ಕಾಣುತ್ತಿಲ್ಲ
ಹೀಗೆ ಸುಮಲತಾ ಅವರ ಬಗ್ಗೆ ಮಾತನಾಡುವಾಗ ಸಿಎಂ ಎಚ್ ಡಿ ಕುಮಾರಸ್ವಾಮಿ 'ಸುಮಲತಾ ಮುಖದಲ್ಲಿ ಅಂಬಿ ಸಾವಿನ ನೋವಿನ ಛಾಯೆ ಕಾಣುತ್ತಿಲ್ಲ' ಎಂದಿದ್ದರು. ಈ ಹೇಳಿಕೆ ವಿರುದ್ಧ ಮಹಿಳೆಯ ಆಕ್ರೋಶ ಹೊರಹಾಕಿದ್ದರು.

ಬಾಡಿಗೆ ಕಟ್ಟದವರು ಮಾತಾಡ್ತಾರೆ
ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಯಶ್ ಅವರ ಖಾಸಗಿ ವಿಚಾರದ ಬಗ್ಗೆ ಟೀಕಿಸಿದ್ದರು. 'ಪಕ್ಷೇತರ ಅಭ್ಯರ್ಥಿಯ ಹಿರಿಮಗನೋ ಕಿರಿಮಗನೋ ನನಗೆ ಗೊತ್ತಿಲ್ಲ. ಅದರ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು. ಇವತ್ತು ನನ್ನ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡ್ತಾರೆ. ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ, ಮಾತಾಡಲಿ..ಮಾತಾಡಲಿ....ಎಷ್ಟು ದಿನ ಅಂತ ನೋಡೋಣ' ಎಂದು ಯಶ್ ಗೆ ಚಾಟಿ ಬೀಸಿದ್ದರು. ಅದಕ್ಕೆ ಯಶ್ ಕೂಡ ತಮ್ಮದೇ ಸ್ಟೈಲ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇಲ್ಲಿ ಯಶ್ ಅಭಿಮಾನಿಗಳು ತಿರುಗಿಬಿದ್ದರು.

ಡಿ ಬಾಸ್ ಯಾರು?
ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ದರ್ಶನ್ ಅವರ ಬಗ್ಗೆ ಸಿಎಂ ವ್ಯಂಗ್ಯ ಮಾಡಿದ್ದರು. 'ಅದ್ಯಾರೋ ಚಾಲೆಂಜಿಂಗ್ ಸ್ಟಾರ್, ಯಾರೋ ಡಿ ಬಾಸ್ ಅಂತೆ. ಸಿನಿಮಾದಲ್ಲಿ ಡಿ ಬಾಸ್, ಜನರಿಗೆ ಡಿ ಬಾಸ್ ಆಗೋಕೆ ಆಗಲ್ಲ'' ಎಂದು ಕಾಲೆಳೆದಿದ್ದರು. ಇದು ಸಹಜವಾಗಿ ದರ್ಶನ್ ಅಭಿಮಾನಿಗಳನ್ನ ಕೆರಳಿಸುವಂತೆ ಮಾಡಿತ್ತು. ಇನ್ನು ದರ್ಶನ್ ಅವರದ್ದು ಎನ್ನಲಾದ ಹಳೇ ಆಡಿಯೋ ವೈರಲ್ ಆದ ಬಗ್ಗೆಯೂ ಮಾತನಾಡಿದ್ದರು.

ಜೋಡೆತ್ತಲ್ಲ, ಕಳ್ಳೆತ್ತುಗಳು ಅವು
ಸುಮಲತಾ ಪರವಾಗಿ ನಾನು ಮತ್ತು ಯಶ್ ಜೋಡಿ ಎತ್ತು ರೀತಿ ಕೆಲಸ ಮಾಡುತ್ತೇವೆ ಎಂದು ದರ್ಶನ್ ಹೇಳಿದ್ದರು. ಆ ಹೇಳಿಕೆಗೆ ಟಾಂಗ್ ನೀಡಿದ್ದ ಸಿಎಂ ಕುಮಾರಸ್ವಾಮಿ, ಅವು ರೈತರಿಗೆ ಹೊಲ ಹೂಳಲು ನೆರವಾಗುವ ಜೋಡೆತ್ತಲ್ಲ. ರಾತ್ರಿ ಸಮಯದಲ್ಲಿ ಗದ್ದೆ ಬಳಿ ಬಂದು ಎಲ್ಲ ತಿಂದು ಹೋಗುವ ಕಳ್ಳೆತ್ತುಗಳು ಎಂದಿದ್ದರು. ಈ ಎಲ್ಲ ಹೇಳಿಕೆಗಳು ನಿಖಿಲ್ ಕುಮಾರ್ ಗೆ ಕಂಟಕವಾಯ್ತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.


Click it and Unblock the Notifications











