ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಕಲರವ
ಏಳನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಇದೇ ಡಿಸೆಂಬರ್ 4 ರಿಂದ 11 ರವರೆಗೆ ನಗರದಲ್ಲಿ ನಡೆಯಲಿದೆ. ಕನ್ನಡ ಸೇರಿದಂತೆ ಜಗತ್ತಿನ ವಿವಿಧ ಭಾಷೆಗಳ 170 ಕ್ಕೂ ಹೆಚ್ಚು ಸಿನಿಮಾಗಳು 11 ವಿಭಾಗಗಳಲ್ಲಿ ಹತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಡಿ. 4 ರಂದು ಸಂಜೆ 5.30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, ವಾರ್ತಾ ಸಚಿವ ರೋಷನ್ಬೇಗ್ ಅಧ್ಯಕ್ಷತೆ ವಹಿಸುವರು ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ಬಾಬು, ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರೋತ್ಸವದ ಉದ್ಘಾಟನಾ ದಿನ ಹಂಗೇರಿಯ 'ದಿ ಅಂಬ್ಯಾಡಿಸರ್ ಟು ಬರ್ನ್' ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವದ ಸಮಾರೋಪ ಸಮಾರಂಭದಂದು ರಷ್ಯಾದ ಟೆಸ್ಟ್ ಚಿತ್ರ ಪ್ರದರ್ಶನ ಕಾಣಲಿದೆ ಎಂದು ವಿವರ ನೀಡಿದರು. ನಗರದ ಫ್ರೀಡಂ ಪಾರ್ಕ್, ಚಾಮುಂಡೇಶ್ವರಿ ಸ್ಟುಡಿಯೋ, ಲಿಡೋ, ಬಾದಾಮಿ ಹೌಸ್, ವಾರ್ತಾ ಭವನ ಸೇರಿದಂತೆ ಹತ್ತು ಕಡೆಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ ಎಂದು ಹೇಳಿದರು.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ, ಹೊನ್ನಪ್ಪ ಭಾಗವತರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ, ಹಿರಿಯ ಛಾಯಾಗ್ರಾಹಕ ಕನ್ನಡಿಗ ವಿ.ಕೆ. ಮೂರ್ತಿ ಅವರಿಗೆ ಚಿತ್ರೋತ್ಸವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.
ಡಿ. 4 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ನ ಖ್ಯಾತ ನಿರ್ದೇಶಕ ಶುಭಾಶ್ ಘಾಯ್ ಭಾಗವಹಿಸಲಿದ್ದಾರೆ. ಇವರ ಜತೆಗೆ ಸಚಿವರಾದ ಅಂಬರೀಶ್, ರಾಮಲಿಂಗಾರೆಡ್ಡಿ, ಉಮಾಶ್ರೀ, ಖ್ಯಾತ ನಿರ್ದೇಶಕ ಗೋವಿಂದ ನಿಧಜ್ಞಾನಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರಕೃತಿ, ಅಗಸಿ ಪಾರ್ಲರ್, ಹರಿವು, ಉಳಿದವರು ಕಂಡಂತೆ, ಗಜಕೇಸರಿ, ಡಿಸೆಂಬರ್ 1, ಇಂಗಳೆ ಮಾರ್ಗ, ಸಚಿನ್ ತೆಂಡೂಲ್ಕರ್ ಅಲ್ಲ, ಹಜ್ ಹಾಗೂ ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಭಾರತೀಯ ಸಿನಿಮಾ ವಿಭಾಗ, ಏಷ್ಯನ್ ಸಿನಿಮಾ ವಿಭಾಗ, ವಿಶ್ವ ಸಿನಿಮಾ ವಿಭಾಗ, ಮೆಟ್ ಟಾಕ್ ವಿಭಾಗ, ವಿಶ್ವ ಪ್ರೀಮಿಯರ್ ವಿಭಾಗ ಹೀಗೆ ಜಗತ್ತಿನ ವಿವಿಧ ಭಾಷೆಗಳ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಮಾತನಾಡಿ, ಚಿತ್ರೋತ್ಸವದಲ್ಲಿ ಚಿತ್ರೋತ್ಸವದ ಪ್ರಯೋಜನವನ್ನು ನಿರ್ಮಾಪಕರು ಹಾಗೂ ನಿರ್ದೇಶಕರು ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ರಿಯಾಯ್ತಿ ದರದಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ. ಇದರ ಜತೆಗೆ ಕನ್ನಡ ಸಿನಿಮಾಗಳನ್ನು ವಿಶ್ವ ಮಟ್ಟದಲ್ಲಿ ಮಾರುಕಟ್ಟೆ ಮಾಡುವ ಸಂಬಂಧ ರೋಮ್ನ ಇಥಾಲಿಯನ್ ಇನಾಲಿಯೋ ಹಾಗೂ ಮುಂಬೈನ ದೀಪ್ತಿ ರುಕುನಾ ಭಾಗವಹಿಸಲಿದ್ದು ಅವರೊಂದಿಗೆ ಸಿನಿಮಾಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಕನ್ನಡದಲ್ಲಿ ಕಥೆಗಳಿಲ್ಲ ಎನ್ನುವ ನಿರ್ದೇಶಕರು ಹಾಗೂ ನಿರ್ಮಾಪಕರ ಅಭಿಪ್ರಾಯ ತಪ್ಪು. ಇರುವ ಕತೆಗಳನ್ನು ಓದುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಮಾತನಾಡಿ, ಚಿತ್ರೋತ್ಸವದಲ್ಲಿ ಭಾಗವಹಿಸಲು ಎರಡು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಹೆಸರು ನೋಂದಾಯಿಸಿದ್ದಾರೆ. ಮತ್ತಷ್ಟು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಚಿತ್ರೋತ್ಸವನ್ನು ಅರ್ಥಗರ್ಭಿತವಾಗಿ ನಡೆಸಲು ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಜನವರಿಯಲ್ಲಿ ಬೆಳಗಾವಿ, ಮೈಸೂರು, ಶಿವಮೊಗ್ಗದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳ ಉತ್ಸವ ನಡೆಸಲಾಗುತ್ತಿದೆ ಎಂದರು. ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಮಾತನಾಡಿ, 'ದೇವರ ನಾಡಲ್ಲಿ' ಚಿತ್ರ ನಾಳೆಯೊಳಗೆ ಸೆನ್ಸಾರ್ ಪ್ರಮಾಣ ಪತ್ರ ನೀಡಿದರೆ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ ಇಲ್ಲದಿದ್ದರೆ ಆ ಚಿತ್ರ ಪ್ರದರ್ಶನಕ್ಕೆ ಅವಾಕಶ ಇಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ಅಕಾಡಮೆ ರಿಜಿಸ್ಟ್ರಾರ್ ಜಗನ್ನಾಥ್ ಪ್ರಕಾಶ್, ಜಂಟಿ ನಿರ್ದೇಶಕ ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











