ಮೈಸೂರಿನಲ್ಲಿ ಫಿಲ್ಮ್ ಸಿಟಿಯೂ ಶುರುವಾಗಿಲ್ಲ, ಇತ್ತ ವ್ಯವಸಾಯವೂ ಇಲ್ಲ.!
ಎಲ್ಲ ಅಂದುಕೊಂಡಂತೆ ಆಗಿದ್ದರೇ, ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಇಷ್ಟೊತ್ತಿಗಾಗಲೇ ಫಿಲ್ಮ್ ಸಿಟಿ ಆರಂಭವಾಗಬೇಕಿತ್ತು. ಆದ್ರೆ, ಎರಡು ವರ್ಷಗಳು ಕಳೆದರೂ, ಇನ್ನು ಕಾಮಗಾರಿ ಕೂಡ ಆರಂಭವಾಗದೇ ಇರುವುದು ಚಿತ್ರಪ್ರೇಮಿಗಳಿಗೆ ಹಾಗೂ ಸ್ಥಳೀಯರಿಗೆ ನಿರಾಸೆ ಉಂಟುಮಾಡಿದೆ.
ಸಿಲಿಕಾನ್ ಸಿಟಿಯಷ್ಟೇ ವೇಗವಾಗಿ ತಾಂತ್ರಿಕತೆ ಹಾಗೂ ಉದ್ಯೋಗದಲ್ಲಿ ಬೆಳೆಯುತ್ತಿರುವ ಮೈಸೂರಿಗೆ ಫೀಲ್ಮ್ ಸಿಟಿ ಬರಲಿದೆ ಎಂದು ಎಸ್.ವಿ ರಾಜೇಂದ್ರ ಬಾಬು ಸಿಂಗ್ ಹಾಗೂ ಅಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಎರಡು ವರ್ಷದ ಹಿಂದೆಯೇ ಸ್ಥಳ ಪರಿಶೀಲನೆ ನಡೆಸಿ ಪತ್ರಿಗೋಷ್ಠಿ ನಡೆಸಿದ್ದರು. ಇನ್ನೇನೂ ಮುಖ್ಯಮಂತ್ರಿಗಳು ಮೈಸೂರಿಗೆ ಆಗಮಿಸಿ ಭೂಮಿ ಪೂಜೆ ಮಾಡಿ ಕೆಲಸ ಶುರು ಮಾಡ್ತಾರೆ ಎಂದುಕೊಂಡಿದ್ದರು. ಆದ್ರೆ, ಅದ್ಯಾವುದು ನೆರವೇರಲೇ ಇಲ್ಲ.

ಮೈಸೂರಿನ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿ ಸಂಬಂಧ ಸೆ. 29ರ 2015 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಒಪ್ಪಿಗೆ ಪಡೆದುಕೊಂಡಿದ್ದರು. 133 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನೋಯ್ಡಾದಲ್ಲಿರುವಂತೆ ಚಿತ್ರನಗರಿ ಮಾಡುವುದಾಗಿ ಹೇಳಿಕೊಂಡಿದ್ದರು. ಆದ್ರೀಗ, ವರ್ಷಗಳು ಕಳೆದು ಹೋದರೂ ಕನ್ನಡ ಚಿತ್ರರಂಗವಾಗಲಿ, ಅಧಿಕಾರಿಗಳಾಗಲಿ ಅತ್ತ ಸುಳಿಯಲಿಲ್ಲ.
ಇನ್ನು ಹಿಮ್ಮಾವು ಹಾಗೂ ಅಡಕನಹಳ್ಳಿ ಹುಂಡಿ ಸಂಪರ್ಕ ಬೆಸೆಯುವ ಮಾರ್ಗ ಮಧ್ಯದಲ್ಲಿ ಫಿಲ್ಮ್ ಸಿಟಿಗಾಗಿ ಸ್ಥಳ ನಿಗದಿ ಮಾಡಲಾಗಿತ್ತು. ಇದರಿಂದ ಹಿಮ್ಮಾವು, ಅಡಕನಹಳ್ಳಿ ಹುಂಡಿ, ಬಿಂಚನಹಳ್ಳಿ, ತಾಂಡವಪುರ, ತಾಂಡ್ಯ, ಕಡಕೊಳ ಸೇರಿದಂತೆ ಅನೇಕ ಹಳ್ಳಿಗಳು ಅಭಿವೃದ್ಧಿಯಾಗಲಿದೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಖುಷಿಯಲ್ಲಿದ್ದರು. ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಚಟುವಟಿಕೆಗಳು ನಡೆಯದೆ ಇರುವುದರಿಂದ ಅಲ್ಲಿಯ ಗ್ರಾಮಸ್ಥರು ಬೇಸರ ಗೊಂಡಿದ್ದಾರೆ.

ಸಾರ್ವಜನಿಕರಿಂದ ಸರ್ಕಾರಕ್ಕೆ ಹಿಡಿ ಶಾಪ
ಎಕರೆ ಗಟ್ಟಲೆ ಜಾಗ ಇತ್ತ ವ್ಯವಸಾಯ ಮಾಡಲೂ ಬಿಡದೇ ನಮ್ಮಿಂದ ಕಿತ್ತುಕೊಂಡಿದ್ದು, ಇನ್ನು ಸಿನಿಸಿಟಿ ಕೂಡ ಮಾಡದೆ ಎರಡು ವರ್ಷಗಳಿಂದ ಜಾಗ ಪಾಳು ಬಿದ್ದಿದೆ ಎಂದು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಸ್ಥಳೀಯರು.


Click it and Unblock the Notifications











