ಗಣೇಶ್ 'ಪಟಾಕಿ' ಸೌಂಡ್ ಕಡಿಮೆ ಮಾಡಿದವರ ವಿರುದ್ಧ ಚಿತ್ರತಂಡ ಕೆಂಡಾಮಂಡಲ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಟಾಕಿ' ಸಿನಿಮಾ ಇದೇ ಶುಕ್ರವಾರ (ಮೇ26) ರಿಲೀಸ್ ಆಗಬೇಕು. ಆದರೆ ಇದಕ್ಕೆ ಈಗ ವಿಘ್ನ ಎದುರಾಗಿದೆ. ಅಲ್ಲದೆ ಇದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
'ಪಟಾಕಿ' ಚಿತ್ರವನ್ನ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ಪ್ಲಾನ್ ಮಾಡಿದ್ದರು. ಆದರೆ ಈಗ ಚಂದ್ರಪ್ಪ ಎಂಬ ವಿತರಕರಿಂದ ಸಿನಿಮಾದ ರಿಲೀಸ್ ಗೆ ಅಡ್ಡಿಯಾಗಿದೆ. 'ಪಟಾಕಿ' ಸೌಂಡ್ ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಿರುವ ಇವರ ವಿರುದ್ಧ ಚಿತ್ರದ ಕಾರ್ಯಕಾರಿ ನಿರ್ಮಾಪಕ ಎ.ಗಣೇಶ್ ಫುಲ್ ಗರಂ ಆಗಿದ್ದಾರೆ
ಅಷ್ಟಕ್ಕೂ ಗಣೇಶ್ ಅವರ 'ಪಟಾಕಿ' ಸಿನಿಮಾಗೆ ಎದುರಾಗಿರುವ ಸಮಸ್ಯೆ ಎನು? ಸಿನಿಮಾ ರಿಲೀಸ್ ಆಗುತ್ತಾ...? ಇಲ್ವಾ..? ಎನ್ನುವುದರ ವಿವರ ಮುಂದಿದೆ ಓದಿ...

ಸಮಸ್ಯೆ ಯಾರಿಂದ?
ಚಂದ್ರಪ್ಪ ಎಂಬ ವಿತರಕರಿಂದ 'ಪಟಾಕಿ' ಸಿನಿಮಾದ ರಿಲೀಸ್ ಗೆ ತೊಂದರೆಯಾಗಿದೆಯಂತೆ. ಈ ವಿಷಯವನ್ನು ಸ್ವತಃ ಚಿತ್ರದ ಕಾರ್ಯಕಾರಿ ನಿರ್ಮಾಪಕ ಎ.ಗಣೇಶ್ ಹೇಳಿಕೊಂಡಿದ್ದಾರೆ.

ಚಿತ್ರಮಂದಿರ ಸಿಗುತ್ತಿಲ್ಲ
ಶಿವಮೊಗ್ಗ, ಮಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ 'ಪಟಾಕಿ 'ಸಿನಿಮಾದ ರಿಲೀಸ್ ಗೆ ಥಿಯೇಟರ್ ಸಮಸ್ಯೆ ಎದುರಾಗಿದೆ. ಇದಕ್ಕೆ ಕಾರಣ ವಿತರಕ ಚಂದ್ರಪ್ಪ ಅವರಂತೆ.

ವಿತರಣೆಯ ವಿಚಾರ
'ಪಟಾಕಿ' ಚಿತ್ರವನ್ನು ನಿರ್ಮಾಪಕರೇ ವಿತರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ ಅದಕ್ಕೆ ವಿತರಕ ಚಂದ್ರಪ್ಪ ಚಿತ್ರಮಂದಿರಗಳ ಮೇಲೆ ಒತ್ತಡ ಹೇರಿ ಸಿನಿಮಾದ ರಿಲೀಸ್ ಗೆ ಚಿತ್ರಮಂದಿರಗಳು ಸಿಗದಂತೆ ಮಾಡುತ್ತಿದ್ದಾರಂತೆ.

ನಿರ್ಮಾಪಕರ ಆಕ್ರೋಶ.
''ಪಟಾಕಿ' ಚಿತ್ರವನ್ನು ನಿರ್ಮಾಪಕರೇ ರಿಲೀಸ್ ಮಾಡುತ್ತಿರುವುದರಿಂದ ವಿತರಕ ಚಂದ್ರಪ್ಪ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಇದು ಬಗೆಹರಿಯದಿದ್ದರೆ ಎಲ್ಲ ನಿರ್ಮಾಪಕರು ಇದರ ವಿರುದ್ಧ ಹೋರಾಟ ನಡೆಸುತ್ತಾರೆ'' - ಎ.ಗಣೇಶ್, ಕಾರ್ಯಕಾರಿ ನಿರ್ಮಾಪಕ

ಪ್ರತಿಭಟನೆ
ಚಿತ್ರದ ಈ ತೊಂದರೆ ಸರಿ ಹೋಗದೇ ಇದ್ದರೆ ಫಿಲ್ಮ್ ಚೇಂಬರ್ ಮೆಟ್ಟಿಲೇರುತ್ತೇವೆ. ಅಲ್ಲದೆ ಇಡೀ ಚಿತ್ರತಂಡ ಶಿವಮೊಗ್ಗ ಮತ್ತು ಮಂಗಳೂರಿಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ ಅಂತ ಎ.ಗಣೇಶ್ ಎಚ್ಚರಿಕೆ ನೀಡಿದ್ದಾರೆ.

'ಪಟಾಕಿ' ಸ್ಪೆಷಾಲಿಟಿ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಪಟಾಕಿ' ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪೊಲೀಸ್ ಪಾತ್ರದ ಮೂಲಕ ಸಾಯಿಕುಮಾರ್ ಮತ್ತು ಗಣೇಶ್ ಇಬ್ಬರು ಖದರ್ ತೋರಿಸಿದ್ದಾರೆ.


Click it and Unblock the Notifications











