'ರಿಚರ್ಟ್ ಆಂಟನಿ' ಸಿನಿಮಾದಲ್ಲಿ ಹೆಜ್ಜೆ ಹಾಕಲಿವೆ ಉಡುಪಿಯ 300 ಹುಲಿಗಳು!
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿ ವೇಷ ಅಂದರೆ ಸಾಕು, ತುಳುವರ ಧಮನಿ ಧಮನಿಯಲ್ಲೂ ರೋಮಾಂಚನವಾಗುತ್ತದೆ. ತಾಸೆಯ ಏಟಿಗೆ ಹುಲಿ ವೇಷಧಾರಿಗಳ ಕುಣಿತವನ್ನು ನೋಡೊದೇ ಕರಾವಳಿಗರ ಕಣ್ಣಿಗೆ ಸಂಭ್ರಮ. ಪ್ರತೀ ವರ್ಷ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಮತ್ತು ದಸರಾ ಉತ್ಸವ ದಲ್ಲಿ ಹುಲಿವೇಷ ಇಡೀಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಣಸಿಗುತ್ತದೆ. ಹುಲಿ ಕುಣಿತ ಅಂದರೆ ಅಲ್ಲಿ ಒಂದು ಗತ್ತು ಇರುತ್ತದೆ..ಗಾಂಭೀರ್ಯ ಇರುತ್ತದೆ ಕಿವಿಗಡಚಿಕ್ಕುವ ತಾಸೆಯ ಶಬ್ಧ, ತಾಳಕ್ಕೆ ತಕ್ಕುದಾದ ಹೆಜ್ಜೆ,ಮೈ ಮೇಲಿನ ಹುಲಿ ಬಣ್ಣ, ಹುಲಿ ಮುಖವಾಡ, ಎದೆಯೆತ್ತರಕ್ಕೆ ಕಾಲು ಎತ್ತಿ ಕುಣಿಯುವ ನೃತ್ಯ ಪ್ರಾಕಾರ ಬೇರೆ ಎಲ್ಲೂ ಕಾಣ ಸಿಗೋದಿಲ್ಲ. ಅದಕ್ಕೆ ತುಳುನಾಡಿನ ಹುಲಿ ವೇಷ ಅಂದ್ರೆ ಅಷ್ಟು ಪ್ರಸಿದ್ಧಿ.
ತುಳುನಾಡಿಗೆ ಮಾತ್ರ ಸೀಮಿತವಾಗಿದ್ದ ಹುಲಿವೇಷವನ್ನು ರಾಜ್ಯಕ್ಕೆ ದೇಶಕ್ಕೆ ಪ್ರಚುರಪಡಿಸಿದವರು ಯಾರು ಅಂತಾ ಕೇಳಿದರೆ ಕರಾವಳಿಗರು ನಿಸ್ಸಂಶಯವಾಗಿ ಹೇಳೋದು ನಟ ರಕ್ಷಿತ್ ಶೆಟ್ಟಿ ಯ ಹೆಸರನ್ನೇ. ಸ್ಯಾಂಡಲ್ವುಡ್ನ ಸೂಪರ್ ಹಿಟ್ ಚಿತ್ರ 'ಉಳಿದವರು ಕಂಡಂತೆ' ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಹುಲಿವೇಷವನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಉಳಿದವರು ಕಂಡಂತೆಯ ಪ್ರಮಖ ಆಕರ್ಷಣೆಯೇ ಹುಲಿಕುಣಿತವಾಗಿತ್ತು. ಅದರಲ್ಲೂ ರಕ್ಷಿತ್ ಶೆಟ್ಟಿಯ ಹುಲಿಕುಣಿತ ನಾಡಿನ ಜನರ ಮನಸ್ಸು ಗೆದ್ದಿತ್ತು. ಬಳಿಕ ಶುರುವಾಗಿದ್ದೇ ಹೊಸ ಅಧ್ಯಾಯ. ಹುಲಿ ವೇಷದ ಬೀಟ್ ವೇ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಕನ್ನಡದ ಖ್ಯಾತ ನಟರು ಹೆಜ್ಜೆ ಹಾಕಿದ್ದಾರೆ.
ರಕ್ಷಿತ್ ಶೆಟ್ಟಿ ಉಳಿವರು ಕಂಡಂತೆ ಚಿತ್ರದಲ್ಲಿ ಹುಲಿ ವೇಷದಲ್ಲಿ ಕಮಾಲ್ ಮಾಡಿದ ಬಳಿಕ ಈಗ ರಿಚರ್ಡ್ ಆಂಟನಿ ಚಿತ್ರದಲ್ಲೂ ಹುಲಿ ವೇಷವನ್ನು ಚಿತ್ರದಲ್ಲಿ ಅಳವಡಿಸಲು ಮುಂದಾಗಿದ್ದಾರೆ.. ಈ ಬಗ್ಗೆ ಉಡುಪಿಯ ಬೈಲೂರು ನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸುಳಿವು ನೀಡಿದ ರಕ್ಷಿತ್ ಶೆಟ್ಟಿ,ಕಳೆದ ಬಾರಿ ಉಳಿದವರು ಕಂಡಂತೆ ಚಿತ್ರಕ್ಕೆ ನೂರು ಹುಲಿವೇಷಧಾರಿಗಳಿಂದ ಕುಣಿಸಿದ್ದೆ. ಈ ಬಾರಿ 300 ಹುಲಿವೇಷಧಾರಿಗಳು ಬೇಕು ಅಂತಾ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆ ಚಿತ್ರಕ್ಕೆ ಬೈಲೂರು ನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದ ಜ್ಯೂನಿಯರ್ ಫ್ರೆಂಡ್ಸ್ ಹುಲಿವೇಷ ತಂಡವನ್ನು ಕರೆದುಕೊಂಡು ಹೋಗಿದ್ದರು..ತನ್ನ ಊರಿನ ಹುಡುಗರ ಪ್ರತಿಭೆಯನ್ನು ಚಿತ್ರದ ಮೂಲಕ ತೋರಿಸಿದ್ದರು. ಮತ್ತು ಉಳಿದವರು ಕಂಡಂತೆ ಚಿತ್ರದ ಹಿಂದೆ ಕ್ಷೇತ್ರದ ಬಬ್ಬು ಸ್ವಾಮಿ ಮತ್ತು ಕೊರಗಜ್ಜ ದೈವದ ಆಶೀರ್ವಾದ ಇದೆ ಅಂತಾ ರಕ್ಷಿತ್ ಬಲವಾಗಿ ನಂಬಿದ್ದಾರೆ..
ಈಗ ತಾನೇ ಕಥೆ ಬರೆದು ನಿರ್ದೇಶನ ಮಾಡಿರುವ 'ರಿಚರ್ಡ್ ಆಂಟನಿ' ಚಿತ್ರಕ್ಕೆ 300 ಹುಲಿವೇಷಧಾರಿಗಳಿಂದ ಹುಲಿ ಕುಣಿತ ಮಾಡಿಸುವ ಯೋಚನೆಯಲ್ಲಿದ್ದಾರೆ ರಕ್ಷಿತ್ ಶೆಟ್ರು. ಈ ಬಗ್ಗೆ ಅಷ್ಟಮಿಯ ದಿನ ನಡೆದ ಹುಲಿವೇಷ ತಂಡಗಳು ಲೋಬಾನ ಹಾಕುವ ಸಂಪ್ರದಾಯಿಕ ಆಚರಣೆಯ ಕಾರ್ಯಕ್ರಮ ದಲ್ಲಿ ಮಾತನಾಡಿದ ರಕ್ಷಿತ್ ಶೆಟ್ಟಿ, ಉಳಿದವರು ಕಂಡಂತೆ ಚಿತ್ರಕ್ಕೆ ಕೇವಲ ಎರಡು ದಿನ ಮಾತ್ರ ಹುಲಿಕುಣಿತದ ಶೂಟಿಂಗ್ ಮಾಡಿದ್ದೆ. ಆಗ ಆರ್ಥಿಕವಾಗಿಯೂ ಶಕ್ತರಾಗಿರಲಿಲ್ಲ. ಈಗ ಹತ್ತು ದಿನ ಬೇಕಾದರೂ ಶೂಟಿಂಗ್ ಮಾಡಬಹುದು, ಆರ್ಥಿಕವಾಗಿಯೂ ತೊಂದರೆಯೇನಿಲ್ಲ ಅಂತಾ ಯುವಕರನ್ನು ಹುರಿದುಂಬಿಸಿದ್ದಾರೆ.
ಪ್ರತೀ ಅಷ್ಟಮಿಗೆ ಉಡುಪಿಯ ಬೈಲೂರಿಗೆ ಬರುವ ರಕ್ಷಿತ್ ಶೆಟ್ಟಿ,ಹುಲಿ ವೇಷಧಾರಿಗಳ ಜೊತೆ ಹುಲಿಕುಣಿತ ಮಾಡುತ್ತಾರೆ. ಹುಲಿ ಕುಣಿತದ ಸಂಪೂರ್ಣ ಚತುರತೆ ಹೊಂದಿರುವ ರಕ್ಷಿತ್,ವೇಷಧಾರಿಗಳ ಸರಿಸಮಾನಾಗಿ ಹೆಜ್ಜೆ ಹಾಕುತ್ತಾರೆ. ಈ ಬಾರಿಯೂ ರಕ್ಷಿತ್ ಶೆಟ್ಟಿ ಹುಲಿ ಕುಣಿತ ಮಾಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದ್ದರು. ತಮ್ಮೂರಿನ ಸಿಂಪಲ್ ಸ್ಟಾರ್ನ ಸಿಂಪ್ಲಿಸಿಟಿಗೆ ಜನರೂ ಮಾರು ಹೋಗಿದ್ದಾರೆ.
'ರಿಚರ್ಡ್ ಆಂಟನಿ'ಯ ಟ್ರೈಲರ್ ಗೇ ಫೀದಾ ಆಗಿರುವ ಜನರು,ಟ್ರೈಲರ್ ನಲ್ಲೇ ಕಥಾಹಂದರವನ್ನು ಹಣೆಯುವ ಕ್ಲೂ ಕಂಡುಕೊಂಡಿದ್ದಾರೆ. ಮತ್ತು ಟ್ರೈಲರ್ ನಲ್ಲೂ ಉಳಿದವರು ಕಂಡಂತೆಯ ಪರಿಕಲ್ಪನೆ ಯನ್ನು ರಕ್ಷಿತ್ ಜನರಿಗೆ ತೋರಿಸಿದ್ದಾರೆ. 'ರಿಚರ್ಡ್ ಆಂಟನಿ' ಕನ್ನಡದ ಬಹು ನಿರೀಕ್ಷಿತ ಚಿತ್ರಗಲ್ಲಿ ಒಂದಾಗಿದ್ದು, ತೆರೆಯ ಮೇಲೆ ಹೇಗೆ ಮೂಡಿ ಬರಲಿದೆ ಎಂಬುವುದನ್ನು ಕಾದುನೋಡಬೇಕಾಗಿದೆ.


Click it and Unblock the Notifications











