'ಲಕ್ಷ್ಮಣ'ನ ಟ್ರೈಲರ್ ಬಿಡುಗಡೆಗೆ, ರಾಜಮೌಳಿ ಬರಬಹುದಾ?
ಹಿಟ್ ಸಿನಿಮಾ 'ಚಾರ್ ಮಿನಾರ್' ನಿರ್ದೇಶಕ ಆರ್ ಚಂದ್ರು ಅವರು ಆಕ್ಷನ್-ಕಟ್ ಹೇಳಿರುವ 'ಲಕ್ಷ್ಮಣ' ಚಿತ್ರದ ಶೂಟಿಂಗ್ ಸದ್ದಿಲ್ಲದೇ ಕೊನೆಗೊಂಡಿದ್ದು, ಇನ್ನೇನು ಸ್ವಲ್ಪ ದಿನಗಳಲ್ಲಿಯೇ ಚಿತ್ರದ ಟ್ರೈಲರ್, ಆಡಿಯೋ ಅಂತ ಒಂದೊಂದಾಗಿ ಬಿಡುಗಡೆಯಾಗಲಿದೆ.
ಇದೀಗ ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಂದ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಸಲು ನಿರ್ದೇಶಕ ಆರ್ ಚಂದ್ರು ಅವರು ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಅವರನ್ನು ಸಂಪರ್ಕಿಸಿದ್ದಾರೆ. ಇನ್ನು ರಾಜಮೌಳಿ ಅವರು ಓಕೆ ಅಂದರೆ ಆದಷ್ಟು ಬೇಗನೇ ಅವರನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ಆತುರದಲ್ಲಿದ್ದಾರೆ. ನಮ್ಮ ಚಂದ್ರು ಅವರು.[ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್]
'ಬಾಹುಬಲಿ ಭಾಗ 2' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಸಮಯ ಹೊಂದಿಸಿಕೊಂಡು ಕಾಲ್ ಶೀಟ್ ನೀಡಿದರೆ, ಅವರನ್ನು ಬೆಂಗಳೂರಿಗೆ ಕರೆಸಿ, ಅವರ ಕೈಯಲ್ಲಿ 'ಲಕ್ಷ್ಮಣ'ನ ಟ್ರೈಲರ್ ಬಿಡುಗಡೆ ಮಾಡಿಸಲಾಗುತ್ತದೆ.
ಇನ್ನು ಈಗಾಗಲೇ 'ಲಕ್ಷ್ಮಣ' ಚಿತ್ರದ ಮಾತಿನ ಭಾಗದ ಶೂಟಿಂಗ್ ಮುಗಿದಿದ್ದು, ಹಾಡಿನ ಭಾಗದ ಚಿತ್ರೀಕರಣ ನಡೆಯಬೇಕಿದೆ. ಚಿತ್ರದ ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಯಾವ ದೇಶದಲ್ಲಿ ಅನ್ನೋದು ಇನ್ನು ನಿರ್ಧಾರವಾಗಲಿಲ್ಲ.[ಆರ್ ಚಂದ್ರು 'ಲಕ್ಷ್ಮಣ' ನಿಗೆ ತೆಲುಗಿನ 'ಅತನೊಕ್ಕಡೆ' ಸ್ಪೂರ್ತಿ]
ಇನ್ನುಳಿದಂತೆ ಚಿತ್ರದಲ್ಲಿ ನಾಯಕ ನಟನಾಗಿ ಸಚಿವ ರೇವಣ್ಣ ಅವರ ಪುತ್ರ ಅನೂಪ್ ಅವರು ಇದೇ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ.['ಲಕ್ಷ್ಮಣ'ನಿಗೆ 'ದಶರಥ'ನಾದ ಕ್ರೇಜಿಸ್ಟಾರ್ ರವಿಚಂದ್ರನ್]
ವಿಶೇಷವಾಗಿ ನಾಯಕ ನಟನ ತಂದೆಯ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಿಂಚಿದ್ದು, 'ಬಾಹುಬಲಿ' ಖ್ಯಾತಿಯ ಖಳನಟ ಪ್ರಭಾಕರ್, ಪ್ರದೀಪ್ ರಾವುತ್ ಮುಂತಾದವರು ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರು ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


Click it and Unblock the Notifications













