ಅಪ್ಪು ಸಮಾಧಿ ಮುಂದೆ ನಿಂತು ಪುನೀತ್ ನೆಚ್ಚಿನ ಹಾಡು ಹಾಡಿದ ತೆಲುಗು ಸಂಗೀತ ನಿರ್ದೇಶಕ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಹೊಂದಿ ಇದೇ ತಿಂಗಳ 29ಕ್ಕೆ ವರ್ಷ ತುಂಬಲಿದೆ. ಹೀಗೆ ವರ್ಷ ಕಳೆಯುತ್ತಿದ್ದರೂ ಸಹ ಅಪ್ಪು ನೆನಪು ಇನ್ನೂ ಮಾಸಿಲ್ಲ. ಕರ್ನಾಟಕದ ಜನತೆ ಪುನೀತ್ ರಾಜ್ಕುಮಾರ್ ಅವರನ್ನು ನೆನೆಯದ ದಿನವೇ ಇಲ್ಲ ಎನ್ನಬಹುದು. ಇನ್ನು ಸಿನಿಮಾದ ಯಾವುದೇ ಕಾರ್ಯಕ್ರಮ ಹಾಗೂ ಆಚರಣೆಗಳಿದ್ದರೂ ಅಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸುವುದಂತೂ ಖಚಿತ.
ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇತರೆ ಚಿತ್ರರಂಗಗಳೂ ಸಹ ಅಗಲಿದ ಅಪ್ಪುಗೆ ನಮನವನ್ನು ಸಲ್ಲಿಸಿವೆ. ಬೇರೆ ಭಾಷೆಯ ಚಿತ್ರರಂಗದ ಕಲಾವಿದರು ಅಪ್ಪು ಸಮಾಧಿಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ. ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ವಿಜಯ್ ಹಾಗೂ ಬಾಲಿವುಡ್ ನಟರು ಸೇರಿದಂತೆ ಹಲವಾರು ಪರಭಾಷಾ ನಟ ನಟಿಯರು ಅಪ್ಪು ಸಮಾಧಿ ದರ್ಶನ ಪಡೆದಿದ್ದಾರೆ.
ಈ ಸಾಲಿಗೆ ಇದೀಗ ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಕೂಡ ಸೇರಿಕೊಂಡಿದ್ದಾರೆ. ಭಾನುವಾರ ( ಅಕ್ಟೋಬರ್ 9 ) ಬೆಂಗಳೂರಿನಲ್ಲಿ ನಡೆದ 67ನೇ ಫಿಲ್ಮ್ಫೇರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ದೇವಿ ಶ್ರೀ ಪ್ರಸಾದ್ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ಸಮಾಧಿ ಮುಂದೆ ನಿಂತು ಅಪ್ಪು ಇಷ್ಟ ಪಡುತ್ತಿದ್ದ ಹಾಡೊಂದನ್ನು ಹಾಡಿದ್ದಾರೆ.

ನಾನ್ನಕು ಪ್ರೇಮತೋ ಹಾಡು ಹಾಡಿದ ಡಿಎಸ್ಪಿ
ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿ ಕೈಮುಗಿದು ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ದೇವಿ ಶ್ರೀ ಪ್ರಸಾದ್ ತಮ್ಮ ಸಂಯೋಜನೆಯ ನಾನ್ನಕು ಪ್ರೇಮತೋ ಚಿತ್ರದ ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ. ಪುನೀತ್ ಅವರಿಗೆ ನನ್ನ ಹಾಡುಗಳೆಂದರೆ ಸಖತ್ ಇಷ್ಟ ಎಂದ ಡಿಎಸ್ಪಿ ನಾನು ನನ್ನ ತಂದೆಗೋಸ್ಕರ ಈ ಹಾಡನ್ನು ಸಂಯೋಜಿಸಿದ್ದೆ, ಅಪ್ಪು ಅವರಿಗೆ ಅವರ ತಂದೆಯೆಂದರೆ ಇಷ್ಟ, ಅಪ್ಪು ಅವರ ಮಕ್ಕಳಿಗೆ ಅಪ್ಪು ಎಂದರೆ ಬಲು ಇಷ್ಟ, ಹೀಗಾಗಿ ಈ ಹಾಡನ್ನು ಹಾಡಲು ಇಚ್ಛಿಸುತ್ತೇನೆ ಎಂದರು.

'ಅಪ್ಪು ಅವರೇ ಬಂದು ನನ್ನನ್ನು ಮಾತನಾಡಿಸಿದ್ದರು'
ಇನ್ನು ಇದೇ ವೇಳೆ ತಮ್ಮ ಮತ್ತು ಪುನೀತ್ ರಾಜ್ಕುಮಾರ್ ಮೊದಲ ಭೇಟಿಯಾಗಿದ್ದು ಹೇಗೆ ಎಂಬುದನ್ನು ದೇವಿ ಶ್ರೀ ಪ್ರಸಾದ್ ಬಿಚ್ಚಿಟ್ಟಿದ್ದಾರೆ. 'ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ನನ್ನ ಪಾಡಿಗೆ ನಾನು ಇದ್ದೆ, ಆಗ ಹಿಂದಿನಿಂದ ಬಂದ ಅಪ್ಪು ಹಾಯ್ ನನ್ ಹೆಸರು ಪುನೀತ್ ರಾಜ್ಕುಮಾರ್ ಅಂತ ಮಾತು ಆರಂಭಿಸಿದ್ರು. ನಾನು ಗೊತ್ತು ಸರ್ ಎಂದು ಮಾತನಾಡಲು ಆರಂಭಿಸಿದೆ. ಒಬ್ಬ ಸೂಪರ್ ಸ್ಟಾರ್ ಆ ರೀತಿ ಪರಿಚಯ ಮಾಡಿಕೊಂಡು ಮಾತನಾಡುವುದು ಎಂದರೆ ಏನು, ಇದೆಲ್ಲಾ ಮನೆಯಲ್ಲಿ ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಬೆಳೆಸಿರುವ ಶೈಲಿ' ಎಂದು ದೇವಿ ಶ್ರೀ ಪ್ರಸಾದ್ ತಿಳಿಸಿದರು.

ಪುಷ್ಪ ಚಿತ್ರಕ್ಕಾಗಿ ಗೆದ್ದ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ್ದ ಡಿಎಸ್ಪಿ
ಇನ್ನು ಭಾನುವಾರ ನಡೆದ ಫಿಲ್ಮ್ಫೇರ್ ಕಾರ್ಯಕ್ರಮದಲ್ಲಿ ದೇವಿ ಶ್ರೀ ಪ್ರಸಾದ್ ಪುಷ್ಪ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದರು. ಪ್ರಶಸ್ತಿ ಸ್ವೀಕರಿಸಿದ್ದ ದೇವಿ ಶ್ರೀ ಪ್ರಸಾದ್ 'ಎಲ್ಲರಿಗೂ ನನ್ನ ನಮಸ್ಕಾರಗಳು, ಚೆನ್ನಾಗಿದೀರ ಬೆಂಗಳೂರು, ತುಂಬಾ ಚೆನ್ನಾಗಿದ್ದೀರ' ಎಂದು ಕನ್ನಡದಲ್ಲಿಯೇ ಹೇಳಿದರು. ಮಾತನ್ನು ಮುಂದುವರಿಸಿದ ಡಿಎಸ್ಪಿ 'ಈ ಪ್ರಶಸ್ತಿಯನ್ನು ನನ್ನ ಆತ್ಮೀಯ ಸಹೋದರ ಶ್ರೀ ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸುತ್ತೇನೆ' ಎಂದು ಕನ್ನಡದಲ್ಲಿಯೇ ಮಾತನಾಡಿದರು.


Click it and Unblock the Notifications











