ಅಂಬರೀಷ್ ಸಂಭ್ರಮಕ್ಕೆ ಸಂಚಾರ ಅದಲು ಬದಲು

By Rajendra

ಮಂಡ್ಯದ ಗಂಡು ಅಂಬರೀಷ್ ಹುಟ್ಟುಹಬ್ಬದ ನಿಮಿತ್ತ ಮಂಗಳವಾರ (ಮೇ 29) ಅರಮನೆ ಮೈದಾನದಲ್ಲಿ (ಕೃಷ್ಣವಿಹಾರ್) ಅಂಬಿ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ಯಾಲೇಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.

ಇಂದು ಮಧ್ಯಾಹ್ನ 2ರಿಂದ ರಾತ್ರಿ 11ತನಕ 'ಅಂಬಿ ಸಂಭ್ರಮ' ಕಾರ್ಯಾಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದ ರಸ್ತೆಗಳಾದ ರಮಣಮಹರ್ಷಿ ರಸ್ತೆ, ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದ್ದು ಪರ್ಯಾಯ ಮಾರ್ಗಗಳಲ್ಲಿ ತೆರಳುವಂತೆ ಸೂಚಿಸಲಾಗಿದೆ.

ಆನೇಕಲ್, ಹೊಸೂರು ರಸ್ತೆ, ಕನಕಪುರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು ರಸ್ತೆಗಳಿಂದ ಬರುವ ಲಘು ಸಾರಿಗೆ ವಾಹನಗಳು, ಲಾರಿಗಳು ಮತ್ತು ಬಸ್ಸುಗಳು ಔಟರ್ ರಿಂಗ್ ರೋಡ್‌ನಲ್ಲಿ ಬಂದು ಹೆಬ್ಬಾಳ ಫ್ಲೈಓವರ್ ಮುಖಾಂತರ ಮೇಖ್ರಿ ವೃತ್ತದ ಸರ್ವಿಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ಮುಂದೆ ಸಾಗಿ ಅಮಾನುಲ್ಲಾಖಾನ್ ಗೇಟ್ ಮತ್ತು ಸರ್ಕಸ್ ಗ್ರೌಂಡ್ ಗೇಟ್ ಮುಖಾಂತರ ಅರಮನೆ ಮೈದಾನ ಪ್ರವೇಶಿಸಬೇಕು.

ಹೊಸಕೋಟೆ, ಕೋಲಾರದಿಂದ ಬರುವ ಬಸ್ಸು ಮತ್ತು ಟೆಂಪೋಗಳು ಹಳೆ ಮದ್ರಾಸ್ ರಸ್ತೆ, ಕೆನ್ಸಿಂಗ್‌ಟನ್ ವೃತ್ತ, ಎಂಇಜಿ ಸೆಂಟರ್, ಸೇಂಟ್ ಜಾರ್ಜ್ ರಸ್ತೆ ಮೂಲಕ ನಂದಿದುರ್ಗ ರಸ್ತೆಗೆ ಬಲತಿರುವು ಪಡೆದು ನಂದಿದುರ್ಗ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಮುಂಭಾಗ ಪ್ರವೇಶಿಸಿ ವಾಹನ ನಿಲುಗಡೆಗೊಳಿಸಬೇಕು.

ನೆಲಮಂಗಲ, ಕುಣಿಗಲ್, ನಾಗಮಂಗಲ, ತುಮಕೂರು ಕಡೆಯಿಂದ ಬರುವಂತಹ ಬಸ್ಸು ಮತ್ತು ಟೆಂಪೋಗಳನ್ನು ಯಶವಂತಪುರ ಮುಖಾಂತರ ಬರುವುದನ್ನು ನಿಷೇಧಿಸಿ ಗೋರುಗುಂಟೆ ಪಾಳ್ಯ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಹೊರವರ್ತುಲ ರಸ್ತೆಯಲ್ಲಿ ಹೆಬ್ಬಾಳ ಫ್ಪೈಓವರ್ ಮುಖಾಂತರ ಬಳ್ಳಾರಿ ರಸ್ತೆ ಮೂಲಕ ಸಾಗಿ ಸರ್ಕಸ್ ಗೇಟ್ ಸಮೀಪ ನಿಲ್ಲಿಸಬೇಕು.

ಅಂಬಿ ಸಂಭ್ರಮಕ್ಕಾಗಿ ಅರಮನೆ ಮೈದಾನದಲ್ಲಿ (ಕೃಷ್ಣವಿಹಾರ್) ಅದ್ಧೂರಿ ವೇದಿಕೆ ಸಿದ್ಧವಾಗಿದೆ. ಇಂದು ಸಂಜೆ 6.30ಕ್ಕೆ ಕಾರ್ಯಕ್ರಮ ಶುರುವಾಗಲಿದ್ದು ಚಿತ್ರೋದ್ಯಮದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಕಾರ್ಯಕ್ರಮ ನಡೆಸಿಕೊಡಲಿದೆ.

ಕನ್ನಡ ಚಿತ್ರರಂಗದ ಅಷ್ಟೂ ತಾರೆಗಳು ನರ್ತಿಸಿ, ನಗಿಸಿ ಅಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ. ಈ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವವನ್ನು ಎಸ್ ನಾರಾಯಣ್ ಹಾಗೂ ರಾಕ್ ಲೈನ್ ವೆಂಕಟೇಶ್ ವಹಿಸಿಕೊಂಡಿದ್ದಾರೆ. ಸಮಾರಂಭಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ರಾಜಕೀಯ ಮುತ್ಸದ್ದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈಗಾಗಲೆ ಅಂಬರೀಷ್ ಅವರು ಬಾಲಿವುಡ್ ನಟ ಶತ್ರುಘ್ನ ಸಿನ್ಹಾ, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಬಹುತೇಕರನ್ನು ಖುದ್ದಾಗಿ ಆಹ್ವಾನಿಸಿದ್ದಾರೆ. ಇವರಲ್ಲಿ ಬಹುತೇಕರು ಸಮಾರಂಭಕ್ಕೆ ಬರುವ ಸಾಧ್ಯತೆಗಳಿವೆ.

ಉಳಿದಂತೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ತಾರೆಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ದರ್ಶನ್, ಸುದೀಪ್, ರವಿಚಂದ್ರನ್, ಗಣೇಶ್, ರಮೇಶ್ ಅರವಿಂದ್, ದುನಿಯಾ ವಿಜಯ್, ಪ್ರೇಮ್, ರಮ್ಯಾ, ರಾಧಿಕಾ ಪಂಡಿತ್, ರಾಗಿಣಿ, ಐಂದ್ರಿತಾ ರೇ ಪಟ್ಟಿ ಹೀಗೆಯೇ ಬೆಳೆಯುತ್ತದೆ. (ಏಜೆನ್ಸೀಸ್)

More from Filmibeat

English summary
The city traffic police have diverted vehicular movement around Palace Grounds, Bangalore following Rebel Star Amarish 60th birthday celebrations at Palace Grounds (Krishna Vihar). The changes will be in effect till 11 pm on 29th May.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X