'ಅಂಬರೀಶಣ್ಣ ಕೊಟ್ಟ ಬಿರಿಯಾನಿ ರುಚಿಯಾಗಿತ್ತು' ಎಂದವರಾರು
ಮಂಡ್ಯ ಯೂತ್ ಗ್ರೂಪ್ ವತಿಯಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ 'ಮಂಡ್ಯ ಬಹು ರುಚಿ ಮೇಳ' ಹಾಗೂ 'ಯುವಯಾನ' ಕಾರ್ಯಕ್ರಮದಲ್ಲಿ ನಾಗಮಲೆ ಮೂವೀಸ್ ಲಾಂಛನದಲ್ಲಿ ಮೂಡಿಬರುತ್ತಿರುವ `ಭುಜಂಗ' ಚಿತ್ರದ ಟ್ರೈಲರ್ ಹಾಗೂ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.
ಮಂಡ್ಯ ಭಾಷೆಯಲ್ಲಿ `ಅಣ್ತಮ್ಮ' ಎನ್ನುತ್ತಲೇ ಮಾತಿಗಿಳಿದ ನಟ ಪ್ರಜ್ವಲ್ ದೇವರಾಜ್, `ಗೌಡ್ರು' ಸಿನಿಮಾದ ಚಿತ್ರೀಕರಣ ಮಂಡ್ಯದ ಹಳ್ಳಿಯೊಂದರಲ್ಲಿ ನಡೆಯುತ್ತಿದ್ದಾಗ ತಂದೆ (ದೇವರಾಜ್)ಯೊಂದಿಗೆ ಬಂದಿದ್ದೆ'.['ಭುಜಂಗ' ಬರ್ತಾ ಇದ್ದಾನೆ, ದಾರಿ ಬಿಡ್ರೋ!]
'ಆಗ ಅಂಬರೀಶಣ್ಣ ನಿತ್ಯವೂ ಬಿರಿಯಾನಿ ತರಿಸುತ್ತಿದ್ದರು. ಆ ಬಿರಿಯಾನಿ ಬಹಳ ರುಚಿಯಾಗಿತ್ತು. ಆಗ ನಾನಿನ್ನೂ ಚಿಕ್ಕವನಾಗಿದ್ದೆ. ದೊಡ್ಡವನಾದ ಮೇಲೆ ಮಂಡ್ಯದಲ್ಲಿ ನನ್ನದೊಂದು ಚಿತ್ರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕೆಂಬ ಕನಸಿತ್ತು. ಅದು ಈಗ ನೆರವೇರಿದೆ ಎಂದ ಅವರು `ಭುಜಂಗ' ನನ್ನ ಅಭಿನಯದ 25ನೇ ಚಿತ್ರ. ಇದನ್ನು ನೀವು ನೋಡಿ ಹರಸಬೇಕೆಂದರು'.
ನಾಯಕಿ ಮೇಘನಾ ರಾಜ್ ಮಾತನಾಡಿ ಮಂಡ್ಯದಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಅದಕ್ಕೆ ಯಶಸ್ಸು ಸಿಗುತ್ತದೆ ಎಂಬ ಮಾತಿದೆ. ಅದರಂತೆ ನಮ್ಮ ಚಿತ್ರ ಶತದಿನೋತ್ಸವ ಆಚರಿಸುವ ವಿಶ್ವಾಸ ಇದೆ ಎಂದರು.
ಇದೇ ಸಂದರ್ಭದಲ್ಲಿ ಬೃಹತ್ ಎಲ್ಇಡಿ ಪರದೆಯ ಮೇಲೆ `ಭುಜಂಗ' ಚಿತ್ರದ ಟ್ರೈಲರ್ ಗೆ ನಿರ್ಮಾಪಕ ವರುಣಾ ಮಹೇಶ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಡೆದ ಖಡಕ್ ಡೈಲಾಗ್ ಗಳಿಗೆ ಮಂಡ್ಯದ ಹುಡುಗರು ಹುಚ್ಚೆದ್ದು ಕುಣಿದರು.
ಚಿತ್ರದ ನಾಯಕ ಪ್ರಜ್ವಲ್ ದೇವರಾಜ್, ನಾಯಕಿ ಮೇಘನಾ ರಾಜ್, ನಿರ್ದೇಶಕ ಜೀವಾ, ಕಥೆಗಾರ ಬಿ.ಎ.ಮಧು, ಹಿರಿಯ ನಟರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಚಿತ್ರದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ನಟ ಸಂತೋಷ್, ಐರಾವತ ನಿರ್ಮಾಪಕ ಸಂದೇಶ್, ನಟ ತಬಲಾ ನಾಣಿ, ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್, ಉಪಾಧ್ಯಕ್ಷ ಎಚ್.ಎಸ್.ಮಂಜು, ಕಾರ್ಯದರ್ಶಿ ಪ್ರಮೋದ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications













