ಪುನೀತ್ ಜತೆ ಸ್ಟೆಪ್ ಹಾಕಿದ ಮೋಹಕ ತಾರೆ ತ್ರಿಷಾ
ಕನ್ನಡ ಚಿತ್ರರಂಗಕ್ಕೆ ಪರಭಾಷಾ ನಟಿಯರು ಅಡಿಯಿಡುತ್ತಿರುವುದು ಸುದ್ದಿ ಹೊಸದಲ್ಲ. ಆದರೆ ತ್ರಿಷಾ ಎಂಬ ಕೃಷ್ಣ ಸುಂದರಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಕಳೆದೊಂದು ವರ್ಷದಿಂದ ಕಿವಿಗೆ ಬೀಳುತ್ತಲೇ ಇತ್ತು. ಇದೀಗ ಅದು ದಿಟವಾಗಿದೆ.
ಕಳೆದ ಹತ್ತು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ರಾಣಿಯಂತೆ ಮೆರೆದ ತ್ರಿಷಾ ಕೃಷ್ಣನ್ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಅಧಿಪತಿ' ಚಿತ್ರಕ್ಕೆ ತ್ರಿಷಾ ಆಗಮಿಸಿದ್ದಾರೆ. ತೆಲುಗಿನ 'ದೂಕುಡು' ಚಿತ್ರದ ರೀಮೇಕ್ 'ಅಧಿಪತಿ'. [ಶಾರ್ಟ್ಸ್ ನಲ್ಲಿ ತ್ರಿಷಾ ಕೃಷ್ಣನ್ ವಿಶ್ವರೂಪ ಪ್ರದರ್ಶನ]

ಇನ್ನು ಪುನೀತ್ ಈ ಬಾರಿ ಒಂದು ಗಟ್ಟಿ ನಿರ್ಧಾರ ಮಾಡಿದ್ದಾರೆ. ಇನ್ನು ಮುಂದೆ ಅಭಿಮಾನಿಗಳನ್ನ ಕಾಯಿಸೋದಿಲ್ಲ. ವರ್ಷಕ್ಕೆ ಒಂದು, ಎರಡು ಸಿನಿಮಾ ಗ್ಯಾರಂಟಿ ಅಂತ. ಅಂದುಕೊಂಡಂತೆ 'ದೂಕುಡು' ರೀಮೇಕ್ ಶೂಟಿಂಗನ್ನೂ ಮುಗಿಸ್ತಿದ್ದು, ಈಗಾಗಲೆ ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ' ಸಿನಿಮಾವೂ ಸದ್ದಿಲ್ಲದಂತೆ ಸಾಗುತ್ತಿದೆ.
ಇದಾದ ನಂತರ ಪ್ರೇಮ್ ನಿರ್ದೇಶನದ ಪುನೀತ್ ರ ಸಿನಿಮಾ ಡಾ. ರಾಜ್ ಹುಟ್ಟುಹಬ್ಬದಂದು ಅಂದರೆ ಏಪ್ರಿಲ್ 24ಕ್ಕೆ ಮುಹೂರ್ತ ನಡೆಸಲಿದೆ. ಒಟ್ಟಾರೆ ಈ ವರ್ಷವಿಡೀ ಪುನೀತ್ ಪಕ್ಕಾ ಶೆಡ್ಯೂಲ್ ಹಾಕಿಕೊಂಡು ನಾಲ್ಕು ಸಿನಿಮಾ ಮುಗಿಸ್ತಾರಂತೆ. ಇನ್ನು ತ್ರಿಷಾ-ಪುನೀತ್ ಜೋಡಿಯನ್ನ ತೆರೆಮೇಲೆ ನೋಡೋಕೆ ಚಿತ್ರಪ್ರೇಮಿಗಳು ಕಾದಿರೋದಂತೂ ಗ್ಯಾರಂಟಿ.
ತೆಲುಗು 'ದೂಕುಡು' ಚಿತ್ರದ ಮೂಲ ನಿರ್ಮಾಪಕರೇ ಕನ್ನಡ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಆದರೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿರುತ್ತವೆ. ದೂಕುಡು ಚಿತ್ರವನ್ನು ರಾಮ್ ಅಚಂತಾ, ಗೋಪಿಚಂದ್ ಅಚಂತಾ ಹಾಗೂ ಅನಿಲ್ ಸುಂಕರ ನಿರ್ಮಿಸಿದ್ದಾರೆ. ರು.35 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಲ್ಲಿ ರು.101 ಕೋಟಿ ಗಳಿಸಿತ್ತು. ಮಹೇಶ್ ಬಾಬುಗೆ ಸಮಂತಾ ನಾಯಕಿಯಾಗಿದ್ದರು. (ಏಜೆನ್ಸೀಸ್)


Click it and Unblock the Notifications











