ಮಾಡರ್ನ್ ಮೈಸೂರು ಮಲ್ಲಿಗೆ, ನಾಗಾಭರಣ ಗರಂ
ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಘಮಘಮ ವಾಸನೆ ಬೀರಿದ ಚಿತ್ರ 'ಮೈಸೂರು ಮಲ್ಲಿಗೆ'. 1992ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಟಿ.ಎಸ್. ನಾಗಾಭರಣ ಆಕ್ಷನ್ ಕಟ್ ಹೇಳಿದ್ದರು. ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವನಗಳನ್ನು ಆಧರಿಸಿ ತಯಾರಿಸಿದ ಈ ಚಿತ್ರ ಇಂದಿಗೂ ಜನಮನ್ನಣೆಗೆ ಪಾತ್ರವಾಗಿದೆ.
ಈಗ ಇದೇ ಹೆಸರಿನಲ್ಲಿ ಮತ್ತೊಂದು ಮೈಸೂರು ಮಲ್ಲಿಗೆ ಚಿತ್ರ ಸೆಟ್ಟೀರಿದೆ. ಹತ್ತು ವರ್ಷಗಳ ಬಳಿಕ ಅದೇ ಶೀರ್ಷಿಕೆಯನ್ನು ಬಳಸಿಕೊಳ್ಳಬಹುದು. ನಾಗಾಭರಣ ನಿರ್ದೇಶನದ ಮೈಸೂರು ಮಲ್ಲಿಗೆ ಬಂದು 20 ವರ್ಷಗಳೇ ಕಳೆದುಹೋಗಿದೆ. ಈಗ ಮತ್ತೆ ಅದೇ ಶೀರ್ಷಿಕೆಯಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ ಅವರಿಗೆ ಕೊಂಚ ಅಸಮಾಧಾನವಿದೆ.
ಇಂದಿನ ನಿರ್ದೇಶಕರಿಗೆ ಸ್ವಲ್ಪವೂ ಸೌಜನ್ಯವಿಲ್ಲ. ಮೈಸೂರು ಮಲ್ಲಿಗೆ ಶೀರ್ಷಿಕೆಯಲ್ಲಿ ಚಿತ್ರವನ್ನು ನಿರ್ಮಿಸಬೇಕಾದರೆ ತಮಗೂ ಒಂದು ಮಾತು ತಿಳಿಸಬೇಕಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಅಷ್ಟೂ ಸೌಜನ್ಯವಿಲ್ಲವೇ ಎಂಬುದೇ ಅವರ ಅಸಮಾಧಾನಕ್ಕೆ ಕಾರಣ.ಅಂದಿನ 'ಮೈಸೂರು ಮಲ್ಲಿಗೆ' ಚಿತ್ರ ದಂಪತಿಗಳ ಪಿಸು ಮಾತಿನಷ್ಟೆ ಸೊಗಸಾಗಿತ್ತು. ವರಕವಿ ಬೇಂದ್ರೆ ಅವರು 'ಮೈಸೂರು ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ, ಇದು ಈ ಮಣ್ಣು ನಲದಿಂದ ಬರಲು ಸಾಧ್ಯವೇ?' ಎಂದದ್ದು ಸುಮ್ಮನೆಯೇ?
ಬಳೆಗಾರ ಚೆನ್ನಯ್ಯ , ಒಂದಿರುಳು ಕನಸಿನಲಿ , ರಾಯರು ಬಂದರು ಮಾವನ ಮನೆಗೆ ಹಾಡುಗಳಂತೂ ಕಾವ್ಯ ರಸಿಕರ ಹೃದಯಕ್ಕೇ ಲಗ್ಗೆಹಾಕಿದ ಕವಿತೆಗಳು. ಈ ಕವಿತೆಗಳಲ್ಲಿ ಬರುವ ದಂಪತಿಗಳು ಮುಪ್ಪು ಸಾವಿಲ್ಲದ ಗಂಧರ್ವರು. ಆದರೆ ಈಗಿನ ಮೈಸೂರು ಮಲ್ಲಿಗೆಯ ಕಥಾವಸ್ತು ಏನು? ಇದು ಒಳ್ಳೆಯ ಅಭಿರುಚಿ ಚಿತ್ರವೇ ಅಲ್ಲವೆ ಎಂಬ ಬಗ್ಗೆಯೂ ನಾಗಾಭರಣ ಅವರ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆಯಂತೆ.
ಈ ಹಿಂದೆ 'ಆಸ್ಕರ್' ಎಂಬ ವಿನೂತನ ಶೈಲಿಯ ಚಿತ್ರ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ 'ಮೈಸೂರು ಮಲ್ಲಿಗೆ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುವುದರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ. ಒಂಟಿ ಹೆಣ್ಣಿನ ಮೇಲೆ ಪ್ರತಿನಿತ್ಯ ನಡೆಯುತ್ತಿರುವ ವಿಲಕ್ಷಣ ಶೋಷಣೆಯ ಕಥೆ ಹೊಂದಿದೆ. ಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ. (ಒನ್ಇಂಡಿಯಾ ಕನ್ನಡ)


Click it and Unblock the Notifications












