ತುಳು ಭಾಷೆ ನನ್ನ ತಾಯಿ, ನಾನು ಫೇಲ್ ಆದವನಲ್ಲ ಪಾಸ್ ಆದವನು ಎಂದ ಕಿಚ್ಚ ಸುದೀಪ್
ವಿಕ್ರಾಂತ್ ರೋಣ ನಂತರ ಕಿಚ್ಚ ಸುದೀಪ್ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯ ಉಪೇಂದ್ರ ನಟನೆಯ ಕಬ್ಜ ಚಿತ್ರದಲ್ಲಿ ಸುದೀಪ್ ನಟಿಸಿದ್ದರೂ ಸಹ ನಾಯಕನಾಗಿ ಯಾವ ಚಿತ್ರದಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಇನ್ನು ಕಿಚ್ಚ ಸುದೀಪ್ ಮಾತ್ರ ಕಬ್ಜ ಶೂಟ್ ಬಳಿಕ ವಿದೇಶಿ ಪ್ರವಾಸ ಹಾಗೂ ರಾಜ್ಯದ ವಿವಿಧ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಭಾಗವಹಿಸುವಲ್ಲಿ ನಿರತರಾಗಿದ್ದಾರೆ.
ಅದೇ ರೀತಿ ಇದೇ ತಿಂಗಳು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ನಡೆದ 'ಭ್ರಮರ - ಇಂಚರ ನುಡಿ ಹಬ್ಬ' ಕಾರ್ಯಕ್ರಮದಲ್ಲಿಯೂ ಸಹ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪತ್ನಿ ಪ್ರಿಯಾ ಸುದೀಪ್ ಜತೆ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಮೊದಲು ಭೇಟಿ ನೀಡಿದ ನಟ ಕಿಚ್ಚ ಸುದೀಪ್ ನಂತರ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಕಿಚ್ಚ ಸುದೀಪ್ ಅವರಿಗೆ ತುಳು ಭಾಷೆ ಹಾಗೂ ಕಾಲೇಜು ದಿನಗಳ ಬಗ್ಗೆ ಪ್ರಶ್ನೆಗಳನ್ನು ಹಾಕಿದರು. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ ಸುದೀಪ್ ಹಾಜರಿದ್ದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಮತ್ತು ಶಿಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ತುಳು ನಾಡು ಹಾಗೂ ತುಳು ಭಾಷೆಯ ಬಗ್ಗೆ ಅಭಿಪ್ರಾಯ?
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಆರಂಭಿಸಿದ ಕಿಚ್ಚ ಸುದೀಪ್ಗೆ ಗಾಯತ್ರಿ ಎಂಬ ವಿದ್ಯಾರ್ಥಿನಿ "ನಿಮ್ಮ ತಾಯಿನಾಡು ತುಳುನಾಡು. ಆದುದರಿಂದ ತುಳು ಭಾಷೆಯ ಬಗ್ಗೆ ಹಾಗೂ ತುಳು ನಾಡಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು?" ಎಂದು ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್ "ನೀವೇ ಹೇಳಿದ್ರಲ್ಲಾ ನನ್ನ ತಾಯಿ ಅಂತ.. ತಾಯಿ ಬಗ್ಗೆ ಅಭಿಪ್ರಾಯ ಇರಬಾರದು, ಪ್ರೀತಿ ಇರಬೇಕು" ಎಂದು ಹೇಳಿಕೆ ನೀಡಿದರು. ಸುದೀಪ್ ಅವರ ಈ ಹೇಳಿಕೆಗೆ ಶಿಳ್ಳೆ ಹಾಗೂ ಚಪ್ಪಾಳೆ ಹರಿದು ಬಂದವು.

ಪಾಸ್ ಆಗಿದ್ದೇನೆ, ಫೇಲ್ ಆಗಿಲ್ಲ
ಇನ್ನು ಆಕಾಶ್ ಎಂಬ ವಿದ್ಯಾರ್ಥಿಯೊಬ್ಬ ನಿಮ್ಮ ವಿದ್ಯಾರ್ಥಿ ಜೀವನದ ಸವಿನೆನಪಿನ ಬಗ್ಗೆ ತಿಳಿಸಿ ಎಂದು ಸುದೀಪ್ ಅವರಿಗೆ ಪ್ರಶ್ನೆಯನ್ನು ಹಾಕಿದರು. ಇದಕ್ಕೆ ಉತ್ತರಿಸಿದ ಸುದೀಪ್ "ಪಾಸ್ ಅಗಿದ್ದೇನೆ ಸಾರ್, ಫೇಲ್ ಆಗಿಲ್ಲ" ಎಂದು ಹೇಳಿಕೆ ನೀಡಿದರು. ಹಾಗೆಯೇ ರಿತಿಕ್ ಎಂಬ ಮತ್ತೋರ್ವ ವಿದ್ಯಾರ್ಥಿ ಯುವ ಜನತೆಗೆ ಯಾವ ಸಂದೇಶವನ್ನು ನೀಡುತ್ತೀರಿ ಎಂದು ಪ್ರಶ್ನೆಯನ್ನು ಕೇಳಿದಾಗ ಬೆಳೆಯಲು ಆತುರ ಪಡಬೇಡಿ, ನಿಧಾನವಾಗಿ ಬೆಳೆಯಿರಿ, ಅನುಭವಿಸಿಕೊಂಡು ಬೆಳೆಯಿರಿ, ಯಾಕಂದ್ರೆ ಇಂತಹ ಸಮಯ ಮತ್ತೆ ಸಿಗುವುದಿಲ್ಲ ಎಂದು ಕಿಚ್ಚ ಸುದೀಪ್ ಉತ್ತರವನ್ನು ನೀಡಿದರು.

ನನ್ ಹೆಸರು ಸಂದೀಪ್ ಅಲ್ಲ, ಸುದೀಪ್ ಸರ್!
ಇನ್ನು ಕಿಚ್ಚ ಸುದೀಪ್ ಅವರ ಕುರಿತು ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು ಮಾತನಾಡಿ ಸ್ವಾಗತವನ್ನು ಕೋರಿದರು. ಸುದೀಪ್ ಅಭಿನಯದ ಚಿತ್ರಗಳ ಹೆಸರುಗಳನ್ನು ಉಲ್ಲೇಖಿಸಿ ಸ್ವಾಗತ ಕೋರಿದ ಅವರು ಗಡಿಬಿಡಿಯಲ್ಲಿ ಸುದೀಪ್ ಎನ್ನುವ ಬದಲು ಸಂದೀಪ್ ಎಂದು ಹೇಳಿಬಿಟ್ಟಿದ್ದರು. ಈ ವಿಷಯದ ಕುರಿತು ಮಾತನಾಡಿದ ಸುದೀಪ್ ಆ ಪ್ರಾಧ್ಯಾಪಕರನ್ನು ಪಕ್ಕದಲ್ಲಿಯೇ ನಿಲ್ಲಿಸಿಕೊಂಡು "ನಾನು ಅಭಿನಯದ ಎಲ್ಲಾ ಚಿತ್ರಗಳ ಹೆಸರನ್ನೆಲ್ಲಾ ಸರಿಯಾಗಿ ಹೇಳಿದ್ರಿ, ಆದರೆ ನನ್ನ ಹೆಸರನ್ನೇ ತಪ್ಪಾಗಿ ಹೇಳಿಬಿಟ್ರಲ್ಲ. ನನ್ನ ಹೆಸರು ಸಂದೀಪ್ ಅಲ್ಲ ಸರ್, ಸುದೀಪ್" ಎಂದು ಹೇಳಿ ತಮಾಷೆಗಾಗಿ ಪ್ರಾಧ್ಯಾಪಕರ ಕಾಲೆಳೆದರು.


Click it and Unblock the Notifications











