ಮೂಡಬಿದ್ರೆಯಲ್ಲಿ 'ಚಾಲಿಪೋಲಿಲು' ಟ್ರಾಫಿಕ್ ಜಾಮ್
ನಲವತ್ತ ಮೂರು ವರ್ಷಗಳ ತುಳು ಚಲನಚಿತ್ರರಂಗದ ಇತಿಹಾಸದಲ್ಲಿ 52ನೇ ಚಿತ್ರವಾಗಿ ಮೂಡಿ ಬಂದಿರುವ ಚಾಲಿಪೋಲಿಲು ಚಲನಚಿತ್ರ ತುಳು ನಾಡಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಗಳಿಕೆಯಲ್ಲೂ ಈ ಸಿನಿಮಾ ಮುನ್ನಡೆ ಸಾಧಿಸಿದೆ.
ಈ ಹಿಂದಿನ ಎಲ್ಲ ಸಿನಿಮಾಗಳ ದಾಖಲೆಗಳನ್ನೂ ಮೀರಿ ಸಾಗುವ ಲಕ್ಷಣಗಳನ್ನು ಚಾಲಿಪೋಲಿಲು ಚಿತ್ರ ತೋರಿಸುತ್ತಿದೆ. ಹಿಂದೆ ತುಳು ಚಿತ್ರಗಳು ಬರುತ್ತಿದ್ದ ಮತ್ತು ಯಶಸ್ವಿ ತುಳು ಚಿತ್ರಗಳು ಎನಿಸಿದ್ದ ಕಾಲದಲ್ಲಿ ಮಂಗಳೂರಿನಲ್ಲಿ ಇದ್ದುದು ಒಂದೇ ಜ್ಯೋತಿ ಚಿತ್ರ ಮಂದಿರ. ಮತ್ತೊಂದು ಉಡುಪಿಯಲ್ಲಿ. ಜ್ಯೋತಿಯಲ್ಲಿ ಎಲ್ಲ ಪ್ರದರ್ಶನಗಳು ಮುಗಿದ ಬಳಿಕ ಉಡುಪಿಗೆ ಪ್ರಿಂಟ್ ತೆಗೆದುಕೊಂಡು ಹೋಗಬೇಕು ಎಂಬಂತಹ ಸ್ಥಿತಿ ಆಗಿತ್ತು. ಈಗಿನ ಸ್ಥಿತಿ ಹಾಗಲ್ಲ ಹತ್ತಾರು ಟಾಕಿಸ್ ಗಳು ಒಂದೇ ಊರಿನಲ್ಲಿವೆ. [ಚಾಲಿಪೋಲಿಲು ಚಿತ್ರ ವಿಮರ್ಶೆ]

ಚಾಲಿಪೊಲೀಲು ಚಲನಚಿತ್ರ ಮಂಗಳೂರು ನಗರ ಒಂದರಲ್ಲೇ ನಾಲ್ಕು ಥಿಯೇಟರ್ ಗಳಲ್ಲಿ 17 ಪ್ರದರ್ಶನಗೊಳ್ಳುತ್ತಿದೆ. ನಗರದ ಮೂರು ಪ್ರಮುಖ ಮಾಲ್ ಗಳಲ್ಲಿ ಹಾಗೂ ಜ್ಯೋತಿ ಟಾಕೀಸ್ ನಲ್ಲಿ ತುಳು ಚಿತ್ರಪ್ರೇಮಿಗಳು ಮುಗಿಬಿದ್ದು ಚಾಲಿಪೋಲಿಲು ಚಿತ್ರ ವೀಕ್ಷಿಸುತ್ತಿದ್ದಾರೆ.
ಕನ್ನಡ ಚಲನಚಿತ್ರಗಳು ಒಮ್ಮೆಲೆ 100ರಿಂದ 150 ಟಾಕಿಸ್ ಗಳಲ್ಲೂ ಬಿಡುಗಡೆಯಾಗುತ್ತವೆ. ಆದರೆ ತುಳು ಚಿತ್ರಗಳಿಗೆ ಅಷ್ಟು ವಿಶಾಲ ಮಾರ್ಕೆಟ್ ಇಲ್ಲ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಭರಪೂರ ವೀಕ್ಷಕರಿದ್ದಾರೆ. ಎಲ್ಲ ಪ್ರೇಕ್ಷಕರಿಗೂ ಒಮ್ಮೆಲೆ ಚಿತ್ರ ತಲುಪಬೇಕು ಎಂಬ ಉದ್ದೇಶದಿಂದ ಚಾಲಿಪೋಲಿಲು ಚಲನ ಚಿತ್ರವನ್ನು ಏಕಕಾಲದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ 10 ಟಾಕೀಸ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಗ್ರಾಮಾಂತರ ಪ್ರದೇಶ ಎನಿಸುವ ಕಾರ್ಕಳದ ರಾಧಿಕಾ ಥಿಯೇಟರ್ ನಲ್ಲಿ ಈವರೆಗೆ ಯಾವುದೇ ತುಳು ಚಲನಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದ್ದಿಲ್ಲ. ಚಾಲಿಪೋಲಿಲು ಚಲನಚಿತ್ರ ಈ ಅಪವಾದನ್ನೂ ತೊಡೆದು ಹಾಕಿದೆ.
ಬೆಳ್ತಂಗಡಿಯಲ್ಲಿರುವ ಟಾಕೀಸ್ ಗೆ ಉಜಿರೆ, ಧರ್ಮಸ್ಥಳಗಳಿಂದ ಗುಂಪುಗುಂಪಾಗಿ ಜನರು ಬಂದು ಚಾಲಿಪೋಲಿಲುಚಿತ್ರ ವೀಕ್ಷಿಸುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಕೂಡ ಪೊಲೀಸ್ ಕಾವಲಿನಲ್ಲಿ ಟಿಕೆಟ್ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಬಿ.ಸಿ.ರೋಡ್ ನ ನಕ್ಷತ್ರ ಟಾಕಿಸ್ ನಲ್ಲಿ ಮೊದಲೇ ಟಿಕೆಟ್ ಬುಕ್ ಆಗಿರುತ್ತವೆ.

ಇದರಿಂದ ಸರದಿಯಲ್ಲಿ ನಿಂತು ಟಿಕೆಟ್ ಪಡೆಯುವವರಿಗೆ ಟಿಕೆಟ್ ಸಿಗುತ್ತಿಲ್ಲ ಎಂಬ ಗಲಾಟೆ ನಿತ್ಯ ಎಂಬಂತಾಗಿದೆ. ಇದು ಚಾಲಿಪೊಲೀಲಿ ಸೃಷ್ಟಿಸಿದ ಹವಾ ಎನ್ನಬಹುದು. ಮೂಡಬಿದ್ರೆಯ ಅಮರಶ್ರೀ ಟಾಕಿಸ್ ಎದುರು ಕಳೆದ ನಾಲ್ಕು ದಿನಗಳಿಂದ ಟ್ರಾಫಿಕ್ ಜಾಮ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾರಣ ಚಾಲಿಪೋಲಿಲುಚಲನಚಿತ್ರ ವೀಕ್ಷಿಸಲು ಬರುತ್ತಿರುವ ಗ್ರಾಮೀಣ ವಾಸಿಗಳ ದಂಡು.
ಉಡುಪಿಯಲ್ಲಿ ಈ ಹಿಂದೆ ತೆರೆಕಂಡ ತುಳು ಸಿನಿಮಾಗಳಿಗೆ ದೊರೆತ ಪ್ರತಿಕ್ರಿಯೆಗಿಂತಲೂ ಅದ್ಭುತ ಎಂಬಂತೆ ಕಲ್ಪನಾ ಚಿತ್ರಮಂದಿರದಲ್ಲಿ ನೂಕು ನುಗ್ಗಲು ಕಾಣಬಹುದು. ಮಲ್ಪೆ, ಮಣಿಪಾಲ, ಹಿರಿಯಡ್ಕ, ಬ್ರಹ್ಮಾವರ, ಕುಂದಾಪುರದಿಂದ ಜನರು ಗುಂಪುಗುಂಪಾಗಿ ಬಂದು ಟಿಕೆಟ್ ಗಾಗಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ಮಾರಿಬಲೆ ಮತ್ತು ಮಹಾನದಿ ಚಿತ್ರಗಳ ನಿರ್ದೇಶಕ ಕೃಷ್ಣಪ್ಪು ಉಪ್ಪುರ್ ಹೇಳುವಂತೆ, ಬಹಳಷ್ಟು ತುಳು ಚಿತ್ರಗಳನ್ನು ನಾನು ಉಡುಪಿಯಲ್ಲೇ ನೋಡಿದ್ದೇ ಆದರೆ ಈ ರೀತಿಯ ಅಲೆ ಕಂಡಿರಲಿಲ್ಲ, ಸಿನಿಮಾ ಮುಗಿದದ್ದೇ ಗೊತ್ತಾಗಲಿಲ್ಲ ಎನ್ನುತ್ತಾರವರು.
ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ನಿರ್ಮಿಸಿದರೆ ಜನ ಸ್ವೀಕರಿಸುತ್ತಾರೆ ಎಂಬುದಕ್ಕೆ ಚಾಲಿಪೋಲಿಲುಚಿತ್ರದ ಯಶಸ್ಸು ಒಳ್ಳೆಯ ಉದಾಹರಣೆಯಾಗಿದೆ. ನಾಟಕ ಕಲಾವಿದರನ್ನು ಹಾಕಿ ಯಾವ ರೀತಿ ಸಿನಿಮಾ ತೆಗೆಯಬೇಕು ಎಂಬುದನ್ನು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ತೊರಿಸಿಕೊಟ್ಟಿದ್ದಾರೆ. ಸಿನಿಮಾಕ್ಕೆ ದೊರೆತ ಅಭೂತಪೂರ್ವ ಜನಬೆಂಬಲದಿಂದ ತುಳು ಚಿತ್ರರಂಗವೇ ಬೆರಗಾಗಿದೆ ಎನ್ನುತ್ತಾರೆ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











