ಮುಂಬೈ ನಿಂದ ನೇರವಾಗಿ ಸ್ಯಾಂಡಲ್ ವುಡ್ ಗೆ ಬಂದ ರೂಪದರ್ಶಿ
ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬೇರೆ ಭಾಷೆಯ ನಟಿಯರು ಆಮದು ಆಗುತ್ತಿರುವುದು ಒಂಥರಾ ಫ್ಯಾಶನ್ ಆದಂತಿದೆ. ಸುದೀಪ್ ಅವರ 'ಹೆಬ್ಬುಲಿ' ಚಿತ್ರದ ಮೂಲಕ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರು ಸ್ಯಾಂಡಲ್ ವುಡ್ ಗೆ ಕಾಲಿಟ್ಟರೆ, ಮರಾಠಿ ಬೆಡಗಿ ವೈಭವಿ ಶಾಂಡಿಲ್ಯ ಅವರು ಶರಣ್ ಅವರ ಹೊಸ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.[ಶರಣ್ ರ 'ರಾಜ್-ವಿಷ್ಣು'ಗೆ ಮರಾಠಿ ಬೆಡಗಿ ಎಂಟ್ರಿ, ಯಾರೀ ಚೆಲುವೆ?]

ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ಮುಂಬೈ ಬೆಡಗಿ ಕಾಮ್ನಾ ರಣಾವತ್. ಹೌದು ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ 'ಜಾನ್ ಜಾನಿ ಜನಾರ್ಧನ' ಚಿತ್ರಕ್ಕೆ ಟಿವಿ ಜಾಹೀರಾತುಗಳಲ್ಲಿ ಮಿಂಚಿರುವ ರೂಪದರ್ಶಿ ಕಾಮ್ನಾ ಅವರು ಆಯ್ಕೆಯಾಗಿದ್ದಾರೆ.

ಬಹುತಾರಾಗಣ ಇರುವ ಈ ಚಿತ್ರದಲ್ಲಿ ನಟ 'ಕೃಷ್ಣ' ಅಲಿಯಾಸ್ ಅಜೇಯ್ ರಾವ್, ನಟ ಲೂಸ್ ಮಾದ ಯೋಗೇಶ್ ಮತ್ತು ನಟ ಸುನೀಲ್ ನಾಗಪ್ಪ ಅಲಿಯಾಸ್ ಕೃಷ್ಣ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ನಟಿ ಮಾಲಾಶ್ರೀ ಅವರು ವಿಭಿನ್ನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.['ಲೇಡಿ ಟೈಗರ್' ಮಾಲಾಶ್ರೀ ಅವರ ಮುಂದಿನ ಪ್ರಾಜೆಕ್ಟ್ ಯಾವುದು?]

'ನಾವು ಹಲವಾರು ನಟಿಯರನ್ನು ಹುಡುಕಾಡಿದೆವು, ಕೊನೆಗೆ ಕಾಮ್ನಾ ರಣಾವತ್ ಅವರನ್ನು ನಮ್ಮ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡೆವು. ಅವರು ನಮ್ಮ ಕಥೆಗೆ ಬಹಳ ಹೊಂದಿಕೊಳ್ಳುತ್ತಾರೆ' ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ.

ತುಂಬಾ ಸುಂದರವಾಗಿ ಗ್ಲಾಮರ್ ಬೊಂಬೆಯಂತಿರುವ ನಟಿ ಕಾಮ್ನಾ ರಣಾವತ್ ಅವರು ಹೆಚ್ಚಾಗಿ ಟಿವಿ ಜಾಹೀರಾತುಗಳಲ್ಲಿ ಹಾಗೂ ಲೈಫ್ ಓಕೆ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಹಿಂದಿ ಧಾರಾವಾಹಿ ಒಂದರಲ್ಲಿ ಮಿಂಚುತ್ತಿದ್ದಾರೆ. ಇನ್ನು ಪೂರ್ಣ ಪ್ರಮಾಣದ ನಾಯಕಿಯಾಗಿ ಈ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟು ಒಳ ಬರುತ್ತಿದ್ದಾರೆ.

ನಿರ್ಮಾಪಕರಾದ ಎಲ್ ಪದ್ಮನಾಭ್, ಕೆ.ಗಿರೀಶ್ ಮತ್ತು ಶಶಿಕಿರಣ್ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಎಂ ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದೇ ತಿಂಗಳು ಮೇ 9 ರಿಂದ ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದೆ.


Click it and Unblock the Notifications











