ಭಾರೀ ಮೆಚ್ಚುಗೆಗೆ ಪಾತ್ರವಾದ ರಿಷಬ್ ಶೆಟ್ಟಿಯ 'ಕರ್ಮಭೂಮಿ' ಮಾತು
'ಕಾಂತಾರ' ಸಿನಿಮಾದ ಭಾರೀ ಜನಪ್ರಿಯ ಪಡೆದ ವರಾಹ ರೂಪಂ ಹಾಡಿನ ಬಳಕೆಯ ಬಗ್ಗೆ ಕೇರಳ ಕೋರ್ಟಿನಲ್ಲಿದ್ದ ಎರಡು ಪ್ರಕರಣಗಳು ಅನೂರ್ಜಿತಗೊಂಡ ನಂತರ, ಈ ಸಿನಿಮಾ ಮತ್ತೆ ಈ ಸಿನಿಮಾದ ಹ್ಯಾಷ್ ಟ್ಯಾಗ್ ನಲ್ಲಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
ವಾರದ ಕೆಳಗೆ ಇಟಿ ನೌ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿ ಆಡಿದ ಮಾತೊಂದರ ತುಣುಕನ್ನು ಟ್ವಿಟ್ಟಿಗರು ಈ ಹ್ಯಾಶ್ ಟ್ಯಾಗ್ ನಲ್ಲಿ ತಂದು ತುಂಬುತ್ತಿದ್ದಾರೆ ಮತ್ತು ರಿಷಬ್ ಆಡಿದ ಮಾತಿಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
ಈ ವರ್ಷದ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳಲ್ಲಿ ಒಂದಾದ ರಕ್ಷಿತ್ ಶೆಟ್ಟಿ ನಿರ್ದೇಶನ, ಅಭಿನಯದ 'ಕಾಂತಾರ' ಸಿನಿಮಾ ಬಿಡುಗಡೆಯಾದ ದಿನದಿಂದ ಇಂದಿನ ವರೆಗೆ ದಾಖಲೆ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಇಂಡಿಯಾ ಒನ್ ಟ್ರೆಂಡಿಂಗ್ ಆಗಿತ್ತು.
ಈಗ, ಅಂದರೆ ಸಿನಿಮಾ ಬಿಡುಗಡೆಯಾಗಿ ಎರಡು ತಿಂಗಳ ಮೇಲಾದರೂ ಮತ್ತೆಮತ್ತೆ ಸುದ್ದಿ ಮಾಡುತ್ತಿದೆ. ಈ ನಡುವೆ, ಪ್ರೇಕ್ಷಕರ ಒತ್ತಾಯದ ಮೇರೆಗೆ ಚಿತ್ರದ ತುಳು ಆವೃತ್ತಿಯೂ ಕೂಡಾ ಡಿಸೆಂಬರ್ ಎರಡರಂದು ಬಿಡುಗಡೆಯಾಗಿದೆ.

ಅನುಪಮ್ ಖೇರ್
ಚೇತನ್ ಭಗತ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ರಿಷಬ್ ಶೆಟ್ಟಿ ಭಾಗವಹಿಸಿದ್ದರು. 'ಕಾಂತಾರ' ಚಿತ್ರಕ್ಕೆ ಪಟ್ಟ ಪರಿಶ್ರಮ, ಬೇರೆ ಭಾಷೆಗಳಿಗೆ ಡಬ್ ಮಾಡಬೇಕಾಗಿ ಬಂದ ಅನಿವಾರ್ಯತೆಯ ಬಗ್ಗೆ ರಿಷಬ್ ಕಾರ್ಯಕ್ರಮದಲ್ಲಿ ವಿವರಿಸುತ್ತಿದ್ದರು. ಅನುಪಮ್ ಖೇರ್ ಅವರು ತಮ್ಮ ಕಾಶ್ಮೀರಿ ಫೈಲ್ಸ್ ಚಿತ್ರದ ಅನುಭವವನ್ನೂ ಹಂಚಿಕೊಳ್ಳುತ್ತಿದ್ದರು.

ಚೇತನ್ ಭಗತ್
"ಹಿಂದಿ ಸಿನಿಮಾ ಮತ್ತು ಓಟಿಟಿಯಲ್ಲಿ ಪ್ರವೇಶ ಮಾಡಲು ನೀವು ತಯಾರಿದ್ದೀರಾ" ಎನ್ನುವ ಪ್ರಶ್ನೆಯನ್ನು ಚೇತನ್ ಭಗತ್ ಕೇಳಿದರು. ಅದಕ್ಕೆ ರಿಷಬ್ ಕೊಟ್ಟ ಉತ್ತರ ಈಗ ಟ್ವಿಟ್ಟಿಗರ ಮತ್ತು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. "ಇಲ್ಲ, ನನಗೆ ಕನ್ನಡ ಸಿನಿಮಾವನ್ನು ಮಾಡಬೇಕು, ನನಗೆ ನಟ, ನಿರ್ದೇಶಕನ ವೇದಿಕೆಯನ್ನು ಕೊಟ್ಟಿದ್ದು ನನ್ನ ಭಾಷೆ ಕನ್ನಡ" ಎನ್ನುವ ಮಾತನ್ನು ರಿಷಬ್ ಹೇಳಿದ್ದಾರೆ.
ಇಂದು ನಾನು ನಿಮ್ಮ ಜೊತೆಗೆ
"ಇಂದು ನಾನು ನಿಮ್ಮ ಜೊತೆಗೆ ಈ ವೇದಿಕೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದರೆ ಅದು ನನ್ನ ಕನ್ನಡ ಮತ್ತು ಕನ್ನಡಿಗರಿಂದ. 'ಕಾಂತಾರ' ಚಿತ್ರಕ್ಕೆ ಈ ಮಟ್ಟಿನ ಯಶಸ್ಸು ಸಿಕ್ಕಿದೆ ಎಂದರೆ ಅದು ಮೊದಲು ಕನ್ನಡಿಗರಿಂದ. ನನ್ನ ಮುಂದಿನ ಸಿನಿಮಾವೂ ಇಷ್ಟವಾದರೆ ಇತರ ಭಾಷೆಗಳಿಗೂ ಡಬ್ ಮಾಡುತ್ತೇನೆ. ನಾನು ಎಲ್ಲಿಂದ ಬಂದೆನೋ, ಅದು ನಮ್ಮ ಕರ್ಮಭೂಮಿ, ಅಣ್ಣಾವ್ರು ಯಾವತ್ತೂ ಈ ಮಾತನ್ನು ಹೇಳುತ್ತಿದ್ದರು"ಎಂದು ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕೇರಳ ಕೋರ್ಟ್
ಕೇರಳ ಕೋರ್ಟಿನ ತೀರ್ಪಿನ ನಂತರ ಚಿತ್ರದ ಒಂದು ಡೈಲಾಗ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸದ್ದನ್ನು ಮಾಡುತ್ತಿದೆ. ಕೋರ್ಟಿಗೆ ಹೋಗುತ್ತೀಯಾ, ಆದರೆ ನನ್ನ ತೀರ್ಪನ್ನು ಈ ಮೆಟ್ಟಲಲ್ಲಿ ಹೇಳುತ್ತೇನೆ ಎನ್ನುವ ಸಂಭಾಷಣೆ ಚಿತ್ರದಲ್ಲಿ ಬರುತ್ತದೆ. ಇದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. "ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ" ಎಂದು ರಿಷಬ್ ಶೆಟ್ಟಿ ಟ್ವೀಟ್ ಅನ್ನು ಮಾಡಿದ್ದಾರೆ.


Click it and Unblock the Notifications











