ಬುಲೆಟ್ ಪ್ರಕಾಶ್ ಆಸ್ಪತ್ರೆ ಬಿಲ್ ಪಾವತಿಸಿದ್ದು ಈ ಇಬ್ಬರು ಸಚಿವರು
ಬುಲೆಟ್ ಪ್ರಕಾಶ್ ಇಲ್ಲವಾಗಿ ಎರಡು ದಿನಗಳಾಗಿವೆ. ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರದಂದು ನಿಧನ ಹೊಂದಿದ್ದಾರೆ.
ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಾರ್ಚ್ 31 ರಂದು ನಗರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೇ ಅವರನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಅವರು ಅಸುನೀಗಿದ್ದಾರೆ.
ಸತತ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ಕೊನೆ-ಕೊನೆಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ, ಆರ್ಥಿಕ ಸಮಸ್ಯೆಯೂ ಅವರ ಬೆನ್ನು ಬಿದ್ದಿತ್ತು, ಇಂಥಹಾ ಸಮಯದಲ್ಲಿ ಅವರು ಆಸ್ಪತ್ರೆ ಸೇರಿದ್ದರು. ಅವರು ನಿಧನ ಹೊಂದಿದ ಮೇಲೆ ಬೆಟ್ಟದೆತ್ತರ ಬೆಳೆದಿದ್ದ ಆಸ್ಪತ್ರೆಯ ಬಿಲ್ ಅನ್ನು ಇಬ್ಬರು ಸಚಿವರು ನೀಡಿದ್ದಾರೆ.

ಆಸ್ಪತ್ರೆ ಬಿಲ್ ಕಟ್ಟಿದ್ದು ಈ ಸಚಿವರು
ಬುಲೆಟ್ ಪ್ರಕಾಶ್ ಅವರ ಆಸ್ಪತ್ರೆಯ ಬಿಲ್ ಪಾವತಿಸಲು ಆರೋಗ್ಯ ಸಚಿವ ಶ್ರೀರಾಮುಲು ಸಹಾಯ ಮಾಡಿದ್ದಾರೆ. ಹೀಗೆಂದು ನಟ ದುನಿಯಾ ವಿಜಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಆರ್.ಅಶೋಕ್
ಬುಲೆಟ್ ಪ್ರಕಾಶ್ ಅವರು ನಿಧನ ಹೊಂದಿದ ವಿಚಾರ ಹೊರಬೀಳುತ್ತಿದ್ದಂತೆ ಸಚಿವ ಆರ್.ಅಶೋಕ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದರು. ಬುಲೆಟ್ ಪ್ರಕಾಶ್ ಅವರು ಬಿಜೆಪಿ ಸಕ್ರಿಯ ಸದಸ್ಯರೂ ಆಗಿದ್ದರು.

ಸಿಎಂ ಫಂಡ್ನಿಂದ ಎರಡು ಲಕ್ಷ ಅನುಮೋದನೆ
ಈ ಮೊದಲೂ ಸಹ ಬುಲೆಟ್ ಪ್ರಕಾಶ್ ಅವರಿಗೆ ಸಚಿವ ಆರ್.ಅಶೋಕ್ ನೆರವು ನೀಡಿದ್ದರು. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬುಲೆಟ್ ಪ್ರಕಾಶ್ ಅವರಿಗೆ ಸಿಎಂ ಫಂಡ್ ನಿಂದ ಎರಡು ಲಕ್ಷ ಮಂಜೂರಾಗುವಲ್ಲಿ ಆರ್.ಅಶೋಕ್ ನೆರವು ನೀಡಿದ್ದರು. ಎರಡು ಲಕ್ಷ ಹಣ ಮಂಜೂರಾಗಿದೆ ಕೊರೊನಾ ಲಾಕ್ಡೌನ್ ಮುಗಿದ ಮೇಲೆ ಅದು ಬುಲೆಟ್ ಪ್ರಕಾಶ್ ಮನೆಯವರ ಕೈಸೇರಲಿದೆ.

''ಶಸ್ತ್ರಚಿಕಿತ್ಸೆಗೆ ಸಹಾಯ ಕೇಳಿದ್ದರು, ಆದರೆ ಅವರೇ ಇಲ್ಲ''
ಆರ್.ಅಶೋಕ್ ಅವರು ಸೋಮವಾರ ಮಾಧ್ಯಮಗಳಿಗೆ ಹೇಳಿದಂತೆ, 'ಯಕೃತ್ ಶಸ್ತ್ರಚಿಕಿತ್ಸೆಗೆ ಹಣದ ಸಹಾಯವನ್ನು ಬುಲೆಟ್ ಪ್ರಕಾಶ್ ಕೇಳಿದ್ದರಂತೆ, ಆದರೆ ಅವರೇ ಈಗ ಇಲ್ಲವಾಗಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ'' ಎಂದು ಆರ್.ಅಶೋಕ್ ಹೇಳಿದ್ದರು.

ಮಗಳ ಮದುವೆ ಜವಾಬ್ದಾರಿ ಹೊತ್ತ ದರ್ಶನ್
ಬುಲೆಟ್ ಪ್ರಕಾಶ್ ಅವರ ಮಗಳ ಮದುವೆ ಜವಾಬ್ದಾರಿಯನ್ನು ನಟ ದರ್ಶನ್ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ನಟ ದುನಿಯಾ ವಿಜಯ್, ಪ್ರೇಮ್, ಸಾಧುಕೋಕಿಲಾ ಇನ್ನಿತರ ನಟರು, ಬುಲೆಟ್ ಪ್ರಕಾಶ್ ಗೆಳೆಯರು ಹಲವು ರೀತಿಯ ಸಹಾಯಗಳನ್ನು ಮಾಡಿದ್ದಾರೆ.


Click it and Unblock the Notifications











