ಅಂದು ತರ್ಕ, ಉತ್ಕರ್ಷ, ನಿಷ್ಕರ್ಷ...ಇಂದು ಉದ್ಘರ್ಷ
ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಸುನೀಲ್ ಕುಮಾರ್ ದೇಸಾಯಿ ಅವರು ಹೊಸ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.
ತರ್ಕ, ಉತ್ಕರ್ಷ, ನಿಷ್ಕರ್ಷ, ಸಂಘರ್ಷ, ಮರ್ಮ, ಕ್ಷಣ ಕ್ಷಣ ಮುಂತಾದ ಸೂಪರ್ ಹಿಟ್ ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಚಿತ್ರಗಳನ್ನು ಕನ್ನಡ ಬೆಳ್ಳಿತೆರೆ ಮೇಲೆ ತಂದಂಥ ಸುನೀಲ್ ಕುಮಾರ್ ದೇಸಾಯಿ, ಮತ್ತೆ 'ಉದ್ಘರ್ಷ' ಎಂಬ ಚಿತ್ರದ ಮೂಲಕ ಪ್ರೇಕ್ಷಕರನ್ನ ಸೀಟಿನಂಚಿನಲ್ಲಿ ಕೂರಿಸುವ ತವಕದಲ್ಲಿದ್ದಾರೆ.
ನಿರೀಕ್ಷೆಯಂತೆ 'ಉದ್ಘರ್ಷ' ಸಸ್ಪೆನ್ಸ್-ಥ್ರಿಲ್ಲರ್-ಆಕ್ಷನ್ ಎಲ್ಲ ಅಂಶಗಳನ್ನ ಒಳಗೊಂಡಿರುವ ಚಿತ್ರವಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ನೀಡಿದೆ.

'ಉದ್ಘರ್ಷ' ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತೆಲಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿರುವ ಸುನೀಲ್ ಕುಮಾರ್ ದೆಸಾಯಿ, ಅದಕ್ಕೆ ಪೂರಕವಾದ ನಟ-ನಟಿಯರನ್ನೇ ಈ ಚಿತ್ರದಲ್ಲಿ ಹಾಕಿಕೊಂಡಿದ್ದಾರೆ.
ಈಗಾಗಲೇ ಬಹುಭಾಷಾ ನಟನಾಗಿ ಮಿಂಚುತ್ತಿರುವ ಮಿಸ್ಟರ್ ವರ್ಲ್ಡ್ ಸಿಂಗಮ್ -3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್, 'ಕಬಾಲಿ' ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಕಿಶೋರ್, ವಂಶಿಕೃಷ್ಣ, ಶ್ರವಣ್ ರಾಘವೇಂದ್ರ, ಶ್ರದ್ಧಾ ದಾಸ್, ಮತ್ತು ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಸೇರಿದಂತೆ ಬಹುದೊಡ್ಡ ತಾರಾಗಣವನ್ನ ಒಳಗೊಂಡಿದೆ.

ಈ ಚಿತ್ರವನ್ನು ಡಿ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ .R ನಿರ್ಮಿಸುತ್ತಿದ್ದು, ಅವರ ಮಿತ್ರರಾದ ಮಂಜುನಾಥ್ .ಡಿ , ತಿರುಮಲೈ , ರಾಜೇಂದ್ರ ಕುಮಾರ್ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ.
ಚಿತ್ರದ ಕಥಾವಸ್ತು ವಿಭಿನ್ನವಾಗಿದ್ದು ಅದಕ್ಕೆ M.S ಧೋನಿ , ಬೇಬೀ, ಏ ವೆಡ್ನೆಸ್ಡೇ ಖ್ಯಾತಿಯ ಸಂಜೋಯ್ ಚೌದುರಿ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವರ್ಧನ್ ಹಾಗೂ P.ರಾಜನ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರಕ್ಕೆ B.S ಕೆಂಪರಾಜು ಅವರು ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಚಲನಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಾಹಸ ನಿರ್ದೇಶಕ ರವಿವರ್ಮ ಸಾಹಸ ದೃಶ್ಯಗಳನ್ನು ಸಂಯೋಜಿಸಲಿದ್ದಾರೆ. ಒಟ್ಟಾರೆ, ಬಾಕಿ ಇರುವ ಕೆಲಸಗಳನ್ನ ಮುಗಿಸಿ ಆದಷ್ಟೂ ಬೇಗ ತೆರೆಮೇಲೆ ಬರಲಿದೆ.


Click it and Unblock the Notifications











