ಫಿಲಂ ಸಿಟಿ ನಿರ್ಮಾಣ ಆರಂಭಿಸಿದ ಉಮಾಪತಿ: ಬಂಡವಾಳ ಎಷ್ಟು ಗೊತ್ತೆ?
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಭಾರಿ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ತಾವು ಮಾತಿಗೆ ತಪ್ಪುವವರಲ್ಲ ಹೇಳಿದ್ದನ್ನು ಮಾಡುವವರು ಎಂದು ಸಾಬೀತು ಮಾಡಿದ್ದಾರೆ.
ಈ ಹಿಂದೆ ಒಮ್ಮೆ ತಾವು ಕರ್ನಾಟಕದಲ್ಲಿ ಫಿಲಂ ಸಿಟಿ ಪ್ರಾರಂಭಿಸುವ ಇಚ್ಛೆ ಹೊಂದಿರುವುದಾಗಿ ಹೇಳಿದ್ದರು ಅಂತೆಯೇ ಇದೀಗ ಫಿಲಂ ಸಿಟಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿಯೇ ಬಿಟ್ಟಿದ್ದಾರೆ.
ಫಿಲಂ ಸಿಟಿಯೊಂದರ ನಿರ್ಮಾಣ ಸುಲಭದ್ದಲ್ಲ. ಅದಕ್ಕೆ ಬಹುದೊಡ್ಡ ಮೊತ್ತದ ಸ್ಥಳ, ಹಣ, ವೃತ್ತಿಪರ ಕೆಲಸಗಾರರು, ಸಮಯ, ಅದೃಷ್ಟ ಇನ್ನೂ ಹಲವು ವಿಷಯ ವಸ್ತುಗಳು ಒಟ್ಟಾಗಬೇಕಿರುತ್ತದೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಎಷ್ಟೋ ಮಂದಿ ಶ್ರೀಮಂತರು ಇದ್ದರೂ ಈವರೆಗೆ ಸೂಕ್ತವಾದ, ಸುಸಜ್ಜಿತವಾದ ಫಿಲಂ ಸಿಟಿ ನಿರ್ಮಾಣ ಮಾಡಿರಲಿಲ್ಲ. ಆದರೆ ಈಗ ಯುವ ಉದ್ಯಮಿ, ಉತ್ಸಾಹಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಫಿಲಂಸಿಟಿ ನಿರ್ಮಾಣಕ್ಕೆ ಕೈಹಾಕಿಯೇ ಬಿಟ್ಟಿದ್ದಾರೆ.
ಭೂಮಿಗೆ ಚಿನ್ನದ ಬೆಲೆ ಇರುವ ಬೆಂಗಳೂರು ಕನಕಪುರ ರಸ್ತೆಯಲ್ಲಿ 25 ಎಕರೆ ಪ್ರದೆಶದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಯೋಜನೆಯನ್ನು ಉಮಾಪತಿ ಶ್ರೀನಿವಾಸ್ ಹೊಂದಿದ್ದು, ಇಂದು ಕುಟುಂಬದವರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬೃಹತ್, ಅಧ್ಧೂರಿ, ಸಕಲ ಸೌಕರ್ಯೋಪೇತ, ಆಧುನಿತ ತಂತ್ರಜ್ಞಾನದಿಂದ ಕೂಡಿದ ಫಿಲಂಸಿಟಿ ಇದಾಗಿರಲಿದ್ದು, ಫಿಲಂ ಸಿಟಿಯು ರವಿಶಂಕರ್ ಗುರೂಜಿ ಆಶ್ರಮದ ಸಮೀಪ ಉತ್ರಿ ಎಂಬಲ್ಲಿ ತಲೆ ಎತ್ತಲಿದೆ. ಈ ಸ್ಥಳ ಬೆಂಗಳೂರು ಕನಕಪುರ ರಸ್ತೆಯಲ್ಲಿದೆ.

ದೊಡ್ಡ ಮೊತ್ತದ ಹೂಡಿಕೆ ಮಾಡುತ್ತಿರುವ ಉಮಾಪತಿ
25 ಎಕರೆ ವ್ಯಾಪ್ತಿಯ ಫಿಲಂ ಸಿಟಿ ನಿರ್ಮಾಣಕ್ಕೆ 175 ಕೋಟಿ ಬಂಡವಾಳವನ್ನು ಉಮಾಪತಿ ಶ್ರೀನಿವಾಸ್ ಗೌಡ ತೊಡಗಿಸುತ್ತಿದ್ದಾರೆ. ಕೇವಲ ಒಂದು ವರ್ಷದಲ್ಲಿ ಫಿಲಂ ಸಿಟಿ ನಿರ್ಮಾಣವನ್ನು ಪೂರ್ಣಗೊಳಿಸುವ ಯೋಜನೆಯನ್ನು ಹಾಕಿಕೊಂಡಿರುವ ಉಮಾಪತಿ ವಿದೇಶದಿಂದ ತಂತ್ರಜ್ಞರನ್ನು ಇದಕ್ಕಾಗಿ ಕರೆತರುತ್ತಿದ್ದಾರೆ. ಒಟ್ಟಿನಲ್ಲಿ ಬೃಹತ್ ಆಗಿಯೇ ಫಿಲಂ ಸಿಟಿ ನಿರ್ಮಾಣ ಮಾಡಲು ಉಮಾಪತಿ ಸಕಲ ತಯಾರಿ ಆರಂಭಿಸಿದ್ದಾರೆ.

ಬಂಡೆ ವ್ಯವಹಾರದಲ್ಲಿ ಉಮಾಪತಿ ಕುಟುಂಬದ ಪಾರಮ್ಯ
ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ವಲಯದ ನಿವಾಸಿ ಉಮಾಪತಿ. ಈಗ ಎಚ್ಎಸ್ಆರ್ ಲೇಔಟ್ನಲ್ಲಿ ವಾಸಿಸುತ್ತಿದ್ದಾರೆ. ಉಮಾಪತಿ ಕುಟುಂಬ ಮೊದಲಿನಿಂದಲೂ ಶ್ರೀಮಂತ ಕುಟುಂಬ. ಉಮಾಪತಿ ತಂದೆ ಶ್ರೀನಿವಾಸ್, ತಾತ ಎಲ್ಲರೂ ಪ್ರಭಾವಿ ವ್ಯಕ್ತಿಗಳಾಗಿದ್ದವರೇ. ಆಗಿನ ಸಮಯಕ್ಕೆ ಉಮಾಪತಿ ತಂದೆ ಉತ್ತಮ ಆಸ್ತಿ ಮಾಡಿದ್ದರು. ಬಂಡೆ ವ್ಯವಹಾರದಲ್ಲಿ ಉಮಾಪತಿ ಕುಟುಂಬದ್ದು ಪಾರಮ್ಯ. ಉಮಾಪತಿ ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾಕ್ಕೆ ಸಹ ನಿರ್ಮಾಣ ಮಾಡಿ ಉದ್ಯಮಕ್ಕೆ ಕಾಲಿಟ್ಟರು. ಉಮಾಪತಿ ನಿರ್ಮಿಸಿದ ಮೂರನೇ ಸಿನಿಮಾ ದರ್ಶನ್ ನಟನೆಯ 'ರಾಬರ್ಟ್'. ಎರಡನೇ ಸಿನಿಮಾ ಆಗಿ 'ಒಂದಲ್ಲಾ ಎರಡು' ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು.

'ಮದಗಜ' ಸಿನಿಮಾಕ್ಕೆ ಉಮಾಪತಿ ಬಂಡವಾಳ
ಇದೀಗ ನಟ ದರ್ಶನ್ ಜೊತೆ ಮುನಿಸಿನಲ್ಲಿರುವ ಉಮಾಪತಿ ಶ್ರೀನಿವಾಸ್ಗೌಡ ಪ್ರಸ್ತುತ ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ದರ್ಶನ್ ಜೊತೆಗೆ ಮತ್ತೊಂದು ಸಿನಿಮಾ ಮಾಡುವುದಾಗಿ ಈ ಹಿಂದೆ ಘೋಷಿಸಿದ್ದರು. ಆದರೆ ದರ್ಶನ್ ಜೊತೆಗೆ ಸಂಬಂಧ ಈಗ ಹಳಸಿದೆ. ದರ್ಶನ್ ವಿರೋಧ ಇದ್ದರೂ ಸಹ ಯಾವುದೇ ಅಳುಕಿಲ್ಲದೆ ಉಮಾಪತಿ ಮುಂದಡಿ ಇಡುತ್ತಿದ್ದಾರೆ. ಉಮಾಪತಿ ಫಿಲಂಸಿಟಿ ನಿರ್ಮಾಣ ಮಾಡಿದರೆ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಒಳಿತಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ ಉಮಾಪತಿಗೂ ದೊಡ್ಡ ಆದಾಯದ ಮೂಲವಾಗಲಿದೆ ಫಿಲಂ ಸಿಟಿ.

ದರ್ಶನ್-ಉಮಾಪತಿ ನಡುವೆ ಹಳಸಿದ ಸಂಬಂಧ
ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಆತ್ಮೀಯರಾಗಿದ್ದರು, ಆದರೆ ಅರುಣ ಕುಮಾರಿ ಎಂಬ ಮಹಿಳೆಯು ಉಮಾಪತಿಗೆ, ''ದರ್ಶನ್ ಹಾಗೂ ನಿಮ್ಮ ಹೆಸರಲ್ಲಿ ಕೆಲವರು 25 ಕೋಟಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ'' ಎಂದು ಹೇಳಿದ್ದಳು. ಇದನ್ನು ಉಮಾಪತಿ, ದರ್ಶನ್ಗೆ ಹೇಳಿದ್ದರು. ಇದನ್ನು ತಪ್ಪಾಗಿ ಗ್ರಹಿಸಿದ ದರ್ಶನ್, ಉಮಾಪತಿಯೇ ಉದ್ದೇಶಪೂರ್ವಕವಾಗಿ ತಮ್ಮ ಮೈಸೂರಿನ ಗೆಳೆಯರ ಮೇಲೆ ತಪ್ಪು ಅಭಿಪ್ರಾಯ ಮೂಡಲು ಅರುಣಾ ಕುಮಾರಿಯನ್ನು ಬಳಸಿ ಹೀಗೆ ಷಡ್ಯಂತ್ರ ನಡೆಸಿದ್ದಾರೆ ಎಂದು ಕೊಂಡು ಉಮಾಪತಿ ವಿರುದ್ಧ ಹೇಳಿಕೆ ನೀಡಿದರು. ನಂತರ ಉಮಾಪತಿ ಪ್ರತಿದೂರು ದಾಖಲಿಸಿ ಸುದ್ದಿಗೋಷ್ಠಿ ನಡೆಸಿದ ಮೇಲೆ ದರ್ಶನ್, ಉಮಾಪತಿ ನಡುವೆ ಮುನಿಸು ತಿಳಿಯಾಯಿತು. ಆದರೆ ನಂತರ ದೊಡ್ಮನೆ ಆಸ್ತಿಯನ್ನು ದರ್ಶನ್ ತಮಗೆ ಬೇಕೆಂದು ಕೇಳಿದ್ದ ವಿಷಯವನ್ನು ಬಹಿರಂಗಪಡಿಸಿದರು, ಇದು ದರ್ಶನ್ ಅವರನ್ನು ಕೆರಳಿಸಿ ಮತ್ತೆ ಉಮಾಪತಿ ವಿರುದ್ಧ ಹೇಳಿಕೆ ನೀಡಿದರು. ಪ್ರಸ್ತುತ ದರ್ಶನ್ ಹಾಗೂ ಉಮಾಪತಿ ಪರಸ್ಪರ ದೂರ-ದೂರ ಇದ್ದಾರೆ.


Click it and Unblock the Notifications











