ಅಂಬರೀಶ್ ಸ್ಥಾನ ಅಭಿಷೇಕ್ ತುಂಬಲಿ' - ಉಮಾಶ್ರೀ ಭಾವುಕ ಮಾತು
ರೆಬಲ್ ಸ್ಟಾರ್ ಅಂಬರೀಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿಯಾಗಿ ಅಂಬರೀಶ್ ಅವರಿಗೆ ನುಡಿ ನಮನ ಸಲ್ಲಿಸಿದರು.
ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಕೂಡ ಕಾರ್ಯಕ್ರಮದ ಭಾಗಿಯಾಗಿದ್ದರು. ಅಂಬರೀಶ್ ಅವರ ಸಿನಿಮಾ ಹಾಗೂ ರಾಜಕೀಯ ಜೀವನ ಎರಡನ್ನು ಬಲ್ಲ ಅವರು ಅಂಬಿಯ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡರು.
ದುಃಖದಲ್ಲಿ ಇರುವ ಅಂಬರೀಶ್ ಕುಟುಂಬಕ್ಕೆ ಧೈರ್ಯ ತುಂಬಿದ ಅವರು 'ಅಂಬರೀಶ್ ಅವರ ಸ್ಥಾನ ಅಭಿಷೇಕ್ ತುಂಬಲಿ' ಎಂದು ಆಶೀರ್ವಾದ ಮಾಡಿದರು. ಅಂದಹಾಗೆ, ಉಮಾಶ್ರೀ ಅವರ ಪೂರ್ಣ ಮಾತುಗಳು ಮುಂದಿವೆ ನೋಡಿ...

ಸದಾ ಉಳಿಯುವ ನೆನಪುಗಳು
''ಸಂಪೂರ್ಣ ಮನುಷ್ಯನಾಗಿ ಬದುಕಿ ಹೋದವರು ಅಂಬರೀಶ್. ಎಲ್ಲರ ರೀತಿ ಅವರ ಜೊತೆಗೂ ನಾನು ಸಿನಿಮಾ ಮಾಡಿದ್ದೇನೆ. ಆದರೆ, ಅವರು ಸದಾ ಉಳಿಯುವ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಪ್ರೀತಿ ಎಂದರೆ ಹೇಗಿರಬೇಕು, ಪ್ರೀತಿಸುವ ಬಗೆ ಏನು, ಶಾಶ್ವತವಾಗಿ ಪ್ರೀತಿ ಹೇಗೆ ಗಳಿಸಬೇಕು ಎನ್ನುವುದನ್ನು ಅವರ ಬದುಕಿನ ಮೂಲಕ ಕಂಡುಕೊಳ್ಳಬೇಕು.'' - ಉಮಾಶ್ರೀ, ನಟಿ, ಮಾಜಿ ಸಚಿವೆ

ಅವರಿದ್ದರೆ ಜಾಲಿ ಇರುತ್ತಿತ್ತು
''ದ್ವೇಷ, ಅಸೂಯೆ, ಪ್ರತಿಷ್ಟೆ ಇವು ಯಾವುದು ಬದುಕಿನಲ್ಲಿ ಮುಖ್ಯವಲ್ಲ ಎಂದು ತೋರಿಸಿಕೊಟ್ಟವರು ಅಂಬರೀಶ್. ನಾನು ಒಬ್ಬ ನಟ, ನಾನು ಬೇರೆಯವರಿಂದ ಅಂತರದಲ್ಲಿಯೇ ಇರಬೇಕು ಎನ್ನುವುದನ್ನು ಯಾವತ್ತು ಮಾಡಲಿಲ್ಲ. ಅವರ ಜೊತೆಗಿದ್ದರೆ ಜಾಲಿ ಇರುತ್ತಿತ್ತು.'' - ಉಮಾಶ್ರೀ, ನಟಿ, ಮಾಜಿ ಸಚಿವೆ

ಬಡವಳ ಮನೆ ಊಟ
''ಅಂಬರೀಶ್ ಬಡವ, ಶ್ರೀಮಂತ ಎಂಬ ಭೇದ ಇಲ್ಲದೆ ಇದ್ದವರು. ಅವರಿಗೆ ಎಲ್ಲರೂ ಸಮಾನರೆ. ಆಗ ನಾವು ಸಣ್ಣ ಕಲಾವಿದರಾಗಿದರೂ ಬಹಳ ಚೆನ್ನಾಗಿ ನಮ್ಮನ್ನು ಮಾತನಾಡಿಸುತ್ತಿದ್ದರು. ನಾನು ಸಣ್ಣ ಮನೆಯಲ್ಲಿ ಇದೆ, ನಮ್ಮ ಮನೆಗೆ ಬಂದು ಊಟ ಮಾಡಿದ್ದರು. ಸಚಿವ ಆದಗಲೂ ಆ ಊಟದ ಬಗ್ಗೆ ಹೇಳುತ್ತಿದ್ದರು.'' - ಉಮಾಶ್ರೀ, ನಟಿ, ಮಾಜಿ ಸಚಿವೆ

ಎಲ್ಲರಿಗೆ ಬಂಧುವಾಗಿದ್ದರು
''ಈ ರೀತಿಯ ಒಬ್ಬ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ಈ ರೀತಿಯ ಒಬ್ಬ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ನೋವಾಗುತ್ತಿದೆ. ಎಲ್ಲರಿಗೆ ಬಂಧುವಾಗಿ ಏನೇ ಆದರೂ ಬಂದು ನಿಂತುಕೊಳ್ಳುತ್ತಿದ್ದರು. ಇದು ನಮ್ಮ ಅಂಬರೀಶನಿಗೆ ಮಾತ್ರ ಸಾಧ್ಯ. - ಉಮಾಶ್ರೀ, ನಟಿ, ಮಾಜಿ ಸಚಿವೆ

ಅವಮಾನ ನೋವು ದುಃಖ ಎಲ್ಲವೂ ಇತ್ತು
''ಅವರಿಗೆ ಅವಮಾನ, ನೋವು ದುಃಖ ಎಲ್ಲವೂ ಇತ್ತು. ಆದರೆ, ಅವುಗಳನ್ನು ಅಂಬರೀಶ್ ಸುಲಭವಾಗಿ ತೆಗೆದುಕೊಳ್ಳುತ್ತಿದ್ದರು. ಬದುಕನ್ನು ಸಹಜವಾಗಿ ನಿರ್ವಹಿಸಿದರು. ಹೀಗೆ ಬದುಕಿ ಎಂಬ ಪಾಠವನ್ನು ನಮಗೆ ತಿಳಿಸಿ ಹೋಗಿದ್ದಾರೆ.'' - ಉಮಾಶ್ರೀ, ನಟಿ, ಮಾಜಿ ಸಚಿವೆ

ಅಪ್ಪನ ಸ್ಥಾನ ಅಲಂಕಾರ ಮಾಡಲಿ
''ಅಂಬರೀಶ್ ಅಂಬರದ ಎತ್ತರಕ್ಕೆ ಬೆಳೆದಿದ್ದಾರೆ. ಸುಮಲತಾ ಅವರ ಜೊತೆಗೆ ಯಾವಾಗಲು ಅಂಬರೀಶ್ ಇರುತ್ತಾರೆ. ಅಭಿಷೇಕ್ ಚಿತ್ರರಂಗಕ್ಕೆ ಬಂದಿದ್ದಾನೆ. ಅವರಿಗೆ ಒಳ್ಳೆಯದಾಗಲಿ. ಅಪ್ಪನ ಸ್ಥಾನವನ್ನ ಅವನು ಅಲಂಕಾರ ಮಾಡಲಿ. ಆ ಪುಣ್ಯವಂತನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬೆಳಯಲಿ.'' - ಉಮಾಶ್ರೀ, ನಟಿ, ಮಾಜಿ ಸಚಿವೆ


Click it and Unblock the Notifications











