'ವೀಕೆಂಡ್ ವಿತ್ ರಮೇಶ್'ನಲ್ಲಿ ಬಹಿರಂಗವಾಗದ ರಾಘಣ್ಣನ ಇನ್ನೊಂದು ಮುಖ ಇದು
Recommended Video
ಏಪ್ರಿಲ್ 28 ಮತ್ತು 29 ರಂದು ಶನಿವಾರ ಮತ್ತು ಭಾನುವಾರ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಬಹಳಷ್ಟು ಜನಕ್ಕೆ ರಾಘಣ್ಣ ಅವರ ಬಗ್ಗೆ ತಿಳಿಯದ ವಿಚಾರಗಳನ್ನು ಇಲ್ಲಿ ಚರ್ಚಿಸಲಾಯಿತು. ರಾಘಣ್ಣನವರ ಅಂತರಂಗ ಮನಮುಟ್ಟುವಂತಿತ್ತು.
ಆದ್ರೆ, ಕೆಲವು ವಿಚಾರಗಳು ಇಲ್ಲಿ ಪ್ರಸ್ತಾಪವಾಗಿಲ್ಲ. ಇಂತಹ ಘಟನೆಗಳ ಪೈಕಿ ಒಂದು ಸನ್ನಿವೇಶವನ್ನ ಲೇಖಕ ಹಾಗೂ ಪತ್ರಕರ್ತ ಜನಾರ್ಧನ್ ಸಾಳಂಕೆ ಅವರು ಹಂಚಿಕೊಂಡಿದ್ದಾರೆ. ಅವರೇ ವಿವರಿಸಿರುವಂತೆ ಆ ಘಟನೆಯನ್ನ ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಪರಶುರಾಮ್ ಮತ್ತು ಭವಾನಿ ಬಾಯಿ ಅವರ ಏಕಮಾತ್ರ ಪುತ್ರ ಅಕ್ಷಯ್ ರಾವ್ (18 ವರ್ಷ) ಕಿಡ್ನಿ ವೈಫಲ್ಯಕ್ಕೆ ತುತ್ತಾದ. ಈ ಹುಡುಗ ಆಗ ದ್ವೀತೀಯ ಪಿ.ಯು.ಸಿ ವಿದ್ಯಾರ್ಥಿ. ವೈದ್ಯರು ಎರಡು ವಿಚಾರಗಳನ್ನು ಮುಂದಿಟ್ಟರು. ಈತನಿಗೆ ಕಿಡ್ನಿ ದಾನಿಗಳು ಬೇಕು ಮತ್ತು ಶಸ್ತ್ರ ಚಿಕಿತ್ಸೆಗೆ ಸುಮಾರು 5 ಲಕ್ಷ ರೂಪಾಯಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಮುಂದೆ ಏನಾಯ್ತು? ಮುಂದೆ ಓದಿ....

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಆ ಕುಟುಂಬ
ಪ್ರತಿವಾರ ಡಯಾಲಿಸಿಸ್ ಸಹ ಮಾಡಿಸಬೇಕು, ಅದಕ್ಕೆ ಸುಮಾರು ಒಂದರಿಂದ ಎರಡು ಸಾವಿರ ವೆಚ್ಚ. ಅಕ್ಷಯನ ತಂದೆ ಆಟೋ ಚಾಲಕ ಮತ್ತು ತಾಯಿ ಅಲ್ಲಿ ಇಲ್ಲಿ ಮನೆಗೆಲಸ ಮಾಡುತ್ತಿದ್ದರು. ಇವರಿಗೆ ಇಷ್ಟೊಂದು ಹಣ ಸಂಗ್ರಹ ಮಾಡಲು ಸಾಧ್ಯವಾಗದ ಕೆಲಸ ಎಂದು ತಿಳಿಯಿತು. ದೇವರೇ ನಮಗೆ ನೀನೆ ದಿಕ್ಕು ಎಂದು ಭಾರ ಹಾಕಿದರು. ಈ ವಿಚಾರ ನನ್ನ ಮನದ ಮೇಲೆ ಗಾಢ ಪರಿಣಾಮ ಬೀರಿತು. ನನ್ನ ಕೈಲಾದ ಸಹಾಯವನ್ನು ಮಾಡಬೇಕೆಂದು ಕಂಡ ಕಂಡವರಲ್ಲಿ ಸಹಾಯಕ್ಕಾಗಿ ಬೇಡಿಕೊಂಡೆ. ಆದರೆ ಅತ್ಯಲ್ಪ ಹಣ ಸಂಗ್ರಹವಾಯಿತು.

ರಾಜ್ ಕುಟುಂಬದ ಸಹಾಯ ಕೇಳು ಎಂದು ಸಲಹೆ
ಹೀಗೆಯೇ ಯೋಚನೆ ಮಾಡುವಾಗ ಒಂದು ದಿನ ನನ್ನ ಸ್ನೇಹಿತ ಶ್ರೀನಿವಾಸ ರಾಜು "ಜನಾರ್ಧನ್ ಹೀಗೆ ಯೋಚನೆ ಮಾಡಿದರೆ ಏನು ಆಗುವುದಿಲ್ಲ. ಅಣ್ಣಾವ್ರ ಕುಟುಂಬದವರ ಸಹಾಯ ಏಕೆ ಪಡೆಯಬಾರದು" ಎಂದು ಹೇಳಿದನು. ನನಗೆ ಅದೇನೋ ಒಂದು ರೀತಿ ಸಂಕೋಚ ಮತ್ತು ಮುಜುಗರ. ಒಲ್ಲದ ಮನಸ್ಸಿನಿಂದ ಆತನೊಂದಿಗೆ ವಜ್ರೇಶ್ವರಿ ಕಂಬೈನ್ಸ್ ಗೆ ಭೇಟಿ ನೀಡಿದೆ. ಅದೂ ಸುಮಾರು ಬೆಳಗ್ಗೆ 9.30 ರ ಸಮಯ.

ಅಂದು ವಜ್ರೇಶ್ವರಿ ಕಚೇರಿ ಬಳಿ ಹೋದೆ
ಕಚೇರಿಯ ವ್ಯವಸ್ಥಾಪಕ ಉಮೇಶ್ ಅವರು "ರಾಘಣ್ಣ ಅವರು ಬರುವುದು ಇನ್ನು ಸ್ವಲ್ಪ ಸಮಯವಾಗುತ್ತದೆ. ಕುಳಿತುಕೊಳ್ಳಿ ಎಂದು ಹೇಳಿದರು. ಸುಮಾರು 10 ಗಂಟೆಗೆ ರಾಘಣ್ಣ ಬಂದರು. ಬಂದವರೇ ಡಾ.ರಾಜ್ ಮತ್ತು ಪಾರ್ವತಮ್ಮನವರ ಫೋಟೋಗೆ ನಮಸ್ಕರಿಸಿ ತಂದಿದ್ದ ಹೂಮಾಲೆಯನ್ನು ಅರ್ಪಿಸಿ ಧೀರ್ಘ ದಂಡ ನಮಸ್ಕಾರ ಮಾಡಿ ತನ್ನ ಕ್ಯಾಬಿನ್ ಗೆ ಹೋದರು. ಹತ್ತು ನಿಮಿಷದ ಬಳಿಕ ನನ್ನನು ಕರೆದು ಕೂಲಂಕುಷವಾಗಿ ವಿಚಾರಿಸಿದರು. ಆಸ್ಪತ್ರೆಯ ದಾಖಲೆಗಳ ಮೇಲೆ ಕಣ್ಣಾಡಿಸಿದರು.

ಒಂದು ವಾರದ ಬಳಿಕ ಬನ್ನಿ
ನಮಗೆ ಕಾಫಿ ವ್ಯವಸ್ಥೆ ಮಾಡಿಸಿದರು. "ಒಂದು ವಾರದ ಬಳಿಕ ನಾವು ನಿಮಗೆ ಫೋನ್ ಮಾಡುತ್ತೇವೆ" ಎಂದು ಹೇಳಿದರು. ಸರಿ ನನ್ನಂತಹ ಸಾವಿರಾರು ಜನ ಸಹಾಯಕ್ಕಾಗಿ ದಿನವೂ ಬರುತ್ತಾರೆ. ಆದರೆ ಎಲ್ಲರಿಗೂ ಸಹಾಯ ಮಾಡುವುದು ಕಷ್ಟ ಎಂದು ನೆನೆದು ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಹೊರಬಂದೆವು. ಸರಿಯಾಗಿ ಒಂದು ವಾರದ ನಂತರ ನನ್ನ ಮೊಬೈಲ್ ಗೆ ವಜ್ರೇಶ್ವರಿ ಸಂಸ್ಥೆಯಿಂದ ಒಂದು ಕರೆ ಬಂದಿತು. ಆ ಕಡೆಯಿಂದ ಉಮೇಶ್ ಅವರು "ರಾಘಣ್ಣ ನಿಮ್ಮನ್ನ ನೋಡಬೇಕಂತೆ, ಕಚೇರಿಗೆ ನಾಳೆ ಬನ್ನಿ" ಎಂದು ಹೇಳಿದರು.

ಅಂದು ಆ ಖುಷಿ ಹೇಳಲು ಸಾಧ್ಯವಿಲ್ಲ
ಒಂದು ಕಡೆ ಖುಷಿ ಮತ್ತೊಂದು ಕಡೆ ಏನೋ ಗಾಬರಿ. ನಾನೇನಾದರೂ ಅಲ್ಲಿಗೆ ಹೋಗಿ ತಪ್ಪು ಮಾಡಿ ಬಿಟ್ಟೆನಾ ಎಂಬ ಆತಂಕ. ಸರಿ ಹೇಳಿದ ಸಮಯಕ್ಕೆ ವಜ್ರೇಶ್ವರಿ ತಲುಪಿದೆ. ರಾಘಣ್ಣನವರು ನನಗೆ ಅವರ ಕ್ಯಾಬಿನ್ ಗೆ ಕರೆದು ಫೈಲ್ ನಿಂದ ಒಂದು ಚೆಕ್ ತೆಗೆದು "ತಗೊಳ್ಳಿ ಇದನ್ನು ಅಕ್ಷಯ್ ಅವರ ಶಸ್ತ್ರ ಚಿಕಿತ್ಸೆಗೆ" ಎಂದು ಹೇಳಿ ನನಗೆ ಕೊಟ್ಟರು. ನನಗೆ ಎಂದು ಮಾತನಾಡಬೇಕೆಂದು ತಿಳಿಯಲಿಲ್ಲ. ನಾನೊಬ್ಬ ಸಾಮಾನ್ಯ ಲೇಖಕ. ನನ್ನ ವಿನಂತಿಗೆ ರಾಘಣ್ಣ ಮತ್ತು ಅಮ್ಮ ಪಾರ್ವತಮ್ಮನವರು ಸ್ಪಂದಿಸಿದ್ದರು.

ಶಿಕ್ಷಣಕ್ಕೂ ಸಹಾಯ ಮಾಡುವುದಾಗಿ ಹೇಳಿದ್ರು
ರಾಘಣ್ಣನವರ ಕಾಲು ಮುಟ್ಟಿ ನಮಸ್ಕರಿಸಿದೆ. "ಹಾಗೆಲ್ಲ ಮಾಡಬೇಡಿ, ಮೇಲೇಳಿ" ಎಂದು ಕುರ್ಚಿಯ ಮೇಲೆ ಕುಳ್ಳಿರಿಸಿ "ನೋಡಿ ಅಕ್ಷಯ್ ಚೆನ್ನಾಗಿ ಓದುವ ಹುಡುಗ. ಆತನ ವಿದ್ಯಾಭ್ಯಾಸಕ್ಕೆ ಬೇಕಾಗುವ ಶಾಲಾ ಪ್ರವೇಶ ಖರ್ಚು (ಅಡ್ಮಿಶನ್), ಪುಸ್ತಕಗಳು ಮತ್ತು ಫೀಸ್ ಗೆ ನಾವು ಸಹಾಯ ಮಾಡುತ್ತೇವೆ. ಚಿಂತಿಸಬೇಡಿ ಎಂದು ಹೇಳಿದರು. ಎಲ್ಲರ ಆಶೀರ್ವಾದಂತೆ ಅಕ್ಷಯ ಅವರ ತಾಯಿ ತಮ್ಮ ಒಂದು ಕಿಡ್ನಿ ಮಗನಿಗಾಗಿ ಅರ್ಪಿಸಿದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು. ಅಂದು ರಾಘಣ್ಣ ಅವರು ಆಡಿದ ಆತ್ಮ ಸ್ಥೈರ್ಯದ ಮಾತುಗಳು ನಮ್ಮಲ್ಲಿ ಧೈರ್ಯ ತಂದಿತ್ತು.

ಪ್ರಚಾರ ಬಯಸಲ್ಲ, ಇಂತಹ ಕೆಲಸ ಹೆಚ್ಚು ಆಗಿದೆ
ಅಂದು ದೇವರೇ ನಮಗೆ ವರಕೊಟ್ಟಂತೆ ಭಾಸವಾಯಿತು. ಡಾ.ರಾಜ್ ದಂಪತಿಗಳು ಮತ್ತು ಕುಟುಂಬದರ ಸಹಾಯ ಇಂದಿಗೂ ಮರೆಯಲು ಸಾಧ್ಯವಿಲ್ಲ. ಕೆಲವರು ಅಣ್ಣಾವ್ರ ಕುಟುಂಬ ಚಿತ್ರ ನಟನೆ ಮತ್ತು ನಿರ್ಮಾಣ ಬಿಟ್ಟು ಬೇರೆ ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಆದರೆ ಸಾವಿರಾರು ಜನಕ್ಕೆ ಅಣ್ಣಾವ್ರ ಕುಟುಂಬ ಯಾರಿಗೂ ತಿಳಿಯದಂತೆ ಸಹಾಯ ಮಾಡುತ್ತಿದೆ. ಮೈಸೂರಿನಲ್ಲಿ ನಡೆಸುತ್ತಿರುವ ಶಕ್ತಿಧಾಮ ಇದಕ್ಕೆ ಉತ್ತಮ ಸಾಕ್ಷಿ. ಆದರೆ ಅವರು ಪ್ರಚಾರಪ್ರಿಯರಲ್ಲ. ಟೀಕೆಗಳಿಗೆ ಆಯಸ್ಸು ಕಮ್ಮಿ. ಮಾಧ್ಯಮದಲ್ಲಿ ಈ ವಿಚಾರ ಹೇಳಿ ನಾವು ಏನೋ ಸಾಧಿಸಿದೆವು ಎಂದು ಹೇಳುತ್ತಿಲ್ಲ. ಆದರೆ ಇಂತಹ ಲೆಕ್ಕವಿಲ್ಲದಷ್ಟು ದಾನ ಧರ್ಮಗಳು ಡಾ.ರಾಜ್ ಕುಟುಂಬದವರು ಇಂದಿಗೂ ಮಾಡುತ್ತಿದ್ದಾರೆ. ಅಣ್ಣಾವ್ರನ್ನು ಪಡೆದ ನಾವುಗಳೇ ಧನ್ಯ.


Click it and Unblock the Notifications











