ವಿಕಲಚೇತನರಿಗೆ ಉಪೇಂದ್ರ ಕಲ್ಪನಾ ಹಾಡು ಅರ್ಪಣೆ
"ಈ ಹಾಡನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ಈ ವಿಕಲಚೇತನರನ್ನೆಲ್ಲಾ ದಕ್ಷಿಣ ಭಾರತದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರ ಸಾಮರ್ಥ್ಯಕ್ಕೆ ನಾನು ಮಾರಿಹೋಗಿದ್ದೇನೆ. ಇದುವರೆಗೂ ನಾನು ಕಂಡಂತಹ ಅತ್ಯಂತ ಬೆಸ್ಟ್ ಫರ್ಮಾಮೆನ್ಸ್ ಇದು" ಎಂದಿದ್ದಾರೆ ಉಪೇಂದ್ರ.
"ದೇವರು ಒಂದು ಕೊಟ್ಟು ಇನ್ನೊಂದು ಕಸಿದುಕೊಂಡಿರುತ್ತಾನೆ. ಅವನು ಏನನ್ನಾದರೂ ಕಸಿಕೊಂಡು ಹೋಗಿದ್ದಾನೆ ಎಂದರೆ ವಿಶೇಷವಾದದ್ದನ್ನು ಏನಾದರೂ ಕೊಟ್ಟಿಯೇ ಇರುತ್ತಾನೆ. ಈ ಹಾಡನ್ನು ನೋಡಿದಾಗ ನಿಮಗೇ ಅರ್ಥವಾಗುತ್ತದೆ. ಈ ಹಾಡಿನ ಚಿತ್ರೀಕರಣದ ವೇಳೆ ಯಾರೂ ಮೇಲೂ ಅಲ್ಲ ಕೀಳೂ ಅಲ್ಲ ಎಂಬ ಅನುಭವ ನನಗಾಯಿತು" ಎಂದರು.
'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಳಿಕ ಉಪ್ಪಿ ಕೈಗೆತ್ತಿಕೊಂಡಿರುವ ಹಾರರ್ ಚಿತ್ರ ಇದಾಗಿದೆ. 'ಕಲ್ಪನಾ' ಚಿತ್ರಕ್ಕೆ ಒಳ್ಳೆಯ ಸಬ್ಜೆಕ್ಟ್ ಇರುವ ಕಾರಣ ಸಹಜವಾಗಿಯೇ ಕುತೂಹಲವಿದೆ. ಚಿತ್ರದ ತಾರಾಬಳದಲ್ಲಿ ಉಮಾಶ್ರೀ, ಸಾಯಿಕುಮಾರ್, ಅತ್ಯುತ ರಾವ್ ಅವರಂತಹ ಕಲಾವಿದರಿರುವುದು ಮತ್ತಷ್ಟು ಕುತೂಹಲ ಆಸಕ್ತಿಯನ್ನು ಕೆರಳಿಸಿದೆ.
ತಮಿಳು-ತೆಲುಗಿನಲ್ಲಿ ಜಯಭೇರಿ ಬಾರಿಸಿದ್ದ 'ಕಾಂಚನಾ' ಚಿತ್ರವೇ ಕನ್ನಡ 'ಕಲ್ಪನಾ'. 'ಕಾಂಚನಾ' ಚಿತ್ರಕ್ಕೆ ರಾಘವ ಲಾರೆನ್ಸ್ ಆಕ್ಷನ್ ಕಟ್ ಹೇಳಿದ್ದರು. ಬೆಳಗಾವಿ ಬಾಲೆ ಲಕ್ಷ್ಮಿ ರೈ ಅಲ್ಲಿ ನಾಯಕಿಯಾಗಿದ್ದರು. ಕನ್ನಡದಲ್ಲೂ ಲಕ್ಷ್ಮಿ ರೈ ಅವರೇ ನಾಯಕಿ. ಆಕ್ಷನ್ ಕಟ್ ಹೇಳುತ್ತಿರುವುದು ಮಾತ್ರ ರಾಮ್ ನಾರಾಯಣ್.
ಕನ್ನಡ, ತಮಿಳು, ತೆಲುಗು ಹೀಗೆ 125ಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ಅನುಭವ ರಾಮ್ ನಾರಾಯಣ್ ಅವರದು. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಆಗಿ ಮೂಡಿಬಂದಿವೆ ಎಂಬ ಮಾತುಗಳು ಚಿತ್ರತಂಡದಿಂದ ಕೇಳಿಬರುತ್ತಿವೆ.
ಈ ಚಿತ್ರದಲ್ಲಿ ಮತ್ತೊಂದು ಆಕರ್ಷಣೆ ಸಾಯಿಕುಮಾರ್ ಪಾತ್ರ. ಪೊಲೀಸ್ ಪಾತ್ರಗಳಲ್ಲಿ ಮಿಂಚಿದ್ದ ಅವರಿಗೆ ಇಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ಖೋಜಾ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಇದೇ ಪಾತ್ರವನ್ನು ತಮಿಳಿನಲ್ಲಿ ಶರತ್ ಕುಮಾರ್ ಪೋಷಿಸಿದ್ದರು. ಅವರ ನಟನೆ ಭಾರೀ ಪ್ರಶಂಸೆಗೂ ಪಾತ್ರವಾಗಿತ್ತು. ಕನ್ನಡದಲ್ಲಿ ಸಾಯಿಕುಮಾರ್ ಪಾತ್ರವೂ ಅಷ್ಟೇ ಪವರ್ ಫುಲ್ ಆಗಿರುತ್ತದಂತೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












