ಕಠಾರಿವೀರ ಚಿತ್ರಕ್ಕೆ ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ
ಇಂದು (ಮೇ 10, 2012) ಬಿಡುಗಡೆಯಾಗಿರುವ ಕಠಾರಿವೀರ ಸುರಸುಂದರಾಂಗಿ ಚಿತ್ರಕ್ಕೆ ರಾಜ್ಯಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಗಾಂಧಿನಗರದ ಪ್ರಮುಖ ಚಿತ್ರಮಂದಿರ ನರ್ತಕಿಯಲ್ಲಿ ಈ ಮೊದಲು ಬಂದಿದ್ದ ಮಾಹಿತಿಯಂತೆ 3ಡಿ ವ್ಯವಸ್ಥೆ ಇರಲಿಲ್ಲ. ಬದಲಾಗಿ 2ಡಿ ನೋಡಲು ಪ್ರೇಕ್ಷಕರು ಒಪ್ಪದೇ ಗಲಾಟೆ ಮಾಡಿದ್ದರಿಂದ ಅಲ್ಲಿ ಮೊದಲ ಮೂರು ಶೋ ಕ್ಯಾನ್ಸಲ್ ಮಾಡಲಾಗಿದೆ.
ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಮೊದಲ ಶೋಗೆ ಚಿತ್ರಮಂದಿರಕ್ಕೆ ಜನಸಾಗರವೇ ಹರಿದುಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು, ಮಂಡ್ಯ, ಮೈಸೂರುಗಳಲ್ಲಿ ಕೂಡ ಚಿತ್ರಮಂದಿರಗಳು ಜನರಿಂದ ತುಂಬಿತುಳುಕುತ್ತಿವೆ. ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಲಕ್ಕಿ ಸ್ಟಾರ್ ರಮ್ಯಾ ನೋಡಲು, ಅದರಲ್ಲೂ ಮುಖ್ಯವಾಗಿ 3ಡಿ ಚಿತ್ರ ನೋಡಲು ಜನರು ತೀವ್ರ ಕುತೂಹಲ ತಾಳಿದ್ದಾರೆ.
ಮುನಿರತ್ನ ನಿರ್ಮಾಣದ ಈ ಕಠಾರಿವೀರ ಚಿತ್ರ ಈಗಾಗಲೇ ಸಾಕಷ್ಟು ವಿವಾದಗಳನ್ನು ಎದುರಿಸಿ ಬಿಡುಗಡೆಯಾಗಿದೆ. ಇನ್ನೂ ಕೂಡ ಕಥೆ ಕದ್ದ ಆರೋಪದಿಂದ ಮುಕ್ತವಾಗಿಲ್ಲ. ಮೇ 25 ರಂದು ಈ ಸಂಬಂಧ ಕೋರ್ಟ್ ತೀರ್ಮಾನ ಬರಲಿದೆ. ಆದರೆ ಚಿತ್ರವಂತೂ ಬಿಡುಗಡೆಯಾಗಿದೆ. ಉಪೇಂದ್ರ ಹಾಗೂ ರಮ್ಯಾ ಅಭಿಮಾನಿಗಳಿಗೆ ಚಿತ್ರಮಂದಿರಗಳು ಹಬ್ಬದ ತಾಣಗಳಾಗಿವೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











