ಮೈಸೂರಿನಲ್ಲಿ ಮೊದಲ ಪತ್ರಿಕಾಗೋಷ್ಠಿ ನಡೆಸಿ ಉಪೇಂದ್ರ ಹೇಳಿದ್ದೇನು.?
ನಟ ರಿಯಲ್ ಸ್ಟಾರ್ ಉಪೇಂದ್ರ ಇಂದು ತಮ್ಮ 'ಕೆ.ಪಿ.ಜೆ.ಪಿ' ಪಕ್ಷದ ಪತ್ರಿಕಾಗೋಷ್ಠಿಯನ್ನು ಮೈಸೂರಿನಲ್ಲಿ ನಡೆಸಿದರು. ವಿಶೇಷ ಅಂದರೆ 'ಕೆ.ಪಿ.ಜೆ.ಪಿ' ಪಕ್ಷ ಸ್ಥಾಪನೆಯಾದಮೇಲೆ ಮೈಸೂರಿನಲ್ಲಿ ನಡೆದ ಮೊದಲ ಪತ್ರಿಕಾಗೋಷ್ಠಿ ಇದಾಗಿತ್ತು.
ಪತ್ರಿಕಾಗೋಷ್ಠಿ ಮಾತನಾಡಿದ ಉಪೇಂದ್ರ ''ಪ್ರಜಾಕೀಯ ಪಕ್ಷ ಸ್ಥಾಪಿಸಿರುವೆ. ಇಚ್ಚೆಯುಳ್ಳವರು ನಮ್ಮೊಂದಿಗೆ ಕೈ ಜೋಡಿಸಲುಮುಕ್ತವಾಗಿಆಹ್ವಾನಿಸುತ್ತಿದ್ದೇನೆ. ದೇಶದಲ್ಲಿ ಇರುವ ಕೆಟ್ಟ ವ್ಯವಸ್ಥೆ ನೋಡಿಕೊಂಡು ಸುಮ್ಮನಿರಲಾಗದೆ, ರಾಜಕೀಯವನ್ನು ತಳಹದಿಯಿಂದಲೇ ಸಂಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಜಾಕೀಯದ 'ಕೆ.ಪಿ.ಜೆ.ಪಿ' ಪಕ್ಷ ಸ್ಥಾಪಿಸಿದ್ದೇವೆ'' ಎಂದು ಉಪೇಂದ್ರ ಹೇಳಿದರು.

ಜೊತೆಗೆ ''ನಮ್ಮದು ಕ್ಯಾಶ್ ಲೆಸ್ ರಾಜಕೀಯ ಪಕ್ಷ. ಇಲ್ಲಿ ಬರುವವರು ಮೊದಲು ನೇರವಾಗಿ ಜನರ ಮಧ್ಯೆ ಕೆಲಸ ಮಾಡಿರುವ ಅನುಭವವನ್ನು ಹೊಂದಿರಬೇಕು. ನಾನು ಮಾಡುವೇ ಎನ್ನುವುದು ರಾಜಕೀಯ, ಎಲ್ಲರೂ ಸೇರಿ ಮಾಡುವುದು ಪ್ರಜಾಕೀಯ. ರಾಜ್ಯ, ದೇಶದ ವಿಷಯದಲ್ಲಿ ತಾತ್ಸಾರ ಮಾಡಿದರೆ ಕೆಟ್ಟ ಸಮಾಜದೊಂದಿಗೆ ಬದುಕುವ ದೌರ್ಭಾಗ್ಯ ಬರುವುದು'' ಎಂದು ಎಚ್ಚರಿಸಿದರು.
''ಇತ್ತೀಚಿನ ದಿನಗಳಲ್ಲಿ ಬಹಿರಂಗ ಸಭೆಗಳಿಗೂ ಹೆಚ್ಚಿನ ಹಣ ನೀಡಿ ಸಾವಿರಾರು ಮಂದಿ ಜನರನ್ನು ಸೇರಿಸಿ ಭಾಷಣ ಮಾಡುವ ಕಾಲ ಬದಲಾಗಿದೆ. ದೇಶ ವಿದೇಶಗಳಲ್ಲಿ ಸಾಮಾಜಿಕ ಜಾಲತಾಣ, ಟಿವಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ವ್ಯವಸ್ಥೆಯನ್ನು ಕಾಣಬಹುದಾಗಿದೆ. ರಾಜಕೀಯದಲ್ಲಿ ಏನಾದರೂ ಬದಲಾವಣೆ ತರಬೇಕೆಂಬ ಆಶಯದೊಂದಿಗೆ ಈ ಕೆಲಸಕ್ಕೆ ಕೈ ಹಾಕಿದ್ದೇನೆ'' ಎಂದು ತಮ್ಮ ಕನಸಿನ ಪ್ರಜಾಕೀಯದ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು.


Click it and Unblock the Notifications











