ಉಪೇಂದ್ರ ಬ್ಯಾಟರಿ ಚಾರ್ಜ್ ಮಾಡುತ್ತಿದ್ದ ಡಾ.ರಾಜ್!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಸಂಜೆ (ನವೆಂಬರ್ 29) ನಡೆದ ಡಾ.ರಾಜ್ ಸ್ಮರಣಾರ್ಥ ಅದ್ದೂರಿ ಮನರಂಜನಾ ಕಾರ್ಯಕ್ರಮದ ವೇದಿಕೆ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಯಿತು. ಕನ್ನಡ ಚಿತ್ರರಂಗದ ದಿಗ್ಗಜರು, ಹಿರಿಯ ನಟ-ನಟಿಯರು ಅಮರಜೀವಿಯ ನೆನಪಲ್ಲಿ ನೃತ್ಯ ಪ್ರದರ್ಶನ ನೀಡಿದರು.
ಹಿರಿಯ ನಟಿ ಲೀಲಾವತಿ, ಪ್ರಣಯರಾಜ ಶ್ರೀನಾಥ್, ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ, ಅರ್ಜುನ್ ಸರ್ಜಾ, ಗಣೇಶ್, ಯಶ್ ಹೀಗೆ ಒಬ್ಬೊಬ್ಬರು ಒಂದೊಂದು ಹಾಡಿಗೆ ವಿಭಿನ್ನವಾಗಿ ಹೆಜ್ಜೆ ಹಾಕಿದರು. ಅವರೆಲ್ಲರಿಗಿಂತ ಕೊಂಚ ಭಿನ್ನವಾಗಿ ಕಂಡಿದ್ದು, ರಿಯಲ್ ಸ್ಟಾರ್ ಉಪೇಂದ್ರ. [76ರ ವಯಸ್ಸಲ್ಲಿ 26ರ ಯುವತಿ 'ಲೀಲಾವತಿ']

ಇಲ್ಲಿವರೆಗೂ ಉಪೇಂದ್ರರವರನ್ನ ಚಿತ್ರವಿಚಿತ್ರ ಕಾಸ್ಟ್ಯೂಮ್ ಗಳಲ್ಲಿ ನೋಡಿರ್ತೀರಾ. ಅದಕ್ಕೆ 'ಉಪೇಂದ್ರ' ಚಿತ್ರವೇ ಉತ್ತಮ ಉದಾಹರಣೆ. ಆದ್ರೆ ಬಿಳಿ ಪಂಚೆ-ಶರ್ಟು ತೊಟ್ಟು ಸೀದಾ ಸಾದಾ ಉಡುಪಲ್ಲಿ ಉಪ್ಪಿಯನ್ನ ಎಂದಾದರೂ ಕಂಡಿದ್ದೀರಾ? ಇಲ್ಲಾಂದ್ರೆ ಅಣ್ಣಾವ್ರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ, ವೇದಿಕೆಯ ಮೇಲೆ ಉಪ್ಪಿ ಕಾಣಿಸಿಕೊಂಡಿರುವ ರೀತಿಯನ್ನ ಒಮ್ಮೆ ನೋಡಿ.
ಉಪ್ಪಿಯ ವೇಷಭೂಷಣ, ಹಾವಭಾವ ನೋಡ್ತಿದ್ರೆ ಥೇಟ್ ಅಣ್ಣಾವ್ರನ್ನೇ ನೆನಪಿಸುವಂತಿದೆ. ಹಾಗೆ ಅಣ್ಣಾವ್ರ ತರಹ ಬಿಳಿ ಪಂಚೆ-ಶರ್ಟು ತೊಟ್ಟು ಉಪ್ಪಿ, ವೇದಿಕೆ ಹತ್ತಿದ್ದು ರಾಜಣ್ಣನಿಗೆ ನಮನ ಸಲ್ಲಿಸುವುದಕ್ಕೆ.
ಈ ಹಿಂದೆ ಸುದ್ದಿಯಾಗಿದ್ದಂತೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ, ರಾಜ್ ಕುಮಾರ್ ರವರ ಹಾಡೊಂದಕ್ಕೆ ನೃತ್ಯ ಪ್ರದರ್ಶನ ನೀಡಬೇಕಿತ್ತು. ಆದ್ರೆ ಒಂದ್ಕಡೆ 'ಉಪ್ಪಿ-2' ಸಿನಿಮಾ, ಇನ್ನೊಂದ್ಕಡೆ 'ಶಿವಂ' ಆಡಿಯೋ ರಿಲೀಸ್. ಎರಡೆರಡು ಸಿನಿಮಾಗಳಲ್ಲಿ ಬಿಜಿಯಾಗಿದ್ದ ಉಪ್ಪಿ ನೃತ್ಯ ಮಾಡುವುದಕ್ಕೆ ಆಗಲಿಲ್ಲ. [ಅಮರಜೀವಿ ರಾಜ್ ಹಬ್ಬದಲ್ಲಿ ಕಿಚ್ಚ, ದಚ್ಚು ಮಾಡಿದ್ದೇನು?]

ಆದ್ರೆ ಅಣ್ಣಾವ್ರಿಗೆ ಹೃದಯಪೂರ್ವಕ ವಂದನೆಗಳನ್ನ ಸಲ್ಲಿಸುವ ಸಲುವಾಗಿ ಉಪ್ಪಿ 'ರಾಜಣ್ಣನ ಸ್ಪೆಷಲ್ ಕಾಸ್ಟ್ಯೂಮ್' ಹಾಕಿ ಸ್ಟೇಜ್ ಹತ್ತಿದ್ರು. ತಮ್ಮ ಏಳಿಗೆಗೆ ರಾಜಣ್ಣನೇ ಕಾರಣ ಅಂತ ಹೆಮ್ಮೆಯಿಂದ ಹೇಳುವ ಉಪ್ಪಿ, ಕಾರ್ಯಕ್ರಮದಲ್ಲಿ ರಾಜಣ್ಣನಿಗೆ 'ನುಡಿ'ನಮನವನ್ನು ಸಲ್ಲಿಸಿದರು.
''ನನಗೆ ರಾಜ್ ಕುಮಾರ್ ಅಂದ್ರೆ ಅಪಾರ ಅಭಿಮಾನ. ಅವರನ್ನ ನಾನು ನೋಡುವುದು ಯಾವಾಗ ಅಂತ ಅಂದುಕೊಳ್ಳುತ್ತಿದೆ. 'ಓಂ' ಚಿತ್ರ ನನಗೆ ಆ ಅವಕಾಶ ಮಾಡಿಕೊಡ್ತು. ನಾನು ಆಗ ಅವರ ಜೊತೆ ತುಂಬಾ ಸಮಯ ಕಳೆದೆ. ನಾನು ರಾಜ್ ಕುಮಾರ್ ಬ್ಯಾನರ್ ನಲ್ಲಿ ಕೆಲಸ ಮಾಡುತ್ತೀನಿ ಅಂತ ಅಂದುಕೊಂಡೇ ಇರಲಿಲ್ಲ. ಆದ್ರೆ 'ಓಂ' ಸಿನಿಮಾದಿಂದ ನನ್ನ ಅದೃಷ್ಟವೇ ಬದಲಾಗಿ ಹೋಯ್ತು.''
''ನನಗೆ ಬೇಜಾರಾದಾಗ ಅಪ್ಪಾಜಿಯ ಹತ್ತಿರ ಮಾತನಾಡುತ್ತಿದ್ದೆ. ನನ್ನ ಬ್ಯಾಟರಿಯನ್ನ ಚಾರ್ಜ್ ಮಾಡಿ ಕೊಡುತ್ತಿದ್ದರು ಅವರು. ಹತ್ತು ವರ್ಷಕ್ಕಾಗೋವಷ್ಟು ಒಮ್ಮೆಲ್ಲೆ ಚಾರ್ಜ್ ಮಾಡಿ ಹುಮ್ಮಸ್ಸನ್ನ ತುಂಬುವ ಅಪಾರ ಶಕ್ತಿ ಅಪ್ಪಾಜಿಗಿದೆ''.

''ಜೀವನದಲ್ಲಿ ಅವರಿಗೆ ಯಾವುದೇ ಆಸೆ ಇರ್ಲಿಲ್ಲ. ಒಂದು ಮನೆ ಕಟ್ಟಿಸಬೇಕು ಅಂತ ತುಂಬಾ ಆಸೆ ಪಡುತ್ತಿದ್ದರು. ಅದನ್ನ ಈಡೇರಿಸಿಕೊಂಡ ನಂತ್ರ ಅವರಿಗೆ ಬೇರೇನು ಬೇಕಾಗಿರಲಿಲ್ಲ. ಅಧಿಕಾರ, ಪದವಿ ಅನ್ನುವ ಬಗ್ಗೆ ಯಾವುದೇ ಆಸೆ ಇರಲಿಲ್ಲ. ಏನೂ ಬಯಸದೇ ಇದ್ದರೂ ಅವರ ಸರಳತೆಯಿಂದ ಎಲ್ಲವೂ ಪ್ರಾಪ್ತಿಯಾಯ್ತು. ಅಂತಹ ಮನುಷ್ಯ ಮತ್ತೊಮ್ಮೆ ಹುಟ್ಟಿಬರಲಾರ'' ಅಂತ ಉಪೇಂದ್ರ ರಾಜಣ್ಣನ ಬಗ್ಗೆ ಮನದಾಳದ ಮಾತುಗಳನ್ನಾಡಿದರು.
ರಾಜ್ ಹಾಡುಗಳಿಗೆ ಉಪ್ಪಿ ಡ್ಯಾನ್ಸ್ ಮಾಡಿದ್ರೆ, ಅಭಿಮಾನಿಗಳು ಎಷ್ಟು ಖುಷಿ ಪಡ್ತಿದ್ರೋ, ಅದಕ್ಕಿಂತ ದುಪ್ಪಟ್ಟು ಖುಷಿ ಉಪ್ಪಿಯ ಗೆಟ್ಟಪ್ಪನ್ನ ನೋಡಿ, ರಾಜ್ ಕುರಿತು ಅವರು ಆಡಿದ ಮಾತುಗಳನ್ನ ಕೇಳಿ ಪಟ್ಟರು. ಅದಕ್ಕೆ ಅಭಿಮಾನಿಗಳು ಹಾಕಿದ ಶಿಳ್ಳೆ-ಕೇಕೆ ಸಾಕ್ಷಿ. ಅದಕ್ಕೆ ಅಲ್ಲವೇ ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನುವುದು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











