ಮಾಜಿ ಗಂಡನ ಸುಪರ್ದಿಗೆ ಊರ್ವಶಿ ಎರಡನೇ ಪುತ್ರಿ
ತನ್ನ ಗಂಡ ಮನೋಜ್ ಕೆ ಜಯನ್ರಿಂದ ತಾರೆ ಊರ್ವಶಿ ವಿವಾಹ ವಿಚ್ಛೇದನ ಪಡೆದಿದ್ದರು. ಆದರೆ ತನ್ನ ಇಬ್ಬರು ಪುತ್ರಿಯರನ್ನು ಊರ್ವಶಿಯೇ ನೋಡಿಕೊಳ್ಳುತ್ತಿದ್ದರು. ಆದರೆ ಆಕೆಯ ಮಾಜಿ ಪತಿ ಮಕ್ಕಳನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಎರ್ನಾಕುಲಂ ಕೌಟುಂಬಿಕ ನ್ಯಾಯಾಲಯ ಕಿರಿಯ ಮಗಳನ್ನು ಜಯನ್ ಸುಪರ್ದಿಗೆ ಒಪ್ಪಿಸಬೇಕು ಎಂದು ಆದೇಶಿಸಿತ್ತು. ಕೋರ್ಟ್ನ ಆದೇಶದಂತೆ ತನ್ನ ಕಿರಿಯ ಪುತ್ರಿಯನ್ನು ಮಾಜಿ ಗಂಡನ ಸುಪರ್ದಿಗೆ ಊರ್ವಶಿ ಒಪ್ಪಿಸಿದ್ದಾರೆ.
ಇತ್ತೀಚೆಗೆ ಊರ್ವಶಿ ಚಿತ್ರ ನಿರ್ದೇಶನಕ್ಕೂ ಕೈಹಾಕಿದ್ದರು. ತಮ್ಮ 28 ವರ್ಷಗಳ ಸುದೀರ್ಘ ವೃತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಊರ್ವಶಿ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದರು. ಊರ್ವಶಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ತಮಿಳು ಭಾಷೆಯಲ್ಲಿ ಮೂಡಿಬರುತ್ತಿರುವುದು ವಿಶೇಷ.
ಊರ್ವಶಿ ಅವರ ಸಮಕಾಲೀನ ತಾರೆಯರಾದ ರೇವತಿ ಹಾಗೂ ಅಂಬಿಕಾ ಅವರು ಈಗಾಗಲೆ ಚಿತ್ರ ನಿರ್ದೇಶನದಲ್ಲಿ ಗುರುತಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹಗಳಲ್ಲಿ ಕಳೆದುಹೋಗಿದ್ದ ಊರ್ವಶಿ ಕೆಲ ಸಮಯದ ಹಿಂದಷ್ಟೇ ಫಾರ್ಮ್ಗೆ ಮರಳಿದ್ದರು.
ಚಿತ್ರರಂಗದಲ್ಲಿ ಮತ್ತೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವುದಾಗಿ ಊರ್ವಶಿ ತೀರ್ಮಾನಿಸಿದ್ದರು. ಈಗ ತನಗೆ ಕುಟುಂಬ ಸಮಸ್ಯೆಗಳೆಲ್ಲಾ ಅಷ್ಟಾಗಿ ಇಲ್ಲ ಎಂದಿದ್ದರು. ಆದರೆ ಈಗಿನ ಬೆಳವಣಿಗೆಯನ್ನು ನೋಡಿದರೆ ಅವರ ಕೌಟುಂಬಿಕ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಅನ್ನಿಸುತ್ತದೆ.
ಸದ್ಯಕ್ಕೆ 'ಲಕ್ಷ್ಮಿ ವಿಲಾಸಂ ಮಕನ್ ರಘುರಾಂ' ಎಂಬ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಊರ್ವಶ ಅಭಿನಯಿಸುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಂತೆ. ಇನ್ನು ಕನ್ನಡದ 'ಲಿಮಿಟ್' ಎಂಬ ಚಿತ್ರದಲ್ಲೂ ಊರ್ವಶಿ ಅಭಿನಯಿಸಿದ್ದಾರೆ. ಅನಂತನಾಗ್, ನಯನ ಹಾಗೂ ಅಕ್ಷಯ್ ಚಿತ್ರದ ತಾರಾಗಣದಲ್ಲಿದ್ದಾರೆ. ದಿನೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಯಾವಾಗ ತೆರೆ ಕಾಣುತ್ತದೋ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. (ಏಜೆನ್ಸೀಸ್)


Click it and Unblock the Notifications












