'ಸಲಾಮ್ ರಾಕಿ ಭಾಯ್' ಹಿಂದಿ ಸಾಹಿತ್ಯಕ್ಕೆ ವಿರೋಧ: ನಾಗೇಂದ್ರ ಪ್ರಸಾದ್ ಪ್ರತಿಕ್ರಿಯೆ
Recommended Video

ಕನ್ನಡದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ನ ಮೊದಲ ಹಾಡು ಲಿರಿಕಲ್ ರೂಪದಲ್ಲಿ ನಿನ್ನೆ ಬಿಡುಗಡೆಯಾಗಿದೆ. ಎಲ್ಲ ಭಾಷೆಯ ಅಭಿಮಾನಿಗಳು ಆದರದಿಂದ ಸ್ವಾಗತಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ಈ ಹಾಡಲ್ಲಿ 'ಕನ್ನಡ ಎಲ್ಲಿದೆ' ಎಂದು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಸಲಾಮ್ ರಾಕಿ ಭಾಯ್ .. ಎಂದು ಆರಂಭವಾಗುವ ಹಾಡಿನಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಹಿಂದಿ ಪದಗಳನ್ನು ಒಳಗೊಂಡಿದೆ. ಯಶ್ ಸಿನಿಮಾದ ಸಂಭಾಷಣೆಯಂತೆ ಮೊದಲೇ ಅವರನ್ನು ಕಂಡರೆ ಉರ್ಕೊಳ್ಳೋರು ಒಬ್ರಾ ಇಬ್ರಾ? ಹಾಗಾಗಿ ಅದೇ ಕಾರಣದಿಂದ ಹಾಡಿನ ಮೇಲೆ ಕೆಲವು ಅಭಿಮಾನಿಗಳು ಟಾರ್ಗೆಟ್ ಮಾಡಿದ್ದಾರೆ ಎಂದರೂ ಅಚ್ಚರಿಯಿಲ್ಲ.
ಇದೀಗ ಅವರ ನೇರ ಕೋಪ ಗೀತರಚನೆಕಾರ ಡಾ.ವಿ ನಾಗೇಂದ್ರ ಪ್ರಸಾದ್ ಅವರ ಮೇಲೆ ಬಿದ್ದಿದೆ. ಯಾಕಂದ್ರೆ, ಈ ಹಾಡನ್ನ ಬರೆದಿರುವುದು ಅವರೇ. ಈ ಬಗ್ಗೆ ನಾಗೇಂದ್ರ ಪ್ರಸಾದ್ ಅವರೇ ಫಿಲ್ಮೀಬೀಟ್ ಜೊತೆ ಮಾತನಾಡಿದ್ದು, ಹಾಡನ್ನ ಸಮರ್ಥಿಸಿಕೊಂಡಿದ್ದಾರೆ. ಮುಂದೆ ಓದಿ....

ಇದು ಕನ್ನಡ ಹಾಡೇ ಅಲ್ಲ..!
ಮೊದಲನೆಯದಾಗಿ ಇದು ಕನ್ನಡ ಹಾಡೇ ಅಲ್ಲ. ಕನ್ನಡ ಚಿತ್ರದ ಹಾಡು ನಿಜ, ಆದ್ರೆ ಹಿಂದಿಯ ವಾತಾವರಣದಲ್ಲಿ ಮೂಡಿರುವಂತ ಹಾಡು. ಹಾಗಾಗಿ ಹಿಂದಿ ಸಾಹಿತ್ಯ ಅನಿವಾರ್ಯವಾಗಿತ್ತು ಎನ್ನುವುದು ನಿರ್ದೇಶಕರ ಅಭಿಪ್ರಾಯ ಕೂಡ ಆಗಿತ್ತು.

ಮೊದಲು ಕನ್ನಡದಲ್ಲೇ ಬರೆದಿದ್ದೆ!
ನಿರ್ದೇಶಕರು ಹೇಳಿದ್ದ ಸಂದರ್ಭಕ್ಕೆ ಅನುಸಾರವಾಗಿ ನಾನು ಕನ್ನಡದಲ್ಲೇ ಗೀತೆ ರಚಿಸಿದ್ದೆ. ಆದರೆ ಪ್ರಶಾಂತ್ ನೀಲ್ ಅವರು ಇದು ಚಿತ್ರದ ಪ್ರದೇಶಕ್ಕೆ ಅನುಸಾರವಾಗಿ ಹಿಂದಿಯಲ್ಲೇ ಇದ್ದರೆ ಚೆನ್ನ ಎಂದು ಹೆಚ್ಚು ಹಿಂದಿ ಸಾಲುಗಳನ್ನು ಬಯಸಿದರು. ಹಾಗಾಗಿ ಬರೆದೆ. ಹಾಗಂತ ನಿರ್ದೇಶಕರ ಮೇಲೆ ಆರೋಪ ಮಾಡುತ್ತಿಲ್ಲ. ಚಿತ್ರಗೀತೆ ಎಂದರೆ ಹಾಗೆಯೇ. ಅದು ಚಿತ್ರಗಳಿಗೆ ಗೀತೆಯೇ ಹೊರತು ಅದರಿಂದ ಪ್ರತ್ಯೇಕಿಸಿ ಅಸ್ತಿತ್ವ ಹುಡುಕಲು ಪ್ರಯತ್ನಿಸಬಾರದು. ಜೊತೆಗೆ ಚಿತ್ರಕ್ಕೆ ಹೊಂದಿಕೊಂಡೇ ಹೊರಗಿನ ಶ್ರೋತೃಗಳಿಗೆ ಇಷ್ಟವಾಗುವಂತೆ ರಚಿಸಬೇಕಾಗುತ್ತದೆ. ನಾವು ಕನ್ನಡಿಗರಾಗಿದ್ದುಕೊಂಡು ಕನ್ನಡಕ್ಕೇ ಆದ್ಯತೆ ನೀಡುವವರು. ಅದಕ್ಕೆ ನಾನೇ ಬರೆದ ಎಷ್ಟೋ ಹಾಡುಗಳೇ ಉದಾಹರಣೆಗಳು.

ತಮಿಳಿನವರಂತೆ ನಮಗೆ ಹಿಂದಿ ದೂರ ಉಳಿದಿಲ್ಲ
ಇದೇ ಹಾಡಿನ ತಮಿಳು ವರ್ಶನ್ ನಲ್ಲಿ ಹಿಂದಿಯ ಬಳಕೆ ತುಂಬ ಕಡಿಮೆಯಿದೆ. ಆ ರೀತಿ ಬರೆಯಬಹುದಿತ್ತಲ್ಲ ಎನ್ನುವ ಆರೋಪ ಕೂಡ ಕೇಳಿದ್ದೇನೆ. ಆದರೆ ಅಲ್ಲಿನ ಪ್ರೇಕ್ಷಕರಿಗೆ ತಮಿಳಿನ ಅಭಿಮಾನದ ಜೊತೆಯಲ್ಲೇ ಹಿಂದಿ ಭಾಷೆಯ ಬಗ್ಗೆ ಅರಿವಿಲ್ಲದೇ ಹೋಗಿರುವುದು ಅದಕ್ಕೆ ಕಾರಣ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಯಾಕೆಂದರೆ ನಮ್ಮ ಮಂದಿ ಹಿಂದಿ ಅರ್ಥೈಸುವ ಹಾಗೆ ಅಲ್ಲಿನವರಿಗೆ ಅರ್ಥವಾಗುವುದಿಲ್ಲ.

ಇದು ಹೊಸತೇನೂ ಅಲ್ಲ
ನಮಗೆ ಕನ್ನಡದ ಐಕಾನ್ ಎಂದರೆ ಡಾ.ರಾಜ್ ಕುಮಾರ್. ಆದರೆ ಅವರೇ ಹಾಡಿರುವ "ಲವ್ ಮಿ ಆರ್ ಹೇಟ್ ಮಿ" ಅಥವಾ "ಇಫ್ ಯೂ ಕಮ್ ಟುಡೇ.." ಹಾಡುಗಳು ಸಂಪೂರ್ಣ ಆಂಗ್ಲದಲ್ಲಿವೆ. ನಲವತ್ತು ವರ್ಷಗಳ ಹಿಂದೆಯೇ ಪೂರ್ತಿ ಆಂಗ್ಲ ಹಾಡನ್ನು ಒಪ್ಪಿರುವ ನಮಗೆ ಪೂರ್ತಿ ಹಿಂದಿ ಹಾಡು ಕೂಡ ಒಪ್ಪಿಕೊಳ್ಳದಂಥದ್ದೇನೂ ಅಲ್ಲ ಎಂದು ನನ್ನ ಅನಿಸಿಕೆ.

ಸಹಕರ್ಮಿಗಳ ಬೆಂಬಲ
ಸಾಮಾಜಿಕ ಜಾಲತಾಣದ ವಾದವಿವಾದಗಳಿಗೆ ಅಲ್ಲೇ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಸಾಹಿತಿ ಕವಿರಾಜ್ ಮತ್ತು ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಮೊದಲಾದವರು ನಾಗೇಂದ್ರ ಪ್ರಸಾದ್ ಅವರಿಗೆ ಬೆಂಬಲ ನೀಡಿ ಪೋಸ್ಟ್ ಹಾಕಿದ್ದಾರೆ.


Click it and Unblock the Notifications











