ತಮಿಳು ನಟ ಸಿಂಬು ಮಾತಿಗೆ ವಾಟಾಳ್ ನಾಗರಾಜ್ ಕೊಟ್ಟ ಪ್ರತಿಕ್ರಿಯೆ ಹೀಗಿದೆ
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮತ್ತೆ ಕಾವೇರಿ ಕೂಗು ಹೆಚ್ಚಾಗಿದೆ. ತಮಿಳು ನಾಡಿನಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ಪ್ರತಿಭಟನೆ ನಡೆಯುತ್ತಿದೆ. ಮತ್ತೊಂದು ಕಡೆ ನಟ ಸಿಂಬು ಕಾವೇರಿ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ. ಇತ್ತ ಹಿರಿಯ ನಟ ಅನಂತ್ ನಾಗ್ ಕೂಡ ಕಾವೇರಿ ಹೋರಟಕ್ಕೆ ಟೊಂಕ ಕಟ್ಟಿ ನಿಂತಿದ್ದೇನೆ ಎಂದು ಘೋಷಿಸಿದ್ದಾರೆ.
ಪ್ರಮುಖವಾಗಿ ನಿನ್ನೆ ಸಿಂಬು ನೀಡಿದ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಈ ಹೇಳಿಕೆ ಕೇಳಿ ಕನ್ನಡದ ಜನರು ತುಂಬ ಖುಷಿ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಂಬು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನು ಸಿಂಬು ಕೊಟ್ಟ ಹೇಳಿಕೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಸಂತಸಗೊಂಡಿದ್ದಾರೆ.
ಅಂದಹಾಗೆ, ಸಿಂಬು ಹೇಳಿಕೆಯ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ ವಾಟಾಳ್ ನಾಗರಾಜ್ ಸಿಂಬು ಧೈರ್ಯವನ್ನು ಮೆಚ್ಚಬೇಕು ಎಂದಿದ್ದಾರೆ. ಮುಂದೆ ಓದಿ...

ಸಿಂಬು ಮಾತನ್ನು ಸ್ವಾಗತ ಮಾಡುತ್ತೇನೆ
''ನಾನು ಕೂಡ ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ನಟ ಸಿಂಬು ಅವರು ಹೇಳಿದ ಮಾತನ್ನು ಕೇಳಿದೆ. ಅವರ ಆ ಮಾತನ್ನು ನಾನು ಸ್ವಾಗತ ಮಾಡುತ್ತೇನೆ. ಕನ್ನಡಿಗರು ಮತ್ತು ತಮಿಳುನಾಡಿನವರು ಜಗಳ ಮಾಡದೆ ಒಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಅವರು ಹೇಳಿದ್ದಾರೆ . ಇದು ಒಳ್ಳೆಯ ಬೆಳವಣಿಗೆ.'' ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ.

ಸಿಂಬು ಧೈರ್ಯ ಮೆಚ್ಚಬೇಕು
''ನಟ ಸಿಂಬು ಅವರ ಮಾತು ಕೇಳಿ ತುಂಬ ಸಂತೋಷ ಆಯ್ತು. ತಮಿಳು ನಾಡಿನ ಯಾವ ನಟ ಕೂಡ ಆ ರೀತಿ ಮಾತಗಳನ್ನು ಹೇಳಿಲ್ಲ. ಸಿಂಬು ತುಂಬ ಧೈರ್ಯವಾಗಿ ಮಾತನಾಡಿದ್ದಾರೆ. ಅದನ್ನು ನಾವು ಮೆಚ್ಚಬೇಕು. ಅವರ ಮಾತು ಅದ್ಬುತವಾಗಿತ್ತು.'' ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ.

ಪ್ರೀತಿಯಿಂದ ನೀರು ಕೊಡಿ ಅಂತ ಕೇಳಬೇಕು
''ಬಹಳ ಹಿಂದೆ ಅನೇಕ ಬಾರಿ ಕರುಣಾನಿಧಿ ಕರ್ನಾಟಕಕ್ಕೆ ಬಂದು ಮಾತನಾಡಿದ್ದರು. ಮೊದಲ ಮಂಡಳಿ ರಚನೆ ಆದ ಮೇಲೆ ದ್ವೇಶ ಶುರು ಆಯ್ತು. ನಿರ್ವಾಹಣ ಮಂಡಳಿ ಮಾಡುವುದು ಬಿಡುವುದು ನಂತರ ವಿಷಯ. ಆದರೆ ಅದಕ್ಕೂ ಮುಂಚೆ ತಮಿಳು ನಾಡಿನ ಮುಖಂಡರು ಇಲ್ಲಿ ಬಂದು ಮಾತನಾಡಬೇಕು. ಪ್ರೀತಿಯಿಂದ ನೀರು ಕೊಡಿ ಅಂತ ಕೇಳಬೇಕು. ನಾವು ಬೇರೆಯಲ್ಲ ನೀವು ಬೇರೆಯಲ್ಲ ಅಂತ ಅವರು ಸಹ ಹೇಳಬೇಕು.'' ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ.

ನೀರಿನಲ್ಲಿ ರಾಜಕೀಯ ಮಾಡಬೇಡಿ
''ರಾಜಕೀಯ ಮಾಡಬೇಕು. ಆದರೆ, ಇದರಲ್ಲಿ ರಾಜಕೀಯ ಮಾಡಬಾರದು. ಕುಡಿಯುವ ನೀರಿನಲ್ಲಿ ರಾಜಕೀಯ ಮಾಡಿ ಅದರಲ್ಲಿ ತಮ್ಮ ರಾಜಕೀಯದ ಬದುಕನ್ನು ಬೆಳೆಸುವುದು ಒಳ್ಳೆಯದಲ್ಲ. ಕಾವೇರಿ ವಿಚಾರವಾಗಿ ನಾವು ಕೂಡ ಬಂದ್ ಮಾಡುವ ತಯಾರಿ ನಡೆಸಿದ್ವಿ. ಆದರೆ ಅದು ಮುಂದಕ್ಕೆ ಹೋಗಿದೆ. ಮೇ ಮೂರರ ನಂತರ ಬಂದ್ ಮಾಡುವ ಆಲೋಚನೆ ಇದೆ. - ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ.


Click it and Unblock the Notifications











