ಚಿರನಿದ್ರೆಗೆ 'ಗುಣಸಾಗರಿ' ಖ್ಯಾತಿಯ ರಾಜಸುಲೋಚನಾ

ಕಳೆದ ಕೆಲ ದಿನಗಳಿಂದ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ರಾತ್ರಿ ಪ್ರಶಾಂತವಾಗಿ ನಿದ್ರಿಸಿದ ಹಿರಿಯ ಜೀವ ಮುಂಜಾನೆ ವೇಳೆಗೆ ಚಿರನಿದ್ರೆಗೆ ಜಾರಿದೆ. ಅವರಿಗೆ 78 ವರ್ಷ ವಯಸ್ಸಾಗಿದ್ದು ಒಬ್ಬ ಪುತ್ರ ಶ್ಯಾಮ್ ಸುಂದರ್ ಹಾಗೂ ಶ್ರೀ ಮತ್ತು ದೇವಿ ಎಂಬಿಬ್ಬರು ಅವಳಿ ಜವಳಿ ಹೆಣ್ಣು ಮಕ್ಕಳಿದ್ದಾರೆ.
1953ರಲ್ಲಿ 'ಗುಣಸಾಗರಿ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದರು. ತೆಲುಗು, ತಮಿಳು ಸೇರಿದಂತೆ ಮಲಯಾಳಂ ಹಾಗೂ ಹಿಂದಿಯ ಸುಮಾರು 250 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
1961ರಿಂದ ಅವರು 'ಪುಷ್ಪಾಂಜಲಿ ನೃತ್ಯ ಕಲಾಕೇಂದ್ರಂ' ಎಂಬ ನೃತ್ಯ ತರಬೇತಿ ಶಾಲೆಯನ್ನೂ ನಡೆಸುತ್ತಿದ್ದರು. ಬಬ್ರುವಾಹನ, ಶ್ರೀಕಾಳಹಸ್ತಿ ಮಹಾತ್ಮೆ ಹಾಗೂ ತೋಡಿ ಕೋಡಳ್ಳು ಚಿತ್ರಗಳು ಅವರಿಗೆ ಹೆಸರು ಕೀರ್ತಿಯನ್ನು ತಂದುಕೊಟ್ಟಂತಹವು.
ಐವತ್ತು ಹಾಗೂ ಅರುವತ್ತರ ದಶಕದಲ್ಲಿ ರಾಜಸುಲೋಚನಾ ಅವರು ತಮ್ಮದೇ ಆದಂತಹ ಛಾಪು ಮೂಡಿಸಿದ್ದರು. ರಾಜ್ ಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿಗಣೇಶನ್, ಎನ್ ಟಿ ರಾಮರಾವ್ ಹಾಗೂ ನಾಗೇಶ್ವರ ರಾವ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ತೆಲುಗು ಚಿತ್ರರಂಗದ ನಿರ್ದೇಶಕ ಸಿಎಸ್ ರಾವ್ ಅವರನ್ನು ವರಿಸಿದ್ದ ರಾಜಸುಲೋಚನಾ ಅವರು ಕೂಚಿಪುಡಿ ಹಾಗೂ ಭರತನಾಟ್ಯ ಕಲಾ ಪ್ರಕಾರಗಳನ್ನು ಶಾಸ್ತ್ರೀಯವಾಗಿ ಕಲಿತಿದ್ದರು. ಹುಟ್ಟಿದ್ದು ಆಂಧ್ರಪ್ರದೇಶದ ವಿಜಯವಾಡದಲ್ಲಿ. ಬೆಳೆದದ್ದು ತಮಿಳುನಾಡಿನ ಚೆನ್ನೈನಲ್ಲಿ. (ಏಜೆನ್ಸೀಸ್)


Click it and Unblock the Notifications











