ಪಂಚಭೂತಗಳಲ್ಲಿ ಲೀನರಾದ 'ಮನ್ಮಥ ರಾಜ' ಕಾಶಿನಾಥ್
ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ತಮ್ಮ ಸಿನಿಮಾಗಳ ಮೂಲಕ ಹೊಸ 'ಅನುಭವ' ನೀಡಿದ ನಟ, ನಿರ್ದೇಶಕ ಕಾಶಿನಾಥ್ ರವರ ಅಂತ್ಯ ಸಂಸ್ಕಾರ ಇಂದು ಸಂಜೆ ಬೆಂಗಳೂರಿನ ಟಿ.ಆರ್.ಮಿಲ್ ನಲ್ಲಿ ನೆರವೇರಿತು.
ಕುಟುಂಬಸ್ಥರ ರೋಧನ, ಶೋಕತಪ್ತ ಸಾವಿರಾರು ಜನರ ಮಧ್ಯೆ ಮಾಧ್ವ ಸಂಪ್ರದಾಯದಂತೆ ಕಾಶಿನಾಥ್ ಅವರ ಅಂತ್ಯಕ್ರಿಯೆ ನಡೆಯಿತು. ಅಂತಿಮ ವಿಧಿ ವಿಧಾನಗಳನ್ನು ಪುತ್ರ ಅಭಿಮನ್ಯು (ಅಲೋಕ್) ನೆರವೇರಿಸಿದರು.
ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್
ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ಇಂದು ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಬೆಂಗಳೂರಿನ ಎನ್.ಆರ್.ಕಾಲೋನಿಯಲ್ಲಿರುವ ಎ.ಪಿ.ಎಸ್ ಕಾಲೇಜ್ ಗ್ರೌಂಡ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಿಯಲ್ ಸ್ಟಾರ್ ಉಪೇಂದ್ರ, ನಟ ಸುದೀಪ್, ನಟ ದರ್ಶನ್, ನಟ ಯಶ್, ನಟ ಶಿವರಾಜ್ ಕುಮಾರ್, ನಟಿ ಅಭಿನಯ, ಸಂಗೀತ ನಿರ್ದೇಶಕ ವಿ.ಮನೋಹರ್ ಸೇರಿದಂತೆ ಅನೇಕ ತಾರೆಯರು, ಸಾವಿರಾರು ಜನರು ಕಾಶಿನಾಥ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಸಂಜೆ 5.35 ರ ಸುಮಾರಿಗೆ ಕಾಶಿನಾಥ್ ಅವರ ಪಾರ್ಥೀವ ಶರೀರ ಜಯನಗರದ 3ನೇ ಬ್ಲಾಕ್ ನಲ್ಲಿರುವ ಅವರ ನಿವಾಸ ತಲುಪಿತು. ನಿವಾಸದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಕುಟುಂಬಸ್ಥರು ನೆರವೇರಿಸಿದ ಬಳಿಕ ಅಂತಿಮ ಯಾತ್ರೆ ಆರಂಭಗೊಂಡಿತು.
ಚಾಮರಾಜಪೇಟೆಯ ಟಿ.ಆರ್.ಮಿಲ್ ಬಳಿ ಇರುವ ರುದ್ರಭೂಮಿಯಲ್ಲಿ ಮಾಧ್ವ ಸಂಪ್ರದಾಯದಂತೆ ಕಾಶಿನಾಥ್ ಅವರ ಪಾರ್ಥೀವ ಶರೀರಕ್ಕೆ ಪುತ್ರ ಅಭಿಮನ್ಯು (ಅಲೋಕ್) ಪೂಜೆ ಪುನಸ್ಕಾರ ಸಲ್ಲಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಿದರು.


Click it and Unblock the Notifications