ರವಿಚಂದ್ರನ್, ಶೃತಿಗೆ ಪ್ರತಿಷ್ಠಿತ ಎನ್ ಟಿಆರ್ ಪ್ರಶಸ್ತಿ

ಪತ್ರಿಕಾಗೋಷ್ಠಿಯಲ್ಲಿ ತೆಲುಗು ಅಕಾಡೆಮಿಯ ಅಧ್ಯಕ್ಷ ಡಾ.ಎ.ರಾಧಾಕೃಷ್ಣರಾಜು ಮಾತನಾಡಿ, ಪ್ರತಿವರ್ಷ ತೆಲುಗಿನ ಖ್ಯಾತ ನಟ ಎನ್ ಟಿಆರ್ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ. ಕನ್ನಡ, ತೆಲುಗು ಭಾಷೆಗಳಲ್ಲಿ ಸೇವೆ ಸಲ್ಲಿಸಿರುವ ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಕ್ರೇಜಿ ಸ್ಟಾರ್ ರವಿಚಂದ್ರನ್, ಹಾಗೂ ನಟಿ ಶೃತಿ ಅವರಿಗೆ ಎನ್ಟಿಆರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್.23 ರಂದು ಸಂಜೆ 6 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಸಚಿವ ರಾಮಲಿಂಗಾರೆಡ್ಡಿ, ಶಾಸಕ ಎಂ.ಕೃಷ್ಣಪ್ಪ, ಮಾಜಿ ಸಚಿವ ಎಂ.ರಘುಪತಿ, ಶಾಸಕ ಗೋಪಾಲಯ್ಯ, ಮುಖಂಡ ಆರ್.ವಿ.ಹರೀಶ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಸಮಾರಂಭದ ವೇಳೆ 'ಗಾಯಕ ಘಂಟಸಾಲ ಗಾನಲಹರಿ ಸಂಗೀತ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ಸಾಲಿನಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿತ್ತು. ಇದಕ್ಕೂ ಮುನ್ನ ಜನಪ್ರಿಯ ನಟಿ ಉಮಾಶ್ರೀ ಹಾಗೂ ರಂಗಭೂಮಿಯ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ: 2009ನೇ ಸಾಲಿನ ಪ್ರತಿಷ್ಠಿತ ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ಅಭಿನೇತ್ರಿ ಡಾ.ಬಿ ಸರೋಜಾ ದೇವಿ ಅವರಿಗೆ ಸಂದಿದೆ. ಆಂಧ್ರಪ್ರದೇಶ ಸರ್ಕಾರ ನೀಡುವ ಈ ಪ್ರತಿಷ್ಠಿತ ಪುರಸ್ಕಾರವು ರು.5 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ. ಭಾರತೀಯ ಸಿನಿಮಾಗೆ ಸಲ್ಲಿಸಿರುವ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತಿದೆ. ನಂದಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್ ಟಿಆರ್ ಪ್ರಶಸ್ತಿ ಕೂಡಾ ನೀಡಲಾಗಿದೆ.
1996ರಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಿಗೆ ಮೊದಲ ಬಾರಿಗೆ ಈ ಪ್ರಶಸ್ತಿ ಲಭಿಸಿತ್ತು. ನಂತರ ದಿಲೀಪ್ ಕುಮಾರ್, ಶಿವಾಜಿ ಗಣೇಶನ್, ಲತಾ ಮಂಗೇಷ್ಕರ್, ಭಾನುಮತಿ, ಹೃಷಿಕೇಶ್ ಮುಖರ್ಜಿ, ಕೃಷ್ಣ, ಇಳಯರಾಜ, ನೂತನ್ ಹಾಗೂ ಅಂಬರೀಷ್, ವಹೀದಾ ರೆಹಮಾನ್, ದಾಸರಿ ನಾರಾಯಣ ರಾವ್, ಜಮುನಾ, ಬಿ. ಸರೋಜ ದೇವಿ, ಶಾರದಾ ಹಾಗೂ ಅಮಿತಾಬ್ ಬಚ್ಚನ್ ಅವರಿಗೆ ಸಂದಿದೆ.


Click it and Unblock the Notifications











