ಭೂಕಂಪ ಸಂತ್ರಸ್ತರ ನೆರವಿಗೆ ಧಾವಿಸಿ ಬಂದ 'ವಿಭಾ' ಟ್ರಸ್ಟ್
ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ 5,000 ಮಂದಿ ಮೃತಪಟ್ಟಿದ್ದು 80 ಲಕ್ಷ ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಬಂಧು ಬಾಂಧವರನ್ನು ಕಳೆದುಕೊಂಡವರು, ಆಸ್ತಿಪಾಸ್ತಿ ಕಳೆದುಕೊಂಡ ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದಾರೆ.
ಇವರೆಲ್ಲರಿಗೂ ನೆರವಾಗಲು ನಾನಾ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಪರಿಹಾರ ನಿಧಿಗಳನ್ನು ಸ್ಥಾಪಿಸಿ, ಸಂಗ್ರಹವಾದ ಹಣವನ್ನು ಅವರಿಗೆ ಹಸ್ತಾಂತರ ಮಾಡುವ ಕೆಲಸದಲ್ಲಿ ನಿರತವಾಗಿವೆ. ಪರಿಹಾರ ನಿಧಿಯನ್ನು ಸಂಗ್ರಹಿಸಲು ವಿಭಾ ಚಾರಿಟಬಲ್ ಟ್ರಸ್ಟ್ ಸಹ ಮುಂದಾಗಿದೆ. [ಭೂಕಂಪ ಸಂತ್ರಸ್ತರಿಗೆ ಕರ್ನಾಟಕ ನೆರವಿನ ಸುನಾಮಿ]

ನೇಪಾಳದಲ್ಲಿನ ಭೀಕರ ದುರಂತಕ್ಕೆ ಬಲಿಯಾದ ನಮ್ಮ ಸೋದರ, ಸೋದರಿಯರ ಕುಟುಂಬಕ್ಕೆ ಸಾಂತ್ವನ ಹೇಳುವ ನೈತಿಕ ಜವಬ್ದಾರಿ ನಮ್ಮ ಮೇಲಿದೆ ಎಂಬುದನ್ನರಿತು, ವಿಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿನಾಂಕ: 02.05.2015 ರ ಸಂಜೆ: 5.00 ಗಂಟೆಗೆ ಟೌನ್ ಹಾಲ್ (ಪುಟ್ಟಣ್ಣಚೆಟ್ಟಿ ಪುರಭವನ) ಮುಂಭಾಗದಲ್ಲಿ "ನೇಪಾಳ ಸಂತ್ರಸ್ಥರ ಪರಿಹಾರ ನಿಧಿ ಸಂಗ್ರಹ" ಕಾರ್ಯಕ್ರಮವನ್ನು ಡಾ.ಭಾರತಿ ವಿಷ್ಣುವರ್ಧನ ಮತ್ತು ಯುವ ಸಾಮ್ರಾಟ್ ಅನಿರುದ್ಧ ಅವರ ನೇತೃತ್ವದಲ್ಲಿ ಆಯೋಜಿಸಿದೆ.
ಈ ಮಹತ್ತರ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕೆಂಬುದು ಟ್ರಸ್ಟ್ ಅಪೇಕ್ಷೆಸಿದೆ. ರು.1000ಕ್ಕಿಂತ ಹೆಚ್ಚು ದೇಣಿಗೆಯನ್ನು ನೀವು ಕೊಡಲು ಬಯಸಿದರೆ ಚೆಕ್ ರೂಪದಲ್ಲಿ "ವಿಭಾ ಚಾರಿಟಬಲ್ ಟ್ರಸ್ಟ್ (ನೇಪಾಳ ರಿಲೀಫ್ ಫಂಡ್)" ಎಂಬ ಹೆಸರಿಗೆ ಕೊಡಬೇಕೆಂದು ವಿನಂತಿಸಿದೆ.
ರು.1000 ಕ್ಕೂ ಮೇಲ್ಪಟ್ಟ ಮೊತ್ತಕ್ಕೆ 'ತೆರಿಗೆ ರಿಯಾಯಿತಿ ಸೌಲಭ್ಯ" ಸಿಗುತ್ತದೆ. ಮಾನವೀಯತೆಯೇ ಮಹಾಧರ್ಮ ಎಂದು ನುಡಿದ, ನುಡಿದಂತೆ ಬದುಕಿದ ಡಾ.ವಿಷ್ಣುವರ್ಧನ ಅವರ ಮಾತಿಗೆ ಮತ್ತು ಬದುಕಿಗೆ ಸಾರ್ಥಕ್ಯ ಒದಗಿಸುವ ಸಂದರ್ಭವಿದು. ಈ ಮಹೋನ್ನತ ಕಾರ್ಯದಲ್ಲಿ ಭಾಗಿಯಾಗಲು ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











