ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡ ಹಲ್ಲೆಗೊಳಗಾಗಿದ್ದ ವಿದ್ವತ್
ವಿದ್ವತ್ ಮೇಲೆ ಹಲ್ಲೆ ಮಾಡಿದ್ದ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಗೆ ಇನ್ನು ಜಾಮೀನು ಸಿಕ್ಕಿಲ್ಲ. ತಿಂಗಳು ಕಳೆದರು ಬೇಲ್ ಸಿಗದೆ ಜೈಲಿನಲ್ಲೇ ಉಳಿಯುವಂತಾಗಿದೆ.
ಮತ್ತೊಂದೆಡೆ ವಿದ್ವತ್ ಆರಾಮಾಗಿ ಸ್ನೇಹಿತರ ಜೊತೆ ಸುತ್ತಾಡ್ತಿದ್ದಾರೆ. ಫೆಬ್ರವರಿ 17ನೇ ತಾರೀಖು ಯುಬಿ ಸಿಟಿಯಲ್ಲಿರುವ ಪಬ್ ವೊಂದರಲ್ಲಿ ನಲಪಾಡ್ ಮತ್ತು ಅವನ ಗ್ಯಾಂಗ್ ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಸೇರಿದ್ದರು.
ದಿನಗಳ ಕಳೆದರು ಗುಣಮುಖರಾಗದ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿತ್ತು. ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ತದನಂತರ ವಿದ್ವತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ, ಶೂಟಿಂಗ್ ಸೆಟ್ ನಲ್ಲಿ ಸ್ನೇಹಿತರ ಜೊತೆ ಕಾಣಿಸಿಕೊಂಡಿದ್ದಾರೆ.

ಹೌದು, ನಟ ವಿನಯ್ ರಾಜ್ ಕುಮಾರ್ ಅಭಿನಯದ 'ಅನಂತು ವರ್ಸಸ್ ನುಸ್ರತ್' ಚಿತ್ರದ ಚಿತ್ರೀಕರಣದ ವೇಳೆ ವಿದ್ವತ್ ಪ್ರತ್ಯಕ್ಷವಾಗಿದ್ದಾರೆ. ಹಲ್ಲೆಗೊಳಗಾಗುವುದಕ್ಕೂ ಮುಂಚೆ ಹೇಗಿದ್ದರೂ ಹಾಗೆ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ, ವಿದ್ವತ್ ಡಾ ರಾಜ್ ಕುಟುಂಬಕ್ಕೆ ತುಂಬಾ ಆತ್ಮೀಯರು. ಅಂದು ನಲಪಾಡ್ ಗ್ಯಾಂಗ್ ನಿಂದ ಹಲ್ಲೆಯಾಗಿದ್ದ ವೇಳೆ ಡಾ ರಾಜ್ ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ (ಗುರುರಾಜ್ ಕುಮಾರ್-ಹೆಸರು ಬದಲಾಗಿದೆ) ಸಹಾಯಕ್ಕೆ ಬಂದಿದ್ದರು.
ಇನ್ನುಳಿದಂತೆ 'ಅನಂತು ವರ್ಸಸ್ ನುಸ್ರತ್' ಚಿತ್ರವನ್ನ ಸುದೀರ್ ಶಾನಬಾಗ್ ಅವರ ನಿರ್ದೇಶನ ಮಾಡುತ್ತಿದ್ದು, ಲತಾ ಹೆಗ್ಡೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿನಯ್ ವಕೀಲನ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಇದೇ ವರ್ಷ ತೆರೆಗೆ ಬರಲಿದೆ.


Click it and Unblock the Notifications











