'ಎರಡು ಕನಸು' ಚಿತ್ರದ ನಿರ್ದೇಶಕ ಮದನ್ ಬಂಧನ
'ಎರಡು ಕನಸು' ಚಿತ್ರದ ಪ್ರಮೋಷನ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಪರಮೇಶ್ವರ್ ಎಂಬುವವರನ್ನು ನಿರ್ದೇಶಕ ಮದನ್ ರವರು ಕಿಡ್ನಾಪ್ ಮಾಡಿಸಿದ್ದಾರೆ ಎಂಬ ಆರೋಪದಡಿ ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ನಟ ವಿಜಯ ರಾಘವೇಂದ್ರ ಮತ್ತು ಕಾರುಣ್ಯ ರಾಮ್ ಅಭಿನಯದ 'ಎರಡು ಕನಸು' ಚಿತ್ರ ಕಳೆದ ಎರಡು ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಈ ಚಿತ್ರದ ಪ್ರಚಾರಕ್ಕಾಗಿ ಜಾಹೀರಾತು ನೀಡಲು ಪರಮೇಶ್ವರ್ ಎಂಬುವವರಿಗೆ ನಿರ್ದೇಶಕ ಮದನ್ 16.3 ಲಕ್ಷ ಹಣ ನೀಡಿದ್ದರು. ಆದರೆ ಚಿತ್ರದ ಪ್ರಚಾರ ಸರಿಯಾಗಿ ಆಗಿಲ್ಲ ಎಂದು ನಿರ್ದೇಶಕ ಮದನ್ 8 ಲಕ್ಷ ವಾಪಸ್ಸು ನೀಡುವಂತೆ ಪರಮೇಶ್ವರ್ ರಲ್ಲಿ ಬೇಡಿಕೆ ಇಟ್ಟಿದ್ದರು. ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಮದನ್ ತಮ್ಮ ಸ್ನೇಹಿತರ ಸಹಾಯದಿಂದ ನಾಲ್ಕು ದಿನಗಳ ಹಿಂದೆ ಪರಮೇಶ್ವರ್ ರನ್ನು ಕಿಡ್ನಾಪ್ ಮಾಡಿಸಿದ್ದರು ಎಂಬ ಆರೋಪದಡಿಯಲ್ಲಿ ಮದನ್ ರನ್ನು ಮಾಗಡಿ ಪೊಲೀಸರು ದೇವನಹಳ್ಳಿ ಬಳಿ ಬಂಧಿಸಿದ್ದಾರೆ.

ಮಾಗಡಿ ಪೊಲೀಸ್ ಠಾಣೆಗೆ ಪರಮೇಶ್ವರ್ ಅವರ ತಂದೆ-ತಾಯಿ ಮೂರು ದಿನಗಳಿಂದ ತಮ್ಮ ಮಗ ಮನೆಗೆ ಬರದ ಕಾರಣ ದೂರು ನೀಡಿದ್ದರು ಎಂದು ತಿಳಿಯಲಾಗಿದೆ.
ಅಂದಹಾಗೆ 'ಎರಡು ಕನಸು' ಚಿತ್ರದ ನಿರ್ದೇಶಕ ಮದನ್ ತಮ್ಮ ಮೊದಲ ಚಿತ್ರವೇ ಫ್ಲಾಪ್ ಆದ ಕಾರಣ ಖಿನ್ನತೆಗೆ ಒಳಗಾಗಿದ್ದರು. ಡಿಪ್ರೆಷನ್ ನಿಂದ ಸಿಕ್ಕ ಸಿಕ್ಕವರ ಜೊತೆ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ.


Click it and Unblock the Notifications











