ಜಯಂತಿ ಆರೋಗ್ಯದ ಬಗ್ಗೆ ವರದಿ ನೀಡಿದ ವೈದ್ಯರು
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಟಿ ಜಯಂತಿ ಆರೋಗ್ಯದ ಬಗ್ಗೆ ವಿಕ್ರಂ ಆಸ್ಪತ್ರೆ ವೈದ್ಯರು ವರದಿ ನೀಡಿದ್ದಾರೆ. ನಿನ್ನೆ ಸಂಜೆಯಿಂದಲೂ ಜಯಂತಿ ಅವರ ಬಗ್ಗೆ ಸುಳ್ಳು ವದಂತಿಗಳು ಹರಡುತ್ತಿತ್ತು. ಇದೇ ಉದ್ದೇಶದಿಂದ ಇಂದು ವೈದ್ಯರು ಪತ್ರಿಕಾಗೋಷ್ಠಿ ನಡೆಸಿ ಜಯಂತಿ ಅವರ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯ ಸತೀಶ್ ಕಳೆದ ಹಲವು ವರ್ಷಗಳಿಂದ ಜಯಂತಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಇಲ್ಲಿಯವರೆಗೂ ಅಂತಹ ಸಮಸ್ಯೆ ಎದುರಾಗಿಲ್ಲ. ಇಂತಹ ವಯಸ್ಸಿನಲ್ಲಿ ಉಸಿರಾಟದ ತೊಂದರೆಗಳು ಆಗುವುದು ಸಾಮಾನ್ಯ. ಶ್ವಾಸಕೋಶದ ಕ್ರಿಯೆ ಕಡಿಮೆ ಆದಾಗ ವೆಂಟಿಲೇಟರ್ ಅಗತ್ಯವಿರುತ್ತದೆ.

ಲಂಗ್ಸ್ ಚೆನ್ನಾಗಿ ಕೆಲಸ ಮಾಡುತ್ತಿದೆ, ಆಕ್ಷಿಜನ್ ಟೇಕ್ ಹೆಚ್ಚಾಗಿದೆ. ತಕ್ಷಣಕ್ಕೆ ವೆಂಟಿಲೇಟರ್ ತೆಗೆಯಲು ಸಾಧ್ಯವಿಲ್ಲ. ಇನ್ನು ಎರಡು ಗಂಟೆಗಳ ನಂತರ ವೆಂಟಿಲೇಟರ್ ತೆಗೆಯುವ ಪ್ರಯತ್ನವನ್ನು ಮಾಡುತ್ತೇವೆ ಎಂದರು. ಇನ್ನು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ಶಿವರಾಜ್ ಕುಮಾರ್, ಜಯಂತಿ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮದ ಮುಂದೆ ಮಾತನಾಡಿದ ಶಿವಣ್ಣ, ''ಈಗಷ್ಟೇ ವೆಂಟಿಲೇಟರ್ ತೆಗೆದಿದ್ದಾರೆ'' ಎಂದು ತಿಳಿಸಿದ್ದಾರೆ.
''ಜಯಂತಿ ಅವರು ಆರೋಗ್ಯವಾಗಿರುವುದು ತುಂಬಾ ಸಂತೋಷವಾಯಿತು, ಅವರು ತುಂಬಾ ಸ್ಟ್ರಾಂಗ್. 100 ವರ್ಷ ಬದುಕಿರುತ್ತಾರೆ. ನನ್ನನ್ನು ಶೂಟಿಂಗ್ ನಿಂದ ಈಗ ಬಂದ್ರಾ ಅಂತ ವಿಚಾರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಫ್ಯಾಮಿಲಿ ಎಮೋಷನ್ಸ್ ಗೆ ಹರ್ಟ್ ಮಾಡುವುದು ತಪ್ಪು'' ಎಂದರು ಶಿವಣ್ಣ.


Click it and Unblock the Notifications











