ವಿನಯ್ ರಾಜ್ ಕೈಹಿಡಿದ ಅಭಿಮಾನಿ ದೇವರುಗಳು
ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಪ್ರತಿ ವರ್ಷ ಅದೆಷ್ಟೋ ಮಂದಿ ಹೊಸಬರು ಬಣ್ಣಬಣ್ಣದ ಕನಸುಗಳೊಂದಿಗೆ ಕಾಲಿಡುತ್ತಾರೆ. ಆದರೆ ಇಲ್ಲಿ ಉಳಿಯುವುದು ಮಾತ್ರ ಕೇವಲ ಬೆರಳೆಣಿಕೆಯಷ್ಟು ಮಂದಿ. ಗಾಡ್ ಫಾದರ್, ಕುಟುಂಬದ ಹಿನ್ನೆಲೆ, ಆ ವಂಶ ಈ ವಂಶ ಎಂದು ಹೇಳಿಕೊಂಡು ಬಂದರೂ ಅಭಿಮಾನಿ ದೇವರುಗಳ ಕೃಪಾಕಟಾಕ್ಷ ಇಲ್ಲದಿದ್ದರೆ ಆಟ ನಡೆಯಲ್ಲ.
ರಾಘವೇಂದ್ರ ರಾಜ್ ಕುಮಾರ್ ಅವರ ಕುವರ, ರಾಜ್ ಕುಟುಂಬದ ಮೂರನೇ ತಲೆಮಾರಿನ ನಟ ವಿನಯ್ ರಾಜ್ ಕುಮಾರ್ ಅವರು ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಖಾತೆ ತೆರೆದಿದ್ದಾರೆ. ಅವರ 'ಸಿದ್ದಾರ್ಥ' ಚಿತ್ರಕ್ಕೆ ಎಲ್ಲೆಡೆಯಿಂದಲೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. [ಸಿದ್ದಾರ್ಥ ಚಿತ್ರ ವಿಮರ್ಶೆ]
"ನಮ್ಮ ತಾತ ಅಭಿಮಾನಿ ದೇವರುಗಳು ಎಂದು ಕರೆಯುತ್ತಿದ್ದರು. ಚಿಕ್ಕಂದಿನಲ್ಲಿ ನನಗೆ ಆ ದೇವರುಗಳ ಮಹತ್ವ, ಅವರೇಕೆ ಹಾಗೆ ಕರೆಯುತ್ತಿದ್ದರು ಎಂಬುದರ ಅರಿವಿರಲಿಲ್ಲ. ಈಗ ನನಗೆ ಅಭಿಮಾನಿ ದೇವರುಗಳೆಂದರೇನು ಎಂದು ಅರಿವಾಗುತ್ತಿದೆ" ಎನ್ನುತಿದ್ದಾರೆ ವಿನಯ್ ರಾಜ್ ಕುಮಾರ್.
ರಾಜ್ ಬ್ಯಾನರ್ ಚಿತ್ರಗಳೆಂದರೆ ಮನೆಮಂದಿಯಲ್ಲಾ ಕುಳಿತು ನೋಡುವಂತಿರುತ್ತವೆ. ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಂದಿರುವ 'ಸಿದ್ದಾರ್ಥ' ಚಿತ್ರವೂ ಇದಕ್ಕೆ ಹೊರತಲ್ಲ. ಮಿಲನ, ಖುಷಿ, ರಿಷಿ ಚಿತ್ರಗಳ ಖ್ಯಾತಿಯ ಪ್ರಕಾಶ್ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು.
ಇದು ಅಣ್ಣಾವ್ರ ಕುಟುಂಬದ ಕುಡಿಯ ಚಿತ್ರ ಎಂಬ ಹಮ್ಮುಬಿಮ್ಮಿಲ್ಲದೆ, ಚಿತ್ರಕ್ಕೆ ಹೆಚ್ಚಾಗಿ ಪ್ರಚಾರ ನೀಡದೆ ವಿನಯ್ ರಾಜ್ ಒಬ್ಬ ನವನಟ ಎಂಬಂತೆ ರಾಘವೇಂದ್ರ ರಾಜ್ ಕುಮಾರ್ ತಮ್ಮ ಪುತ್ರನ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಕೌಟುಂಬಿಕ ಕಥಾಹಂದರದ ಸಿಂಪಲ್ ಕಥೆ ಫ್ಯಾಮಿಲಿ ಆಡಿಯನ್ಸ್ ಹೃದಯ ಗೆದ್ದಿದೆ.
ಸರಿಸುಮಾರು 150 ಚಿತ್ರಮಂದಿರಗಳಲ್ಲಿ ತೆರೆಕಂಡಿರುವ 'ಸಿದ್ದಾರ್ಥ' ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ಚಿತ್ರದಲ್ಲೇ ವಿನಯ್ ರಾಜ್ ಕುಮಾರ್ ಅವರನ್ನು ಅಭಿಮಾನಿ ದೇವರುಗಳು ಕೈಹಿಡಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












