ಕಮಲ್ ಹಾಸನ್ ನಿರೀಕ್ಷೆಯ 'ವಿಶ್ವರೂಪಂ 2' ಈ ವಾರ ರಿಲೀಸ್
2013ರಲ್ಲಿ ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ' ಸಿನಿಮಾ ಬಿಡುಗಡೆಯಾಗಿತ್ತು. ಬಿಡುಗಡೆಗೂ ಮುಂಚೆ ಈ ಸಿನಿಮಾ ವಿವಾದದಿಂದಲೇ ಹೆಚ್ಚು ಸುದ್ದಿಯಾಗಿತ್ತು. ಈ ಚಿತ್ರದ ಮುಂದುವರೆದ ಭಾಗ ಸುಮಾರು 5 ವರ್ಷದ ನಂತರ ಈಗ ತೆರೆಕಾಣುತ್ತಿದೆ.
2013ರ 'ವಿಶ್ವರೂಪಂ' ಚಿತ್ರದಲ್ಲಿ ಮುಸ್ಲಿಂರನ್ನು ಭಯೋತ್ಪಾದಕರನ್ನಾಗಿ ತೋರಲಾಗಿದೆ ಎಂದು ಮುಸ್ಲಿಂ ಸಂಘಟನೆಗಳು ತಮಿಳುನಾಡಿನಲ್ಲಿ ದಂಗೆ ಎದ್ದಿದ್ದರು. ಆ ವೇಳೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ ಜಯಲಲಿತಾ ಅವರು ಈ ಚಿತ್ರದ ಬಿಡುಗಡೆಗೆ ನಿಷೇಧ ಹೇರಿದ್ದರು. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಕರುಣಾನಿಧಿ ಅವರು ಕಮಲ್ ಚಿತ್ರಕ್ಕೆ ಬೆಂಬಲ ನೀಡಿ ಬಿಡುಗಡೆಗೆ ನೆರವಾಗಿದ್ದರು.
ಹೀಗಾಗಿ, ಕರುಣಾನಿಧಿ ಅವರ ಜೊತೆಯಲ್ಲಿ ಕಮಲ್ ಹಾಸನ್ ಅವರಿಗೆ ಉತ್ತಮ ಬಾಂಧವ್ಯ ಇತ್ತು. ಆದ್ರೀಗ, ಕರುಣಾನಿಧಿ ವಿಧಿವಶರಾಗಿದ್ದಾರೆ. ಇಂತಹ ಸಮಯದಲ್ಲೇ ಸಿನಿಮಾ ರಿಲೀಸ್ ಆಗ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ಕರುಣಾನಿಧಿ ಸಾವು ಹಿನ್ನೆಲೆ ಚಿತ್ರವನ್ನ ಮುಂದೂಡಲಾಗಿದೆ ಎನ್ನಲಾಗಿತ್ತು. ಆದ್ರೆ, ಪೋಸ್ಟ್ ಪೋನ್ ಆಗಿಲ್ಲ. ನಿಗದಿತ ದಿನದಲ್ಲೇ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಬುಕ್ ಮೈ ಶೋ ನಲ್ಲಿ ಟಿಕೆಟ್ ಬುಕ್ಕಿಂಗ್ ಆಗುತ್ತಿದೆ.
ಆಗಸ್ಟ್ 10 ಅಂದ್ರೆ ನಾಳೆ 'ವಿಶ್ವರೂಪಂ-2' ಸಿನಿಮಾ ಜಗತ್ತಿನಾದ್ಯಂತ ತೆರೆಕಾಣುತ್ತಿದೆ. ಕಮಲ್ ಹಾಸನ್ ಅಭಿನಯಿಸಿ, ನಿರ್ದೇಶಿಸಿ, ಕಥೆ ಬರೆದು ನಿರ್ಮಾಣ ಮಾಡಿರುವ ಸಿನಿಮಾ.
ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿರೋ ಕಮಲ್ ಹಾಸನ್, ಮೇಜರ್ ವಿಸ್ಮ್ ಅಹ್ಮದ್ ಕಾಶ್ಮೀರಿ ಪಾತ್ರದಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ. ಇನ್ನುಳಿದಂತೆ ಆಂಡ್ರಿಯಾ, ಪೂಜಾ ಕುಮಾರ್, ರಾಹುಲ್ ಬೋಸ್ ಮತ್ತು ಶೇಖರ್ ಕಪೂರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಿಬ್ರಾನ್ ಸಂಗೀತ ಚಿತ್ರಕ್ಕಿದ್ದು, ಬೇಹುಗಾರಿಕೆಯ ಥ್ರಿಲ್ಲರ್ ಸಿನಿಮಾದ ಬಗ್ಗೆ ನಿರೀಕ್ಷೆ ಇದ್ದೇ ಇದೆ.


Click it and Unblock the Notifications











