ವಿಷ್ಣುದಾದಾ ಬಗ್ಗೆ ಅವಹೇಳನ ಮಾಡಿದ ನಟ: ಆಕ್ರೋಶಗೊಂಡ ಅಭಿಮಾನಿಗಳು
''ನಮ್ಮೊಂದಿಗೆ ವ್ಯಕ್ತಿ ಇಲ್ಲದೇ ಮೇಲೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತೆ ಮಾತನಾಡುವುದು ಸಮಂಜಸವಲ್ಲ'' ಎಂಬ ಮಾತಿದೆ. ಆದ್ರೆ, ಇಲ್ಲೊಬ್ಬ ನಟ ಅಭಿಮಾನಿಗಳು ದೇವರು ಎಂದು ಪೂಜಿಸುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ವಿಷ್ಣು ಫ್ಯಾನ್ಸ್ ಕೆಂಗಣ್ಣಿಗೆ ಬಿದ್ದಿದ್ದಾರೆ.
ಈ ಸಂಬಂಧ ಡಾ ವಿಷ್ಣು ಸೇನಾ ಸಮತಿಯ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದು, ಆ ನಟನ ವಿರುದ್ಧ ಕ್ರಮ ಜರುಗಿಸಿ ಎಂದು ಮನವಿ ಮಾಡಿದ್ದಾರೆ. ಅಷ್ಟಕ್ಕೂ, ಆ ನಟ ಯಾರು? ವಿಷ್ಣುದಾದಾ ಬಗ್ಗೆ ಆತ ಹೇಳಿದ್ದೇನು? ಮುಂದೆ ಓದಿ....

ಬಣಕಾರ್ ಜೊತೆ ವಿಷ್ಣು ಅಭಿಮಾನಿಗಳು ಚರ್ಚೆ
ಡಾ.ವಿಷ್ಣು ಸೇನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಯದುನಂದನ್ ಗೌಡ, ಮಹಿಳಾ ಘಟಕದ ಅಧ್ಯಕ್ಷರಾದ ರಾಧಾ ಗಂಗಾಧರ್, ಉಪಾಧ್ಯಕ್ಷರಾದ ಭಾಗ್ಯರಾಮು, ಹಿರಿಯ ಸೇನಾನಿಗಳಾದ ತುಳಸೀಕೃಷ್ಣ, ಚೆನ್ನಪ್ಪ, ರಾಜೇಂದ್ರ, ವಿಎಸ್ಎಸ್ ನಂದಿನಿ ಬಡಾವಣೆ ಅಧ್ಯಕ್ಷರಾದ ಭಗವಂತ ಮತ್ತು ಇತರೆ ಸೇನಾನಿಗಳಾದ ಸುಕನ್ಯ, ಗಂಗಾಧರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಅವರನ್ನು ಬೇಟಿ ಮಾಡಿ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಟನೊಬ್ಬನ ಮೇಲೆ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

ತೆಲುಗು ನಟನಿಂದ ಅವಹೇಳನ
ತೆಲುಗು ಹಿರಿಯ ನಟ ವಿಜಯ್ ರಂಗರಾಜು ಅಕ್ಟೋಬರ್ ತಿಂಗಳಿನಲ್ಲಿ ತೆಲುಗು ಮಾಧ್ಯಮವೊಂದಕ್ಕೆ ನೀಡಿರುವ ಸಂರ್ದಶನದಲ್ಲಿ ಕನ್ನಡ ಲೆಜೆಂಡ್ ವಿಷ್ಣುವರ್ಧನ್ ಅವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ಸಹಜವಾಗಿ ಕನ್ನಡಾಭಿಮಾನಿಗಳು ಮತ್ತು ಸಾಹಸ ಸಿಂಹ ಅಭಿಮಾನಿಗಳನ್ನು ಕೆರಳಿಸಿದೆ.

'ಹುಚ್ಚ' ಎಂದು ಅಭಿಮಾನಿಗಳಿಂದ ಟೀಕೆ
ವಿಷ್ಣುವರ್ಧನ್ ಅವರ ವ್ಯಕ್ತಿತ್ವದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಜಯ ರಂಗರಾಜು ಅವರನ್ನು ವಿಷ್ಣು ಅಭಿಮಾನಿಗಳು ಹುಚ್ಚ ಇರಬೇಕು ಎಂದು ಟೀಕಿಸುತ್ತಿದ್ದಾರೆ. ಕನ್ನಡಿಗರ ಪಾಲಿನ ಹೃದಯವಂತನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾನೆ, ಈತ ಪ್ರಚಾರಕ್ಕಾಗಿ ದಾದಾ ಹೆಸರು ಬಳಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video

ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ
ವಿಜಯ ರಂಗರಾಜು ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಣ್ಣ ಪುಟ್ಟ ಪೋಷಕ ಪಾತ್ರಗಳು ಹಾಗೂ ಸಾಹಸ ಕಲಾವಿದನಾಗಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣುವರ್ಧನ್ ನಟಿಸಿರುವ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ವಿಎಸ್ಎಸ್ ಸಂಘಟನೆ ಸಹ ಈ ವ್ಯಕ್ತಿಯ ಹೆಸರನ್ನು ಸಹ ಉಲ್ಲೇಖಿಸದೇ ಯಜಮಾನರ ವಿಷಯಕ್ಕೆ ಬಂದರೆ ನಾವು ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











