'ನಿಂಬೆಹುಳಿ' ನೋಡಿ ನಗಲಿಲ್ಲ ಅಂದ್ರೆ ದುಡ್ಡು ವಾಪಸ್!
ಹಲವಾರು ವಿಶೇಷತೆಗಳಿಂದ ಕೂಡಿರುವ ಚಿತ್ರ ಹೇಮಂತ್ ಹೆಗಡೆ ನಿರ್ದೇಶಿಸಿ, ನಟಿಸಿರುವ 'ನಿಂಬೆಹುಳಿ'. ಈ ಬಾರಿ ಅವರು ನಿಂಬೆಹುಳಿ ಪೆಪ್ಪರ್ ಮೆಂಟ್ ಕೊಡ್ತಾರೋ ಅಥವಾ ಭಯಂಕರ ಬಿಸಿಲಿನ ತಾಪಕ್ಕೆ ಬಾಯಾರಿದ ಪ್ರೇಕ್ಷಕರ ಬಾಯಿಗೆ ನಿಂಬೆಹುಳಿ ಜೂಸ್ ಸುರೀತಾರೋ ಎಂಬುದು ಮಾರ್ಚ್ 28ರಂದು ಗೊತ್ತಾಗಲಿದೆ.
ಎಲ್ಲ ಕಾಮಿಡಿಗಳ ದೊಡ್ಡಪ್ಪ ಎಂದು ಹೇಳಿಕೊಂಡು ಬರುತ್ತಿರುವ ಚಿತ್ರವಿದು. ಒಂದು ವೇಳೆ ನೀವು ಚಿತ್ರ ನೋಡಿ ನಗು ಬರಲಿಲ್ಲ ಅಂದ್ರೆ ನಿಮಗೆ ಬಹುಮಾನ ಉಂಟು. ಅದು ಏನು ಬಹುಮಾನ ಎಂಬುದನ್ನು ಹೇಮಂತ್ ಇನ್ನೂ ಪ್ರಕಟಿಸಿಲ್ಲ. ಬಹುಮಾನದ ಮೊತ್ತ ರು.10000 ಎಂದು ಘೋಷಿಸಿದ್ದಾರೆ. [ನಿಂಬೆಹುಳಿ ಸೂಪರ್ ಹಿಟ್ ಹಾಡು]
ತಮ್ಮ ಚಿತ್ರ ನೋಡಿ ನಗಲಿಲ್ಲ ಎಂದರೆ ದುಡ್ಡು ವಾಪಸ್ ಕೊಡ್ತೀನಿ ಎಂಬರ್ಥದಲ್ಲಿ ಅವರು ಹೇಳುತ್ತಿದ್ದಾರೆ. ಸಾಧ್ಯವಾದರೆ ಟ್ರೈ ಮಾಡಬಹುದು. ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಭೂಮಿಕಾ ಚಿತ್ರಮಂದಿರದಲ್ಲಿ 'ನಿಂಬೆಹುಳಿ' ಬಿಡುಗಡೆಯಾಗುತ್ತಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕ್ರಿಕೆಟ್ ಬೆಟ್ಟಿಂಗ್ ಹಗರಣವೇ ಚಿತ್ರದ ಕಥಾವಸ್ತು
ಇದರ ಜೊತೆಗೆ ಪಿವಿಆರ್ ನಂತಹ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲೂ ಚಿತ್ರ ತೆರೆಕಾಣುತ್ತಿದೆ. ಕ್ರಿಕೆಟ್ ಬೆಟ್ಟಿಂಗ್ ಹಗರಣವೇ ಚಿತ್ರದ ಕಥಾವಸ್ತು. ಚಿತ್ರದ "ರಾಮ ರಾಮಾ ಶ್ರೀರಾಮ ಫಸ್ಟ್ ನೈಟೇ ಟ್ರಾಫಿಕ್ ಜಾಮಾ..." ಎಂಬ ಹಾಡು ಯೂಟ್ಯೂಬ್ ನಲ್ಲಿ ಹೊಸ ಹವಾ ಎಬ್ಬಿಸಿದೆ. ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಬರೆದವರು ಜನಪ್ರಿಯ ಹನಿಗವಿ ಎಚ್ ದುಂಡಿರಾಜ್.

ಕನ್ನಡಕ್ಕೆ ಅನುಪಮ್ ಖೇರ್ ಎಂಟ್ರಿ
ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಬಾಲಿವುಡ್ ನಟ ಅನುಪಮ್ ಖೇರ್ ಕನ್ನಡಕ್ಕೆ ಕರೆತರುತ್ತಿರುವುದು. 'ನಿಂಬೆಹುಳಿ' ಚಿತ್ರ ಕಳೆದ ವರ್ಷವೇ ಸೆಟ್ಟೇರಿದರೂ ಅನುಪಮ್ ಖೇರ್ ಅವರ ಕಾಲ್ ಶೀಟ್ ಗಾಗಿ ಚಿತ್ರತಂಡ ಕಾಯುತ್ತಾ ಕುಳಿತು ಬಹಳ ಸಮಯ ವ್ಯರ್ಥ ಮಾಡಿತು.

ಮೂವರು ಎಳೆನಿಂಬೆಗಳ ಜೊತೆ ಕಾಮಿಡಿ
ಪಕ್ಕಾ ಕಾಮಿಡಿ ಚಿತ್ರವಾದ ಇದರಲ್ಲಿ ಮೂವರು ನಾಯಕಿಯರು. ಮುಂಬೈ ಬೆಡಗಿಯರಾದ ಕೋಮಲ್ ಝಾ, ಮಧುರಿಮಾ ಹಾಗೂ ನಿವೇದಿತಾ. ಪಿಆರ್ ಸೌಂದರರಾಜನ್ ಅವರ ಸಂಕಲನ ಹಾಗೂ ಸಂದೀಪ್ ಕುಮಾರ್ ಛಾಯಾಗ್ರಹಣ 'ನಿಂಬೆಹುಳಿ' ಚಿತ್ರಕ್ಕಿದೆ.

ಸುದ್ದಿ ಮಾಡುತ್ತಲೇ ಸದ್ದು ಮಾಡಿದ ಚಿತ್ರ
ಈ ಹಿಂದೊಮ್ಮೆ ವಿಶಿಷ್ಟ ಬಗೆಯ ಕಾರ್ಟೂನ್ ಗಳಿಂದ 'ನಿಂಬೆಹುಳಿ' ಪತ್ರಿಕಾ ಜಾಹೀರಾತಿನಿಂದ ಹೇಮಂತ್ ಹೆಗಡೆ ಗಮನಸೆಳೆದಿದ್ದರು. ಆಗ ಸುದ್ದಿ ಮಾಡಿದ 'ನಿಂಬೆಹುಳಿ' ಚಿತ್ರ ಕೆಲದಿನ ನಾಪತ್ತೆಯಾಗಿ ಇದೀಗ ಪ್ರೇಕ್ಷಕರ ಮುಂದೆ ಥಟ್ಟನೆ ಪ್ರತ್ಯಕ್ಷವಾಗುತ್ತಿದೆ.

ಕರುಣಾನಿಧಿಯನ್ನೂ ಕಾಡಿದ ಚಿತ್ರ
ಚಿತ್ರದಲ್ಲಿ 'ಕರುಣಾ ರಂಗ' ಎಂಬ ಪಾತ್ರವಿದೆ. ಇದನ್ನು ಬುಲೆಟ್ ಪ್ರಕಾಶ್ ಮಾಡಿದ್ದಾರೆ. ಪಾತ್ರದ ವೇಷ ಭೂಷಣ ಆ ಕಪ್ಪು ಕನ್ನಡಕ ಎಲ್ಲವೂ ಥೇಟ್ ಕರುಣಾನಿಧಿ ಅವರನ್ನು ಹೋಲುತ್ತದೆ ಎನ್ನಲಾಗಿದೆ. ಈ ವಿಷಯ ತಿಳಿದ ಡಿಎಂಕೆ ಮುಖಂಡರು ಚಿತ್ರ ಬಿಡುಗಡೆಗೆ ತಡೆಯೊಡ್ಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ತಮಿಳುನಾಡಿನ ಹೈಕೋರ್ಟ್ ಈ ಚಿತ್ರಕ್ಕೆ ತಡೆ ತೆರವುಗೊಳಿಸಿದೆ.


Click it and Unblock the Notifications











