ಬಿಜೆಪಿಗೂ ಮೊದಲು ಕಾಂಗ್ರೆಸ್ ಅನ್ನು ಸೋಲಿಸಬೇಕು: ಚೇತನ್ ಅಹಿಂಸ
ನಟ ಚೇತನ್ ಅಹಿಂಸ ಟ್ವೀಟ್ ಮತ್ತೆ ಸುದ್ದಿಗೆ ಬಂದಿದೆ. ಪ್ರಸ್ತುತ ರಾಜಕೀಯ, ಧಾರ್ಮಿಕ, ಸಾಮಾಜಿಕ ವಿಷಯಗಳ ಬಗ್ಗೆ ಸದಾ ಮಾತನಾಡುವ ಚೇತನ್ ಅಹಿಂಸ ಇದೀಗ ಕಾಂಗ್ರೆಸ್, ಬಿಜೆಪಿ ಮತ್ತು ಆರ್ಎಸ್ಎಸ್ ಕುರಿತಾಗಿ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಮಾಜವಾದವನ್ನು, ಜಾತ್ಯಾತೀತತೆಯನ್ನು ಪ್ರಶ್ನೆ ಮಾಡಿರುವ ಚೇತನ್ ಅಹಿಂಸ ಸಮಾಜದಲ್ಲಿ ಸಮಾನತೆ ಬರಬೇಕೆಂದರೆ ಬಿಜೆಪಿಗಿಂತಲೂ ಮೊದಲು ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂದಿದ್ದಾರೆ.
''ಕಾಂಗ್ರೆಸ್ ಮತ್ತು ಬಿಜೆಪಿ, ಎರಡನ್ನೂ ಮಣಿಸಬೇಕು - ಹೇಗೆ? ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಪಕ್ಷವು ಏನನ್ನು ಬೇಕಾದರೂ ಮಾಡುತ್ತದೆ. ಬಿಜೆಪಿ ಪಕ್ಷವು ದ್ವೇಷದ ಸಿದ್ದಾಂತವನ್ನು ಹೊಂದಿದೆ. ನಾವು ಮೊದಲು ಬಿಜೆಪಿಯನ್ನು ತೊಡೆದು ಹಾಕಿದರೆ, ಕಾಂಗ್ರೆಸ್ ಅದರಿಂದ ಲಾಭ ಪಡೆದು ಇನ್ನಷ್ಟು ಬಲಗೊಳ್ಳುತ್ತದೆ. ಆದರೆ ಮೊದಲು ಕಾಂಗ್ರೆಸ್ಸನ್ನು ತೊಡೆದು ಹಾಕಿದರೆ, ಬಿಜೆಪಿಯ ಸಿದ್ದಾಂತವನ್ನು ನಮ್ಮ ಸಮಾನತೆಯ ಸಿದ್ಧಾಂತದಿಂದ ಧ್ವಂಸ ಮಾಡಬಹುದು'' ಎಂದು ಟ್ವೀಟ್ ಮಾಡಿದ್ದಾರೆ ಚೇತನ್ ಅಹಿಂಸ.
''ಕಾಂಗ್ರೆಸ್ ಪಕ್ಷದ ಸದಸ್ಯರಾದ ಕೆಬಿ ಹೆಡ್ಗೆವಾರ್ ಅವರು 1925 ರಲ್ಲಿ ಆರ್.ಎಸ್.ಎಸ್ಸನ್ನು ಸ್ಥಾಪಿಸಿದರು. ಕಾಂಗ್ರೆಸ್ ನ ಮತ್ತೊಬ್ಬ ಸದಸ್ಯರಾದ ಬಾಲ ಗಂಗಾಧರ ತಿಲಕ್ ಅವರಿಂದ ಹೆಡ್ಗೆವಾರ್ ಪ್ರಭಾವಿತರಾಗಿದ್ದರು. ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ( ಸಂಘ ಪರಿವಾರ ) ಯಾವತ್ತಿನಿಂದಲೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್, ಎರಡಕ್ಕೂ ಲಾಭವಾಗುತ್ತದೆ. ಸಮಾನತೆಗಾಗಿ ಕಾಂಗ್ರೆಸ್ ಮತ್ತು ಸಂಘ, ಎರಡನ್ನೂ ಸೋಲಿಸಬೇಕು'' ಎಂದಿದ್ದಾರೆ ಚೇತನ್ ಅಹಿಂಸ.

ಕನಕರನ್ನು ಹೈಜಾಕ್ ಮಾಡಲು ಬಿಡಬಾರದು: ಚೇತನ್
ಕನಕದಾಸರು 16ನೇ ಶತಮಾನದಲ್ಲಿ ಜಾತಿ ರಹಿತ ಮತ್ತು ವರ್ಗರಹಿತ ಸಮಾಜದ ಕನಸು ಕಂಡವರು. ವೈಯಕ್ತಿಕ ಅಧಿಕಾರಕ್ಕಾಗಿ ಜಾತಿ ಗುರುತನ್ನು ಬಳಸುವ ರಾಜಕಾರಣಿಗಳು ಕನಕರನ್ನು ಹೈಜಾಕ್ ಮಾಡಲು ಬಿಡಬಾರದು. ಸಮಾನತೆ ಮತ್ತು ನ್ಯಾಯಕ್ಕಾಗಿ ಹೋರಾಡಿದ ಕನಕದಾಸರು ನಮ್ಮೆಲ್ಲರಿಗೂ ಸೇರಿದವರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡುವ ರೀತಿಯಲ್ಲಿ ಸೆಪ್ಟೆಂಬರ್ 06ರಂದು ಟ್ವೀಟ್ ಮಾಡಿದ್ದರು ಚೇತನ್.

ಸಿದ್ದರಾಮಯ್ಯ ಹುಟ್ಟಿದ ಜಾತಿಗಷ್ಟೆ ಸೀಮಿತವಾಗಿದ್ದಾರೆ: ಚೇತನ್
''ಕರ್ನಾಟಕದ ಪ್ರಬಲ ಮತ್ತು ವಾದನೀಯವಾಗಿ ಕಾಂಗ್ರೆಸ್ಸಿನ ಅತ್ಯುತ್ತಮ ನಾಯಕರಾದ ಸಿದ್ದರಾಮಯ್ಯನವರು, ಮೂಲಭತವಾಗಿ ಬ್ರಾಹ್ಮಣ್ಯವನ್ನು ಹೆಚ್ಚು ಆಳವಾಗಿ ಬೇರೂರಿಸುವ 'ಜಾತಿ' ನಾಯಕರು. ನಿಜವಾದ ಬದಲಾವಣೆಗೆ - ಕರ್ನಾಟಕ ಮತ್ತು ಭಾರತಕ್ಕೆ 'ಜಾತಿ ವಿರೋಧಿ' ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯನವರ ಸೇವೆ 'ಹುಟ್ಟಿದ ಜಾತಿಗೆ' ಮಾತ್ರ ಸೀಮಿತವಾಗಿದ್ದು, ಇತರೆ ಬಹುಜನರಿಂದ ಸಿಗುವ ಮತಗಳಿಳಾಗಿ ಮಾತ್ರ ಬಣ್ಣದ ಮಾತಾಡುತ್ತಾರೆ'' ಎಂದು ಕೆಲವು ದಿನಗಳ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದರು ಚೇತನ್ ಅಹಿಂಸ.

ಚರ್ಚೆಗೆ ಕಾರಣವಾಗಿದೆ ಚೇತನ್ ಪೋಸ್ಟ್ಗಳು
ನಟ ಚೇತನ್ ಸಿದ್ದರಾಮಯ್ಯ, ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ಮಾಡಿರುವ ಟ್ವೀಟ್ಗಳು, ಫೇಸ್ಬುಕ್ ಪೋಸ್ಟ್ಗಳು ಚರ್ಚೆಗೆ ಕಾರಣವಾಗಿದ್ದು, ಕೆಲವರು ಚೇತನ್ರ ಮಾತುಗಳನ್ನು ಒಪ್ಪಿದ್ದಾರೆ. ಹಲವರು ವಿರೋಧಿಸಿದ್ದಾರೆ. ಚೇತನ್ಗೆ ವಿಚಾರ ಸ್ಪಷ್ಟತೆ ಇಲ್ಲ ಎಂದು ಕೆಲವರು ಹೇಳಿದ್ದರೆ. ಚೇತನ್ ಅವರನ್ನು ಅಲಕ್ಷಿಸಿ ಜಾತೀಯತೆ ವಿರುದ್ಧ ಸಂಘಟಿತ ಹೋರಾಟ ಮುಂದುವರೆಸುವುದು ಉತ್ತಮ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಚೇತನ್ ಅಭಿಪ್ರಾಯಕ್ಕೆ ವಿರೋಧ
ನಟ ಚೇತನ್ ಹಲವು ಬಾರಿ ಬ್ರಾಹ್ಮಣ್ಯ, ಆರ್ಎಸ್ಎಸ್, ಬಿಜೆಪಿ, ಜಾತೀಯತೆ ವಿರುದ್ಧ ಮಾತನಾಡಿದ್ದಾರೆ. ಆದರೆ ಅವರು ಬಿಜೆಪಿ ಹಾಗೂ ಆರ್ಎಸ್ಎಸ್ ಅನ್ನು ವಿರೋಧಿಸುವ ಕಾಂಗ್ರೆಸ್ ವಿರುದ್ಧ ಹಾಗೂ ಜಾತ್ಯಾತೀತ ನಾಯಕ ಎನಿಸಿಕೊಂಡಿರುವ ಸಿದ್ದರಾಮಯ್ಯ ವಿರುದ್ಧ ಮಾತನಾಡಿರುವುದು ಹಲವರಿಗೆ ಆಶ್ಚರ್ಯ ತಂದಿದೆ. ಚೇತನ್ ಮಾತುಗಳಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ಚರ್ಚೆಯು ಕ್ಲಬ್ಹೌಸ್ನಲ್ಲಿ ಸಹ ನಡೆದಿದ್ದು, ಚೇತನ್ಗೆ ಹಲವು ಪ್ರಗತಿಪರರು, ಜಾತ್ಯಾತೀತ ಹೋರಾಟಗಾರರು ಪ್ರಶ್ನೆಗಳ ಸುರಿಮಳೆ ಸುರಿಸಿ ಚೇತನ್ರನ್ನು ಕೈ-ಕೈ ಹಿಸುಕಿಕೊಳ್ಳುವಂತೆ ಮಾಡಿದ್ದಾರೆ.


Click it and Unblock the Notifications











