ಕನ್ನಡ ಚಲನಚಿತ್ರ ಕಪ್ಗೆ ಯಶ್, ದರ್ಶನ್ರನ್ನು ಕರೆದಿಲ್ವಾ? ಸುದೀಪ್ ಕೊಟ್ಟ ಉತ್ತರವಿದು!
ಕನ್ನಡ ಚಲನಚಿತ್ರರಂಗದ ಕಲಾವಿದರೆಲ್ಲಾ ಸೇರಿ ರಾಜ್ ಕಪ್, ಕನ್ನಡ ಚಲನಚಿತ್ರ ಕಪ್ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೀಗೆ ಮುಂತಾದ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುತ್ತಾ ಇರುತ್ತಾರೆ. ಯಾವಾಗಲೂ ಕ್ರಿಕೆಟಿಗರು ಬ್ಯಾಟ್, ಬಾಲ್ ಹಿಡಿದು ಮೈದಾನದಲ್ಲಿ ಆಡುವುದನ್ನು ನೋಡಿದ್ದ ಜನರು ತಮ್ಮ ನೆಚ್ಚಿನ ನಟರು ಮೈದಾನದಲ್ಲಿ ಬ್ಯಾಟ್ ಬೀಸುವುದನ್ನು ಕಂಡು ಖುಷ್ ಆಗಿದ್ದರು.
ಇನ್ನು ಸಿನಿ ತಾರೆಯರ ಕ್ರಿಕೆಟ್ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೇ ದಕ್ಷಿಣ ಭಾರತ ಚಿತ್ರರಂಗಗಳ ನಡುವಿನ ಹಣಾಹಣಿಗೂ ಸಹ ಸಾಕ್ಷಿಯಾಗಿತ್ತು. ಚಂದನವನದ ತಂಡ ಇತರೆ ಚಿತ್ರರಂಗಗಳ ಜತೆ ಮೈದಾನದಲ್ಲಿ ಸೆಣಸಾಡುವುದನ್ನು ಕ್ರಿಕೆಟ್ ಪ್ರೇಮಿಗಳು ಹಾಗೂ ಸಿನಿ ರಸಿಕರು ವೀಕ್ಷಿಸಲು ಕಾತರರಾಗಿ ಕಾಯುತ್ತಿದ್ದರು. ಇನ್ನು ಸಿನಿ ತಾರೆಯರ ಕ್ರಿಕೆಟ್ ಆಟದ ಜತೆ ಮನರಂಜನೆಯನ್ನೂ ಸಹ ನೀಡುವುದರಿಂದ ನಿರೀಕ್ಷೆಗೂ ಮೀರಿಯೇ ಯಶಸ್ಸನ್ನು ಗಳಿಸಿತ್ತು.
ಹೀಗೆ ಯಶಸ್ಸು ಕಂಡಿದ್ದ ಕ್ರಿಕೆಟ್ ಟೂರ್ನಿಯೊಂದನ್ನು ನಡೆಸಲು ಕನ್ನಡ ಚಲನಚಿತ್ರರಂಗ ತಯಾರಾಗಿದೆ. ಹೌದು, ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) ಟೂರ್ನಿಯನ್ನು ನಡೆಸಲು ಕನ್ನಡ ಚಲನಚಿತ್ರರಂಗದ ಕಲಾವಿದರು ತಯಾರಾಗಿದ್ದು, ಇತ್ತೀಚೆಗಷ್ಟೆ ಈ ಕುರಿತಾಗಿ ಸಭೆಯನ್ನೂ ಸಹ ನಡೆಸಲಾಗಿತ್ತು. ಹೌದು, ಕೆಆರ್ಜಿ ಸಂಸ್ಥೆಯ ಕಾರ್ತಿಕ್ ಗೌಡ, ನಿರ್ಮಾಪಕ ಕೆಪಿ ಶ್ರೀಕಾಂತ್, ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ನಂದ ಕಿಶೋರ್ ಸೇರಿದಂತೆ ಹಲವರು ಕಲಾವಿದರು ಈ ಸಭೆಯಲ್ಲಿ ಭಾಗವಹಿಸಿದ್ದರು. ಇನ್ನು ಇದೇ ತಂಡ ಇಂದು ( ಜನವರಿ 23 ) ಪತ್ರಿಕಾಗೋಷ್ಠಿಯೊಂದನ್ನು ನಡೆಸಿ ಟೂರ್ನಿಯ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.

ಕೇಳಿ ಬಂತು ದರ್ಶನ್, ಯಶ್ ಟೂರ್ನಿಯಲ್ಲಿ ಭಾಗವಹಿಸಲ್ವಾ ಎಂಬ ಪ್ರಶ್ನೆ!
ಸಿಸಿಎಲ್ ನಡೆಯುವಾಗ ಹಲವಾರು ಬಾರಿ ಕಣಕ್ಕಿಳಿದು ಬ್ಯಾಟ್ ಬೀಸಿದ್ದ ನಟ ದರ್ಶನ್ ಬಳಿಕ ನಡೆದ ಕನ್ನಡ ಚಲನಚಿತ್ರ ಕಪ್ ಟೂರ್ನಿಗಳಲ್ಲಿ ಭಾಗವಹಿಸಿರಲಿಲ್ಲ. ಅತ್ತ ಯಶ್ ಈ ಟೂರ್ನಿಯಲ್ಲಿ ಭಾಗವಹಿಸಿ ನಾಯಕನಾಗಿ ತಂಡವೊಂದನ್ನು ಮುನ್ನಡೆಸಿದ್ದರು. ಸದ್ಯ ದರ್ಶನ್ ಕ್ರಾಂತಿ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿ ಇದ್ದು, ಯಶ್ ತಮ್ಮ ಮುಂದಿನ ಚಿತ್ರದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಹೀಗಾಗಿ ದರ್ಶನ್ ಹಾಗೂ ಯಶ್ ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆ ದೊಡ್ಡ ಮಟ್ಟದಲ್ಲಿಯೇ ಕೇಳಿಬಂತು.

ಸುದೀಪ್ ಕೊಟ್ಟ ಉತ್ತರವೇನು?
ಇನ್ನು ಈ ರೀತಿಯ ಪ್ರಶ್ನೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ನಟ ಕಿಚ್ಚ ಸುದೀಪ್ "ಕನ್ನಡ ಚಲನಚಿತ್ರರಂಗ ಕಪ್ನ ವಿಶೇಷತೆಯೊಂದನ್ನು ಹೇಳಿಬಿಡ್ತೀವಿ ಕೇಳಿ. ಇಲ್ಲಿ ನಾವು ಪ್ರತಿಯೊಬ್ಬರಿಗೂ ಕರೀತಿವಿ ಸರ್. ಇಂಥವರಿಗೆ ಕರೆದಿಲ್ಲ, ಅಂಥವರಿಗೆ ಕರೆದಿಲ್ಲ ಅಂತ ಅಂದುಕೊಳ್ಳೋಕೂ ಹೋಗಬೇಡಿ. ಅಮೇಲೆ ಆ ಪ್ರಶ್ನೆನ ಕೇಳೋಕೂ ಹೋಗಬೇಡಿ. ನಾವು ಪ್ರತಿಯೊಬ್ಬರನ್ನೂ ಕರೀತಿವಿ. ಕನ್ನಡ ಚಲನಚಿತ್ರರಂಗ ಅನ್ನೋದು ಯಾರ ಸ್ವತ್ತೂ ಅಲ್ಲ, ಎಲ್ಲರ ಸ್ವತ್ತು. ಏನಾಗತ್ತೆ ಕೆಲವರು ಬರೋದಕ್ಕೆ ಇಷ್ಟಪಡ್ತಾರೆ, ಕೆಲವರು ಕಾರಣಾಂತರಗಳಿಂದ ಬರೋಕಾಗಿಲ್ಲ, ಕೆಲವರು ಒತ್ತಡದ ಕೆಲಸಗಳಿಂದ ಬರೋಕಾಗಲ್ಲ" ಎಂದು ಹೇಳಿಕೆ ನೀಡಿದರು. ಈ ಮೂಲಕ ಈ ಟೂರ್ನಿಗೆ ಯಶ್ ಹಾಗೂ ದರ್ಶನ್ ಸೇರಿದಂತೆ ಎಲ್ಲರನ್ನೂ ಸಹ ಆಹ್ವಾನಿಸಲಾಗುತ್ತದೆ ಎಂದು ಸುದೀಪ್ ತಿಳಿಸಿದರು.

ಬರದೇ ಇದ್ದವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ
ಇನ್ನೂ ಮುಂದುವರಿದು ಮಾತನಾಡಿದ ಕಿಚ್ಚ ಸುದೀಪ್ ಯಾರು ಯಾರಿಗೆ ಕನ್ನಡ ಚಲನಚಿತ್ರ ಕಪ್ ಟೂರ್ನಿಯಲ್ಲಿ ಭಾಗವಹಿಬೇಕು ಎಂಬ ಉದ್ದೇಶ ಇರುತ್ತೋ ಅವರೆಲ್ಲಾ ಇಲ್ಲಿ ಇದ್ದೇ ಇರುತ್ತಾರೆ, ಇದನ್ನು ಬಿಟ್ಟು ಬರದೇ ಇದ್ದವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ನಾವು ಎಲ್ಲರಿಗೂ ಆಹ್ವಾನವನ್ನು ನೀಡುತ್ತೇವೆ ಎಂದು ತಿಳಿಸಿದರು.


Click it and Unblock the Notifications











