Don't Miss!
- News Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ಮಾಪಕರಗಳನ್ನು ತಮ್ಮ ಮನೆಗೆ ಊಟಕ್ಕೆ ಕರೆದು ಅಣ್ಣಾವ್ರು ಹೇಳಿದ ಮಾತೇನು?
ವರನಟ ರಾಜ್ ಕುಮಾರ್ ಅವರು ಅಭಿಮಾನಿಗಳನ್ನು 'ಅಭಿಮಾನಿ ದೇವರುಗಳೇ' ಅಂತ ಸಂಬೋಧಿಸಿದರು. ಅದೇ ನಿರ್ಮಾಪಕರನ್ನು ಅನ್ನದಾತರು ಅಂತ ಗೌರವಿಸಿದರು. ಹೀಗಾಗಿಯೇ ರಾಜ್ ಕುಮಾರ್ ಕೇವಲ ಶ್ರೇಷ್ಠ ನಟರು ಮಾತ್ರವಲ್ಲ ಅತ್ಯುತ್ತಮ ವ್ಯಕ್ತಿತ್ವದಿಂದ ಪರಿಮಳಿಸಿದ ಕಲಾಕುಸುಮ. ನೆನಪಿಡಬೇಕಾದ ಅಂಶ ಭಾರತೀಯ ಸಿನಿಮಾ ರಂಗದಲ್ಲಿ ಅಣ್ಣಾ...ಅಂತ ಅಭಿಮಾನಿಗಳು ಹೃದಯಾಂತರಾಳದಿಂದ ಕರೆದಿದ್ದು ಕೇವಲ ಇಬ್ಬರೇ ಇಬ್ಬರು ನಟರನ್ನು.
ತೆಲುಗಿನಲ್ಲಿ ಎನ್. ಟಿ . ರಾಮ ರಾವ್ ಅವರನ್ನು ತೆಲುಗು ಪ್ರಜೆಗಳು 'ಅನ್ನಗಾರು...'ಅಂತ ಸಂಬೋಧಿಸುತ್ತಿದ್ದರು. ಇಡೀ ಕರ್ನಾಟಕ ಇಂದಿಗೂ ಕೂಡ ರಾಜಕುಮಾರ್ ಅವರನ್ನು 'ಅಣ್ಣಾವ್ರು...'ಅಂತಲೇ ಕರೆಯುವುದು, ಮುಂದೆ ಕೂಡ. ಕನ್ನಡ ಸಿನಿಮಾರಂಗದಲ್ಲಿ ಎಂದೆಂದಿಗೂ ಅಣ್ಣಾವ್ರು ಅವರ ಸ್ಥಾನ ಅಣ್ಣಾವ್ರೇದೇ ಅದಕ್ಕೆ ರಿಪ್ಲೇಸ್ಮೆಂಟ್ ಎಂಬುವುದೇ ಇಲ್ಲ.
ಪರಿಪೂರ್ಣ ನಟ ಅಣ್ಣಾವ್ರು
ಪರಿಪೂರ್ಣ ಎಂಬ ಶಬ್ದ ಕೇವಲ ಕೆಲವೇ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ, ಅದರಲ್ಲಿ ಅಗ್ರಗಣ್ಯರು ವರನಟ. ರಾಜ್ ಕುಮಾರ್ ಅವರು ಎಂದು ಅಭಿನಯಿಸಲಿಲ್ಲ, ಪ್ರತಿ ಪಾತ್ರದೊಳಗೆ ಅವರು ಜೀವಿಸಿದರು. ಭಾಷಾಶುದ್ಧಿ ಎಂಬುದು ಯಾರಾದರೂ ಕಲಿಯಬೇಕಾದರೆ ಅದು ರಾಜ್ ಕುಮಾರ್ ಅವರಿಂದಲೇ ಕಲಿಯಬೇಕು. ಪಾತ್ರ ಯಾವುದಾದರೂ ಅದಕ್ಕೆ ನೂರರಷ್ಟು ನ್ಯಾಯ ಕೊಡಲು ಪ್ರಯತ್ನಿಸುತ್ತಿದ್ದ ನಟಸಾರ್ವಭೌಮ ಅವರು. ರಂಗಭೂಮಿ ಹಿನ್ನೆಲೆಯಿಂದ ಬಂದ ಅವರು ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಒಟ್ಟಾಗಿಸಿಕೊಂಡು ಅಭಿನಯಿಸಿದ ಅಭಿನಯ ಚತುರ. ಎಷ್ಟೋ ಮಂದಿ ಅಭಿನಯ ಶಾಲೆಗಳಿಗೆ ಹೋಗಿ ಕಲಿಯಲು ಪ್ರಯತ್ನಿಸುತ್ತಾರೆ, ಅಂತಹವರು ಒಂದು ಸಾರಿ ರಾಜ್ ಕುಮಾರ್ ಅವರ ಅಭಿನಯವನ್ನು ತದೇಕಚಿತ್ತದಿಂದ ನೋಡಿದರೆ ಅಭಿನಯದ ಅರ್ಥ ಆಗುತ್ತದೆ. ಅಭಿನಯ ಒಂದು ತಪಸ್ಸಿನಂತೆ, ಕಲಾ ಸರಸ್ವತಿಯನ್ನು ಪೂಜಿಸಿ, ಆರಾಧಿಸಿ ಒಲಿಸಿಕೊಂಡ ಮಹಾ ಸಾಧಕರು ರಾಜ್ ಕುಮಾರ್ ಅವರು.
ಕನ್ನಡ ರಾಜ್ ಕುಮಾರ್...
ಕರ್ನಾಟಕದ ಹೊರಗೆ ದಕ್ಷಿಣ ಭಾರತದ ಇತರ ಚಲನಚಿತ್ರ ರಂಗಗಳಲ್ಲಿ, ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಇಂದಿಗೂ ಕೂಡ ರಾಜ್ ಕುಮಾರ್ ಅವರನ್ನು ರಾಜ್ ಕುಮಾರ್ ಅಂತ ಯಾರು ಸಂಬೋಧಿಸುವುದಿಲ್ಲ ಬದಲಾಗಿ 'ಕನ್ನಡ ರಾಜ್ ಕುಮಾರ್' ಅಥವಾ ಕನ್ನಡ ಕಂಠೀರವುಡು ರಾಜ್ ಕುಮಾರ್ (ಕನ್ನಡ ಕಂಠೀರವರಾದ ರಾಜ್ ಕುಮಾರ್ ) ಅಂತಲೇ ಕರೆಯುತ್ತಾರೆ. ಇಡೀ ದಕ್ಷಿಣ ಭಾರತದ ಸಿನಿಮಾರಂಗ ಚೆನ್ನೈನಲ್ಲಿ ಸ್ಥಿರಗೊಂಡಿದ್ದ ಸಂದರ್ಭದಲ್ಲಿ ಆಗ ಎಲ್ಲಾ ಭಾಷೆಯ ಪತ್ರಕರ್ತರಿಗೂ ಎಲ್ಲಾ ಭಾಷೆಯ ಸಿನಿಮಾ ರಂಗಗಳ ಜೊತೆಯಲ್ಲಿ ಒಡನಾಟವಿತ್ತು. ಒಂದು ಭಾಷೆಯ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲಾ ಭಾಷೆಯ ಪತ್ರಕರ್ತರು ಬಂದು ಅದನ್ನು ನೋಡಿ ಅದರ ಬಗ್ಗೆ ತಮ್ಮ,ತಮ್ಮ ಭಾಷೆಯ ಪತ್ರಿಕೆಗಳಲ್ಲಿ ಅಭಿಪ್ರಾಯಗಳನ್ನು ಬರೆಯುತ್ತಿದ್ದರು.
ಹೀಗಾಗಿ ಸಹಜವಾಗಿಯೇ ಇತರ ಭಾಷೆಯ ಪತ್ರಕರ್ತರು ಕೂಡ ಕನ್ನಡ ಸಿನಿಮಾರಂಗದ ಆಗುಹೋಗುಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇಟ್ಟುಕೊಂಡಿದ್ದಾರೆ. ಹೀಗೆ ಅಂದಿನ ಕಾಲದ ಸಿನಿಮಾರಂಗವನ್ನು ಸಂಪೂರ್ಣವಾಗಿ ಬಲ್ಲ ಹಾಗೂ ಎಲ್ಲಾ ಸಿನಿಮಾರಂಗಗಳ ನಾಯಕರುಗಳ ಜೊತೆಯಲ್ಲೂ ಕೂಡ ಉತ್ತಮ ಸಂಪರ್ಕ ಮತ್ತು ಸೌಹಾರ್ದ ಸಂಬಂಧವನ್ನು ಹೊಂದಿದ್ದ ಹಿರಿಯ ತೆಲುಗು ಪತ್ರಕರ್ತರಾದ ವಾಸಿರಾಜು ಪ್ರಕಾಶಂ, ರಾಜ್ ಕುಮಾರ್ ಅವರ ಬಗ್ಗೆ ಸಿನಿಮಾರಂಗದ ಇತರ ವಿಷಯಗಳ ಬಗ್ಗೆ ಒಂದಷ್ಟು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಹಣ್ಣೆಲೆ ಚಿಗುರಿದಾಗ....
ರಾಜ್ ಕುಮಾರ್ ಅವರ ಜೊತೆ ಉತ್ತಮ ಸೌಹಾರ್ದ ಸಂಬಂಧ ಹೊಂದಿದ್ದ ಹಿರಿಯ ತೆಲುಗು ಪತ್ರಕರ್ತರಾದ ವಾಸಿರಾಜು ಪ್ರಕಾಶಂ ಅವರು ರಾಜಕುಮಾರ್ ಅವರ ಸಿನಿಮಾಗಳ ವಿಚಾರದ ಬಗ್ಗೆ ಮಾಹಿತಿ ಕೊಡುತ್ತಾ " ರಾಜ್ ಕುಮಾರ್ ಅವರು ತಮ್ಮ ಪಾತ್ರಕ್ಕಿಂತ ಕಥೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಅವರ ದೃಷ್ಟಿಯಲ್ಲಿ ಕಥೆ ಮೊದಲು, ಆನಂತರ ಪಾತ್ರಗಳು. ಇದಕ್ಕೆ ಒಂದು ಒಳ್ಳೆ ಉದಾಹರಣೆ 'ಹಣ್ಣೆಲೆ ಚಿಗುರಿದಾಗ' ಅಂತಹ ಮಹಿಳಾ ಪ್ರಧಾನತೆಯನ್ನು ಹೊಂದಿದ್ದ ಚಿತ್ರ. ಸಣ್ಣ ವಯಸ್ಸಿಗೆ ಮದುವೆಯಾಗಿ ಗಂಡನನ್ನು ಕಳೆದುಕೊಳ್ಳುವ ಪಾತ್ರದಲ್ಲಿ ಕಲ್ಪನಾ ಅಭಿನಯಿಸಿದ್ದಾರೆ.
ಆಕೆಗೆ ಭವಿಷ್ಯ ಬಹಳಷ್ಟು ಇದೆ ಮತ್ತೊಂದು ಮದುವೆಯಾಗುವಂತೆ ಹೇಳುವ ನಾಯಕನ ಪಾತ್ರದಲ್ಲಿ ರಾಜಕುಮಾರ್ ಅಭಿನಯಿಸುತ್ತಾರೆ. ತನ್ನನ್ನು ಯಾರು ಮದುವೆಯಾಗುತ್ತಾರೆ ಅಂತ ನಾಯಕಿ ಪ್ರಶ್ನಿಸಿದಾಗ ನಾಯಕ ಮುಂದೆ ಅವಳನ್ನು ಮದುವೆಯಾಗುತ್ತಾನೆ. 'ಹಣ್ಣಲೆ ಚಿಗುರಿದಾಗ' ಅಂದರೆ ವಸಂತ ಮತ್ತೆ ವಿಕಸಿಸಿತು ಎಂದರ್ಥ. ಆ ಹೊತ್ತಿಗೆ ಸೂಪರ್ ಸ್ಟಾರ್ ಆಗಿದ್ದ ರಾಜಕುಮಾರ್ ಯಾವುದೇ ಸ್ಟಾರ್ ಪಟ್ಟವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅಂತಹ ಚಿತ್ರಗಳಲ್ಲಿ ಅಭಿನಯಿಸಿದ ಕಲಾಪೂರ್ಣರು" ಅಂತ ರಾಜಕುಮಾರ್ ಅವರ ಸಿನಿಮಾ ಆಯ್ಕೆಯ ವಿಚಾರವನ್ನು ತೆರೆದಿಟ್ಟಿದ್ದಾರೆ.
ಮದರಾಸ್ ಬಿಟ್ಟು ಜಯಂತಿ ಬೆಂಗಳೂರಿನಲ್ಲಿ ನೆಲೆಸಿದ್ದು ಯಾಕೆ?
ಹಾಗೆಯೇ ತಾರೆ ಜಯಂತಿಯವರ ವಿಚಾರವಾಗಿ ಕೂಡ ಮಾತನಾಡಿದ ಅವರು " ಜಯಂತಿ ಮೂಲತಃ ಕರ್ನಾಟಕಕ್ಕೆ ಸೇರಿದ ತೆಲುಗು ಹುಡುಗಿ. ಸಣ್ಣ ವಯಸ್ಸಿಗೆ ಆಕೆ ಸಿನಿಮಾರಂಗಕ್ಕೆ ಬಂದಳು. ಅದೇ ಸಮಯದಲ್ಲಿ ಹಿರಿಯ ನಿರ್ದೇಶಕ (ಪೆಕೆಟಿ ಶಿವರಾಂ) ತೆಲುಗು ಸಿನಿಮಾ ರಂಗದಲ್ಲಿ ಹೆಚ್ಚು, ಹೆಚ್ಚು ಅವಕಾಶಗಳನ್ನು ಆಕೆಗೆ ಕೊಟ್ಟರು. ಅಷ್ಟೊತ್ತಿಗಾಗಲೇ ಮದುವೆಯಾಗಿ ಮಕ್ಕಳನ್ನು ಹೊಂದಿದ್ದ ಪೆಕೆಟಿ ಜೊತೆ ಜಯಂತಿ ವಿವಾಹವಾದರೂ ಜೀವನ ಹೊಂದಾಣಿಕೆ ಇಲ್ಲದೆ ಹೋಯಿತು. ಇದರಿಂದ ನೊಂದ ಜಯಂತಿ ತನ್ನ ಸಣ್ಣ ಮಗುವಿನೊಂದಿಗೆ ಶಾಶ್ವತವಾಗಿ ಮದರಾಸ್ ತೋರದು ಬೆಂಗಳೂರಿನಲ್ಲಿ ನೆಲಗೊಂಡಳು".
ಕಲ್ಯಾಣ್ ಕುಮಾರ್ ಅವರ ಅಹಂ ಅವರನ್ನು ನಾಶ ಮಾಡಿದ್ದು...
ಕನ್ನಡದ ಮೊದಲ ಸೂಪರ್ ಸ್ಟಾರ್ ಯಾರು? ಎಂಬ ಪ್ರಶ್ನೆಗೆ ವಾಸಿರಾಜು ಪ್ರಕಾಶಂ ಹೇಳುವುದು ಹೀಗೆ "ನೀವು ಆರಂಭದ ಸಿನಿಮಾರಂಗವನ್ನು ಗಮನಿಸಿದರೆ ಕಲ್ಯಾಣ್ ಕುಮಾರ್ ಮತ್ತು ರಾಜ್ ಕುಮಾರ್ ಇಬ್ಬರು ಸರಿಸಮಾನವಾಗಿ ಬೆಳೆಯುತ್ತಿದ್ದರು. ಇಬ್ಬರ ಮಧ್ಯೆ ನಂಬರ್ ಒನ್ ಸ್ಥಾನಕ್ಕೆ ದೊಡ್ಡ ಪೈಪೋಟಿ ಕೂಡ ಇತ್ತು. ಆ ಸಮಯದಲ್ಲಿ ಕಲ್ಯಾಣ್ ಕುಮಾರ್ ಅವರಿಗೆ ಒಳ್ಳೆ ಅವಕಾಶಗಳು ಕೂಡ ಕನ್ನಡ ಸಿನಿಮಾರಂಗದಲ್ಲಿ ಇತ್ತು.
ಆದರೆ ಅವರಿಗೆ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಚಿತ್ರರಂಗದ ಕಡೆಗೆ ಆಕರ್ಷಣೆ, ಅಲ್ಲಿ ಬೆಳೆದು ಸ್ಟಾರ್ ಆಗಬೇಕೆಂಬ ಹಠವಿತ್ತು. ಕನ್ನಡದಲ್ಲಿ ಇದ್ದ ಒಳ್ಳೆ ಅವಕಾಶಗಳನ್ನೆಲ್ಲಾ ಕೈಚೆಲ್ಲಿ ತಮಿಳು ಕಡೆಗೆ ಮುಖಮಾಡಿದರು. ಆದರೆ ಇದಕ್ಕೆ ಪ್ರತಿಯಾಗಿ ಕನ್ನಡದಲ್ಲೇ ನೆಲೆನಿಂತು ಬಂದ ಎಲ್ಲಾ ಅವಕಾಶಗಳನ್ನು ವಿನಯದಿಂದ ಸ್ವೀಕರಿಸಿದ ರಾಜ್ ಕುಮಾರ್ ನಿಜವಾದ ಅರ್ಥದಲ್ಲಿ ಕನ್ನಡಿಗರ ಹೃದಯದ ರಾಜಕುಮಾರನೇ ಆಗಿ ಬೆಳೆದರು. ಕಲ್ಯಾಣ್ ಕುಮಾರ್ ಅವರ ಸ್ವಯಂಕೃತ ಅಪರಾಧಗಳು ಬಗ್ಗೆ ಬಹಳಷ್ಟು ಹೇಳಬೇಕಾಗುತ್ತದೆ. ಆದರೆ ವ್ಯಕ್ತಿ ಈಗ ಜೀವಂತವಾಗಿಲ್ಲ ಆದ್ದರಿಂದ ಅವರ ಬಗ್ಗೆ ಅಂತಹ ವಿಷಯಗಳು ಹೇಳುವುದು ಈಗ ತಪ್ಪಾಗುತ್ತದೆ" ಅಂತ ಅಲ್ಲಿಗೆ ಆ ವಿಷಯ ಮುಕ್ತಾಯ ಮಾಡುತ್ತಾರೆ.
ಪಾರ್ವತಮ್ಮ ಆ ಕುಟುಂಬದ ಮಹಾರಾಣಿ
ಇನ್ನು ರಾಜಕುಮಾರ್ ಅವರ ಕುಟುಂಬದ ಬಗ್ಗೆ ಕೂಡ ಹೇಳುವ ವಾಸಿ ರಾಜು ಪ್ರಕಾಶಂ ಅವರು "ಹೆಸರಿಗೆ ತಕ್ಕಂತೆ ಅವರು ನಿಜವಾದ ಅರ್ಥದಲ್ಲಿ ರಾಜ್ ಕುಮಾರ್ ಆಗಿದ್ದರು. ನಾನು ಎಂದು ಅವರ ಮನೆಯಲ್ಲಿ ಐವತ್ತಕ್ಕಿಂತ ಕಮ್ಮಿ ಜನರನ್ನು ನೋಡಿದ್ದೇ ಇಲ್ಲ. ಒಂದು ಅರಮನೆಯ ತುಂಬಾ ಜನ ತುಂಬಿ ತುಳುಕುವಂತೆ ರಾಜ್ ಕುಮಾರ್ ಅವರ ಮನೆ ನನಗೆ ಕಾಣುತ್ತಿತ್ತು. ಅವರ ಇಡೀ ಕುಟುಂಬ ಜೊತೆಗೆ ಬಂಧು-ಬಳಗ ಕನ್ನಡ ಸಿನಿಮಾರಂಗದ ಅನೇಕ ಕಲಾವಿದರು ಸೇರಿ ನೂರಾರು ಮಂದಿ ಅಲ್ಲಿ ಊಟ ಮಾಡುತ್ತಿದ್ದರು. ನನಗಂತೂ ಪಾರ್ವತಮ್ಮನವರನ್ನು ನೋಡಿದರೆ ಸಾಕ್ಷಾತ್ ಮಹಾರಾಣಿಯಂತೆ ಕಾಣುತ್ತಿದ್ದರು. ನೂರಾರು ಮಂದಿಯ ಪೋಷಣೆ ಮಾಡುತ್ತಿದ್ದ ಪಾರ್ವತಮ್ಮನವರು ನಿಜವಾದ ಅರ್ಥದಲ್ಲಿ ಮಹಾರಾಣಿಯ ಸರಿ" ಅಂತ ಹೇಳುತ್ತಾರೆ.
10 ವರ್ಷಗಳ ಕಾಲ ತಮ್ಮ ಸಂಭಾವನೆಯನ್ನು ಹೆಚ್ಚಿಸಿ ಕೊಂಡಿರುವುದಿಲ್ಲ
ಇಲ್ಲಿ ಮತ್ತೊಂದು ಆಸಕ್ತಿದಾಯಕ ಸಂಗತಿಯೊಂದನ್ನು ಅವರು ವಿವರಿಸುತ್ತಾರೆ, ಅದು ರಾಜ್ ಕುಮಾರ್ ಅವರ ಸಂಭಾವನೆ ಏರಿಸಿಕೊಳ್ಳುವ ಮೊದಲು ನಡೆದ ಘಟನೆಯ ಬಗ್ಗೆ "ಸೂಪರ್ ಸ್ಟಾರ್ ನಟನಾಗಿ ಬೆಳೆದಿದ್ದರೂ ಕೂಡ ರಾಜ್ ಕುಮಾರ ಸದಾ ನಿರ್ಮಾಪಕರ ಹಿತವನ್ನೇ ಮೊದಲು ನೋಡುತ್ತಿದ್ದರು. ಹೀಗಾಗಿ ಅವರು 40,000/- ಸಂಭಾವನೆ ಪಡೆದು ಸಿನಿಮಾಗಳನ್ನು ಮಾಡುತ್ತಿದ್ದರು ಅದು ಒಂದು ಅಥವಾ ಎರಡು ವರ್ಷ ಅಲ್ಲ ಅಲ್ಲ ಹತ್ತು ವರ್ಷ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುವುದು ಇಲ್ಲ. ಎಲ್ಲರೂ ಅವರಿಗೆ ಸಂಭಾವನೆ ಹೆಚ್ಚಿಸಿಕೊಳ್ಳುವಂತೆ ಹೇಳುತ್ತಿದ್ದರು ಕೂಡ ಅವರು ಸಣ್ಣಗೆ ಒಂದು ಮುಗುಳುನಗೆ ಬೀರಿ ಸುಮ್ಮನಾಗುತ್ತಿದ್ದರು. ಹೀಗೆ ಹತ್ತು ವರ್ಷದ ನಂತರ ಸಹಜವಾಗಿಯೇ ಎಲ್ಲಾ ಬೆಲೆ ಏರಿಕೆಯಾದಾಗ ಸಮಯದಲ್ಲಿ ರಾಜ್ ಕುಮಾರ ಅವರು ಕೂಡ ಒಂದು ದಿನ ತಮ್ಮ ಸಂಭಾವನೆ ಕೂಡ ಹೆಚ್ಚಿಸಿಕೊಳ್ಳಲು ನಿರ್ಧರಿಸಿಕೊಳ್ಳುತ್ತಾರೆ.
ನಿರ್ಮಾಪಕರನ್ನು ಊಟಕ್ಕೆ ಕರೆದು ರಾಜ್ ಕುಮಾರ್ ಹೇಳಿದ್ದೇನು?
ಸಂಭಾವನೆಯ ವಿಚಾರವಾಗಿ ಮಾತನಾಡಲು ರಾಜ್ ಕುಮಾರ್ ಅವರು ಒಂದು ದಿನ ಎಲ್ಲಾ ನಿರ್ಮಾಪಕರನ್ನು ತಮ್ಮ ಮನೆಗೆ ಊಟಕ್ಕೆ ಕರೆಯುತ್ತಾರೆ. ಎಲ್ಲರೂ ಊಟ ಮಾಡಿದ ಮೇಲೆ ರಾಜ್ ಕುಮಾರ ಅವರು 'ಪ್ರಸ್ತುತ ಸಮಯದಲ್ಲಿ ತಾನು ಕೂಡ ಸಂಭಾವನೆಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಮುಂದಿನ ಚಿತ್ರದಿಂದ ಸಂಭಾವನೆ 50, 000/- ಪಡೆಯಲು ಇಚ್ಛಿಸಿದ್ದೇನೆ. ಆದರೆ ಅದಕ್ಕೆ ತಾವುಗಳು ಅವಕಾಶ ನೀಡಬೇಕು' ಅಂತ ವಿನಯದಿಂದ ಹೇಳುತ್ತಾರೆ. ಆಗ ಅಲ್ಲಿಂದ ನಿರ್ಮಾಪಕರೆಲ್ಲಾ 50,000 ಸಾವಿರ ಅಲ್ಲ ಇನ್ಮೇಲೆ ನಿಮ್ಮ ಎಲ್ಲಾ ಚಿತ್ರಗಳಿಗೂ 1 ಲಕ್ಷ ಸಂಭಾವನೆ ನಿಗದಿ ಮಾಡುತ್ತೀವಿ ಅಂತಾರೆ. ಆದರೆ ರಾಜಕುಮಾರ್ ಅವರು 'ಇಲ್ಲ... ಇಲ್ಲ...ನನಗೆ ಐವತ್ತು ಸಾವಿರ ಮಾತ್ರ ನೀವು ನೀಡಬೇಕು, ಅನ್ನದಾತರಾದ ನಿಮ್ಮ ಹಿತ ಕೂಡ ನನಗೆ ಮುಖ್ಯ ಅಂತ ಹೇಳುತ್ತಾರೆ.' ನಿಮಗೆ ಇಂತಹ ವಿನಯವಂತ, ಗುಣವಂತ ಆದರ್ಶನಾಯಕ ಜೊತೆಗೆ ನಿರ್ಮಾಪಕರ ಹಿತ ಕಾಯುತ್ತಿದ್ದ ಸೂಪರ್ ಸ್ಟಾರ್ ನಟರು ಎಲ್ಲಿ ಸಿಗುತ್ತಾರೆ ಹೇಳಿ? " ಅಂತ ವಾಸಿ ರಾಜು ಪ್ರಕಾಶಂ ಅವರು ರಾಜಕುಮಾರ್ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ.