'ವಿಕ್ರಾಂತ್ ರೋಣ' ಚಿತ್ರಕ್ಕೆ ನಿರೂಪ್ ಭಂಡಾರಿಯನ್ನು ಸೂಚಿಸಿದ್ದು ಯಾರು?
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಪ್ರಪಂಚದ ಅತ್ಯಂತ ದೊಡ್ಡ ಕಟ್ಟಡ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಅನಾವರಣ ಮಾಡಲಾಯಿತು.
ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಚಿತ್ರವೊಂದರ ಟೈಟಲ್ ಲೋಗೋವನ್ನು ಬುರ್ಜ್ ಖಲೀಫಾ ಮೇಲೆ ರಿಲೀಸ್ ಮಾಡಿದ ದಾಖಲೆ ವಿಕ್ರಾಂತ್ ರೋಣ ಪಾಲಾಯಿತು. ಸುದೀಪ್ ಜೊತೆ ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಸಂಜೀವ್ ಗಾಂಭೀರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ನಿರೂಪ್ ಅವರನ್ನು ಸೂಚಿಸಿದ್ದು ಯಾರು? ಮುಂದೆ ಓದಿ...

ಹಲವು ಸ್ಟಾರ್ ನಟರ ಹೆಸರು ಚರ್ಚೆಯಲ್ಲಿತ್ತು
''ನಿರ್ದೇಶಕ ಅನೂಪ್ ಭಂಡಾರಿ ಕಥೆ ಮಾಡುವಾಗ ಸಂಜೀವ್ ಗಾಂಭೀರ್ ಪಾತ್ರಕ್ಕೆ ಹಲವು ಸ್ಟಾರ್ ನಟರ ಹೆಸರು ಚರ್ಚೆಯಲ್ಲಿತ್ತು. ಪರಭಾಷೆಯ ಕಲಾವಿದರನ್ನು ಕರೆಯಿಸುವ ಮಾತುಕತೆಯೂ ಆಗಿತ್ತು. ಕೊನೆಗೆ ನನಗೆ ಈ ಪಾತ್ರ ಸಿಕ್ಕಿದ್ದು ಅದೃಷ್ಟ'' ಎಂದು ನಿರೂಪ್ ಭಂಡಾರಿ ಸಂತಸ ಹಂಚಿಕೊಂಡಿದ್ದಾರೆ.

ನನಗೆ ಆ ಪಾತ್ರದ ಮೇಲೆ ಆಸಕ್ತಿ ಇತ್ತು
''ಯಾರನ್ನು ಗಮನದಲ್ಲಿಟ್ಟುಕೊಂಡು ಸಂಜೀವ್ ಗಾಂಭೀರ್ ಪಾತ್ರ ರಚಿಸಿದರೂ ಗೊತ್ತಿಲ್ಲ. ಸಂಜೀವ್ ಪಾತ್ರದ ಮೇಲೆ ನನಗೆ ಆಸಕ್ತಿ ಇತ್ತು. ಅನೂಪ್ ಬಳಿ ಈ ಪಾತ್ರದ ಕುರಿತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಸುದೀಪ್ ಅವರ ಬಳಿ ಕೇಳುವ ಧೈರ್ಯ ನನಗೆ ಇರಲಿಲ್ಲ. ಬೇರೆ ನಟರ ಹೆಸರು ಚರ್ಚೆಗೆ ಬಂದಾಗೆಲ್ಲ ನಾನು ಬೈಯ್ದುಕೊಂಡಿದ್ದೇ. ಕೊನೆಗೆ ಆ ಪಾತ್ರ ನನಗೆ ಬಂತು'' ಎಂದು ನಿರೂಪ್ ಬಹಿರಂಗಪಡಿಸಿದರು.

ನನಗೆ ಈ ಪಾತ್ರ ಸೂಚಿಸಿದ್ದು ಸುದೀಪ್
''ಬೇರೆ ನಟರ ಹೆಸರು ಬಂದಾಗ, ಮನಸ್ಸಿನಲ್ಲಿ ಬೈಯ್ದುಕೊಳ್ಳುತ್ತಿದ್ದೆ. ಏನಾದರೂ ಆಗಿ ಇದು ಕ್ಯಾನ್ಸಲ್ ಆಗ್ಲಿ ಅಂತ ಅಂದುಕೊಳ್ಳುತ್ತಿದ್ದೆ. ಅಷ್ಟರಲ್ಲೇ ಸುದೀಪ್ ಅವರು ಈ ಪಾತ್ರ ನಿರೂಪ್ ಮಾಡಲಿ ಎಂದು ಸೂಚಿಸಿದರು. ನಿಜಕ್ಕೂ ಖುಷಿ ಆಯ್ತು'' ಎಂದು ಅನೂಪ್ ಸಹೋದರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು.

ಬುರ್ಜ್ ಖಲೀಫಾ ಮೇಲೆ ನಿರೂಪ್
''ಬುರ್ಜ್ ಖಲೀಪಾ ಮೇಲೆ ಪ್ರದರ್ಶನವಾದ ಟೀಸರ್ನಲ್ಲಿ ನಮ್ಮ ಪಾತ್ರಗಳು ಬಂದಿದ್ದು ವಿಶೇಷ. ಅಲ್ಲಿ ನಮ್ಮ ಪಾತ್ರಗಳು ಇರಲಿಲ್ಲ. ಆದರೆ, ಸುದೀಪ್ ಸರ್ ಹೇಳಿ ಹಾಕಿಸಿದರು. ಸುದೀಪ್ ಅವರ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸುತ್ತಿರುವುದು ಸಹ ಅಷ್ಟೇ ಖುಷಿ ಕೊಟ್ಟಿದೆ'' ಎಂದು ನಿರೂಪ್ ಭಂಡಾರಿ ತಿಳಿಸಿದರು.


Click it and Unblock the Notifications











