ಡ್ರಗ್ಸ್ ದಂಧೆಯಲ್ಲಿರುವ 'ಸ್ಟಾರ್ ನಟರ' ಹೆಸರು ಏಕೆ ಹೊರಬರುತ್ತಿಲ್ಲ?
ಡ್ರಗ್ಸ್ ಪ್ರಕರಣದಲ್ಲಿ ಕನ್ನಡ ಸಿನಿಮಾ ತಾರೆಯರು ಹಾಗೂ ಕಿರುತೆರೆ ಕಲಾವಿದರನ್ನು ಪೊಲೀಸರು ಜಾಲಾಡುತ್ತಿದ್ದಾರೆ. ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿಯನ್ನು ಬಂಧಿಸಿ ಜೈಲಿಗೆ ಸಹ ಕಳುಹಿಸಲಾಗಿದೆ. ಮತ್ತೊಂದೆಡೆ ದಿಗಂತ್, ಐಂದ್ರಿತಾ ರೇ ವಿಚಾರಣೆ ಮಾಡಿದ್ದರು. ಈಗ ಕಿರುತೆರೆ ಕಲಾವಿದರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಆದ್ರೆ, ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಮತ್ತು ಸಂಜನಾ ಬಲಿಪಶು ಆಗಿದ್ದಾರೆ ಅಷ್ಟೇ. ಅವರನ್ನು ಮೀರಿದ ದೊಡ್ಡ ಸ್ಟಾರ್ಗಳು ಈ ಮಾಫಿಯಾದಲ್ಲಿ ಕೈ ಜೋಡಿಸಿದ್ದಾರೆ ಎಂಬ ಆರೋಪವೂ ಇದೆ. ಆದ್ರೆ, ಇದುವರೆಗೂ ಯಾವುದೇ ಸ್ಟಾರ್ ಕಲಾವಿದರಿಗೆ ನೋಟಿಸ್ ನೀಡಿಲ್ಲ, ಅವರ ಹೆಸರು ಸಹ ಚರ್ಚೆಗೆ ಬಂದಿಲ್ಲ ಏಕೆ ಎಂಬ ಚರ್ಚೆ ಆಗ್ತಿದೆ. ಮುಂದೆ ಓದಿ...

ಇಂದ್ರಜಿತ್ ಪದೇ ಪದೇ ಹೇಳ್ತಿದ್ದಾರೆ
ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟಕ್ಕಿಳಿದಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಹ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ''ರಾಗಿಣಿ-ಸಂಜನಾ ಬಲಿಪಶು ಅಷ್ಟೇ. ಸಿಸಿಬಿ ಸೂಕ್ತ ತನಿಖೆ ಮಾಡ್ತಿಲ್ಲ. ದೊಡ್ಡ ನಿರ್ದೇಶಕರ ಮಕ್ಕಳು, ಸ್ಟಾರ್ಗಳು ಇದರಲ್ಲಿ ಇದ್ದಾರೆ, ಏಕೆ ಇದುವರೆಗೂ ಅವರಿಗೆ ನೋಟಿಸ್ ನೀಡಿಲ್ಲ'' ಎಂದು ಪ್ರಶ್ನಿಸಿದ್ದಾರೆ. ಆರಂಭದಿಂದಲೂ ಗಂಭೀರ ಆರೋಪಗಳನ್ನು ಮಾಡುತ್ತಿರುವ ಇಂದ್ರಜಿತ್, ಹಿರಿಯ ನಿರ್ದೇಶಕನ ಮಗ, ಸ್ಟಾರ್ ನಟರ ಮಕ್ಕಳು ಈ ಜಾಲದಲ್ಲಿದ್ದಾರೆ ಎಂದು ಹೇಳುತ್ತಲೇ ಬಂದಿದ್ದಾರೆ.

'ಮಹಾಮಹಿಮರ' ಬಗ್ಗೆ ಪ್ರಸ್ತಾಪಿಸಿದ ದುನಿಯಾ ವಿಜಯ್
ಇತ್ತೀಚಿಗಷ್ಟೆ ನಟ ಜಗ್ಗೇಶ್ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಜಗ್ಗೇಶ್ ಅವರಿಗೆ ಫೋನ್ ಮಾಡಿದ್ದ ದುನಿಯಾ ವಿಜಯ್ ಡ್ರಗ್ಸ್ ದಂದೆಯಲ್ಲಿನ ಮಹಾಮಹಿಮರ ಹೆಸರು ಹೇಳಿದರಂತೆ. ಅದನ್ನು ಕೇಳಿ ಜಗ್ಗೇಶ್ ಕ್ಷಣಕಾಲ ಉತ್ತರವಿಲ್ಲದೆ ಮೌನವಾದರಂತೆ. ಇಲ್ಲಿ ''ಮಹಾಮಹಿಮರ'' ಎಂಬ ಪದ ಬಳಕೆ ನೋಡಿದ್ರೆ ದೊಡ್ಡ ಕಲಾವಿದರ ಹೆಸರು ಸಹ ಇದರಲ್ಲಿ ಇದೆ ಎನ್ನುವ ಅನುಮಾನ ಬಾರದೆ ಇರಲ್ಲ.

ರಾಜಕೀಯ ನಾಯಕರ ಒತ್ತಡ
ಇಂಡಸ್ಟ್ರಿಗೆ ಸಂಬಂಧಿಸಿದ ದೊಡ್ಡ ವ್ಯಕ್ತಿಗಳು ಮಾತ್ರವಲ್ಲ, ರಾಜಕಾರಣಿಗಳ ಮಕ್ಕಳು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಸಚಿವರು, ಶಾಸಕರಿಂದ ಸಿಸಿಬಿ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತಿದೆಯಂತೆ. ಕೇಸ್ನ್ನು ಕೈ ಬಿಡಿ ಎಂದು ಒತ್ತಾಯ ಹಾಕುತ್ತಿದ್ದಾರಂತೆ. ಹಾಗಾಗಿ, ಮಹಾಮಹಿಮರ ತಂಟೆಗೆ ಪೊಲೀಸರು ಹೋಗುತ್ತಿಲ್ಲವೇ?

ನಟಿಯರು ಮಾತ್ರ ಏಕೆ ಬಲಿ?
ಆರಂಭದಿಂದಲೂ ಬಹಳ ಜನರು ಡ್ರಗ್ಸ್ ದಂಧೆಯಲ್ಲಿ ಇದ್ದಾರೆ ಎಂಬ ಆರೋಪದ ನಡುವೆಯೂ ಇದುವರೆಗೂ ರಾಗಿಣಿ-ಸಂಜನಾ ಮಾತ್ರ ಅರೆಸ್ಟ್ ಆಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ರಿಯಾ ಚಕ್ರವರ್ತಿ ಬಂಧನವಾಗಿದ್ದಾರೆ. ಹಾಗಾಗಿ, ಕೇವಲ ನಟಿಯರು ಮಾತ್ರ ಏಕೆ ಟಾರ್ಗೆಟ್ ಆಗ್ತಿದ್ದಾರೆ ಎಂದು ಸಹ ಕೆಲವು ನಟಿಯರು ಪ್ರಶ್ನಿಸಿದ್ದಾರೆ.

ಎಚ್ಚರಿಕೆ ಮಾತ್ರನಾ?
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಡ್ರಗ್ಸ್ ಪ್ರಕರಣ ಬಹಳ ಗಂಭೀರವಾಗಿ ತನಿಖೆ ನಡೆಯುವ ಸಾಧ್ಯತೆ ಬಹಳ ಕಮ್ಮಿ. ರಾಗಿಣಿ ಮತ್ತು ಸಂಜನಾ ಅವರಿಗೆ ಮಾತ್ರ ಈ ಕೇಸ್ ಸೀಮಿತವಾಗಲಿದೆ. ದೊಡ್ಡವರು ಎನಿಸಿಕೊಂಡವರಿಗೆ ಈ ಮೂಲಕ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ ಅಷ್ಟೇ ಎಂಬ ಮಾತುಗಳ ಸಹ ಕೇಳಿ ಬರುತ್ತಿದೆ.


Click it and Unblock the Notifications











