ದರ್ಶನ್ ಗೆ 'ಕುರುಕ್ಷೇತ್ರ' ಯಾಕೆ ಅಷ್ಟೊಂದು ಮುಖ್ಯ?
Recommended Video
ಕನ್ನಡ ಚಿತ್ರರಂಗದಲ್ಲಿ 'ಕುರುಕ್ಷೇತ್ರ' ಎಂಬ ಸಿನಿಮಾ ಬರುತ್ತೆ ಎಂದಾಗಲೇ ಎಲ್ಲರು ಅಚ್ಚರಿಯಿಂದ ನೋಡಿದರು. ಪೌರಾಣಿಕ ಚಿತ್ರ, ಯಾವ ಕಲಾವಿದರು ನಟಿಸಬಹುದು, ಎಷ್ಟು ಕೋಟಿ ಬಂಡವಾಳ ಹಾಕಬಹುದು, ಯಾವ ಪಾತ್ರಕ್ಕೆ ಯಾರೂ ಸೂಕ್ತವಾಗಬಹುದು ಎಂದೆಲ್ಲ ಪ್ರಶ್ನೆಗಳು ಆರಂಭವಾದವು.
ಅಷ್ಟೊತ್ತಿಗಾಗಲೇ ದರ್ಶನ್ ದುರ್ಯೋಧನ ಪಾತ್ರ ಮಾಡ್ತಾರೆ ಎಂಬುದು ಬಹಿರಂಗವಾಯಿತು. ಡಿ-ಬಾಸ್ ಅವರ 50ನೇ ಚಿತ್ರ ಎಂಬ ಕಾರಣಕ್ಕೆ ಇಂಡಸ್ಟ್ರಿಯಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿತು. ರವಿಚಂದ್ರನ್, ಅರ್ಜುನ್ ಸರ್ಜಾ, ಸೋನು ಸೂದ್, ರವಿಶಂಕರ್, ಅಂಬರೀಶ್, ನಿಖಿಲ್ ಕುಮಾರ್, ಸ್ನೇಹ, ಹರಿಪ್ರಿಯಾ, ಮೇಘನಾ ರಾಜ್, ಶ್ರೀನಿವಾಸ ಮೂರ್ತಿ, ಶ್ರೀನಾಥ್ ಹೀಗೆ ಬಹುದೊಡ್ಡ ತಾರಬಳಗ ಸೇರಿತು.
ಇಷ್ಟು ದೊಡ್ಡ ಕಲಾವಿದರ ಬಳಗ ಇದ್ದರೂ ಚಾಲೆಂಜಿಂಗ್ ಸ್ಟಾರ್ ಗೆ ಕುರುಕ್ಷೇತ್ರ ಸಿನಿಮಾ ಬಹಳ ಮುಖ್ಯವಾಗಿದೆ. 'ಸಂಗೊಳ್ಳಿ ರಾಯಣ್ಣ' ನಂತರ ಇಂತಹದೊಂದು ಸಾಹಸಕ್ಕೆ ಕೈಹಾಕಿದ ದರ್ಶನ್ ವೃತ್ತಿ ಜೀವನದಲ್ಲಿ ಕುರುಕ್ಷೇತ್ರ ಮೈಲಿಗಲ್ಲಾಗಲಿದೆ. ಅಷ್ಟಕ್ಕೂ, ದರ್ಶನ್ ಪಾಲಿಗೆ ಕುರುಕ್ಷೇತ್ರ ಯಾಕೆ ಅಷ್ಟೊಂದು ಮುಖ್ಯ? ಮುಂದೆ ಓದಿ.....

50ನೇ ಸಿನಿಮಾ ಮೈಲಿಗಲ್ಲು
2017ರಲ್ಲಿ ಬಿಡುಗಡೆಯಾದ ತಾರಕ್ ಸಿನಿಮಾ ಬಳಿಕ ಕುರುಕ್ಷೇತ್ರ 50ನೇ ಸಿನಿಮಾ ಎಂದು ಘೋಷಿಸಲಾಯಿತು. ವೃತ್ತಿ ಜೀವನದ 50ನೇ ಸಿನಿಮಾ ವಿಶೇಷವಾಗಿರಿಸಿಕೊಳ್ಳಲು ತೀರ್ಮಾನಿಸಿದ ದರ್ಶನ್, ಪೌರಾಣಿಕ ಚಿತ್ರವನ್ನ ಆಯ್ಕೆ ಮಾಡಿಕೊಂಡರು. ಆದರೆ, ರಿಲೀಸ್ ವಿಳಂಬವಾದ ಕಾರಣ, 51ನೇ ಚಿತ್ರ ಎಂದು ಯಜಮಾನ ಮೊದಲು ಬಂತು. ಈಗ ತೆರೆಗೆ ಬರಲಿರುವ ಕುರುಕ್ಷೇತ್ರ ಮಾತ್ರ 50ನೇ ಚಿತ್ರವಾಗಿಯೇ ಉಳಿದುಕೊಳ್ಳಲಿದೆ. ಹಾಗಾಗಿ, ಡಿ ಬಾಸ್ ಈ ಸಿನಿಮಾ ಬಹಳ ವಿಶೇಷ.

ಮಲ್ಟಿಸ್ಟಾರ್ ಪಟ್ಟ ದೊರಕಿಸಿದ ಚಿತ್ರ
ಕುರುಕ್ಷೇತ್ರ ಆರಂಭವಾದಾಗ ಕೇವಲ ಕನ್ನಡದಲ್ಲಿ ಮಾತ್ರ ಬರುತ್ತೆ ಎನ್ನಲಾಗಿತ್ತು. ಶೂಟಿಂಗ್ ಹಂತದಲ್ಲೂ ಕನ್ನಡ ಮಾತ್ರ ಎಂದು ಹೇಳಲಾಗುತ್ತಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ವೇಳೆ ನಿರ್ಧಾರ ಬದಲಿಸಿದ ಮುನಿರತ್ನ ಅಂಡ್ ಟೀಂ ನಾಲ್ಕು ಭಾಷೆಗೆ ಡಬ್ ಮಾಡಿ, ಏಕಕಾಲದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿತು. ಈ ಮೂಲಕ ಸ್ಯಾಂಡಲ್ ವುಡ್ ಬಾಸ್, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ ಕಾಲಿಡುವಂತಾಯಿತು. ಸದ್ಯದವರೆಗೂ ಕನ್ನಡದಲ್ಲಿ ಮಾತ್ರ ಪ್ರಚಾರ ಮಾಡುತ್ತಿದ್ದ ದರ್ಶನ್ ಈಗ ನೆರೆರಾಜ್ಯಗಳಲ್ಲೂ ಅಬ್ಬರಿಸುತ್ತಿದ್ದಾರೆ. ಹೀಗಾಗಿ ದರ್ಶನ್ ಪಾಲಿಗೆ ಕುರುಕ್ಷೇತ್ರ ಮಲ್ಟಿಸ್ಟಾರ್ ಪಟ್ಟ ತಂದುಕೊಟ್ಟ ಚಿತ್ರ ಎನಿಸಿಕೊಂಡಿದೆ.

ಅಭಿಮಾನಿಗಳನ್ನ ವಿಸ್ತರಿಸಿಕೊಳ್ಳಲು ಅವಕಾಶ
ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟ ದರ್ಶನ್. ಬೇರೆ ರಾಜ್ಯಗಳಲ್ಲೂ ಡಿ ಬಾಸ್ ಭಕ್ತರಿದ್ದಾರೆ. ಆದರೆ, ಕುರುಕ್ಷೇತ್ರ ಚಿತ್ರದಿಂದ ಆ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಿಸಿಕೊಳ್ಳಬಹುದು. ಕುರುಕ್ಷೇತ್ರ ನೋಡುವ ಬೇರೆ ಭಾಷೆಯ ಪ್ರೇಕ್ಷಕರನ್ನ ದರ್ಶನ್ ಸೆಳೆಯಬಹುದು. ಇದೊಂದು ಉತ್ತಮ ಅವಕಾಶ.

ಕಲೆಕ್ಷನ್ ಕಿಂಗ್ ಪಟ್ಟ ತರಬಹುದು
ಸದ್ಯ ಸ್ಯಾಂಡಲ್ ವುಡ್ ಪಾಲಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಪ್ರಮುಖರು ಎನಿಸಿಕೊಂಡಿರುವ ದರ್ಶನ್ ಚಿತ್ರಗಳಿಗೆ ಸಖತ್ ಬೇಡಿಕೆ ಇದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಹಾಕಿದ ಬಂಡವಾಳ ವಾಪಸ್ ಬರುತ್ತೆ. ಆದ್ರೀಗ, ಕುರುಕ್ಷೇತ್ರ ಚಿತ್ರದ ಮೂಲಕ ಕಲೆಕ್ಷನ್ಸ ವಿಚಾರದಲ್ಲಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಐದು ಭಾಷೆಯಲ್ಲಿ ಬರುತ್ತಿರುವುದರಿಂದ ಗಳಿಕೆಯಲ್ಲೂ ಕುರುಕ್ಷೇತ್ರ ದರ್ಶನ್ ಗೆ ಇಮೇಜ್ ಹೆಚ್ಚಿಸಬಹುದು.

'ಪೌರಾಣಿಕ ನಟ' ಎಂಬ ಪ್ರಖ್ಯಾತಿ
ಪ್ರಸ್ತುತ ಬೆಳವಣಿಗೆಯಲ್ಲಿ ಐತಿಹಾಸಿಕ ಚಿತ್ರಗಳಿಗೆ ಹಾಗೂ ಪೌರಾಣಿಕ ಚಿತ್ರಗಳಿಗೆ ದರ್ಶನ್ ಸೂಕ್ತ ಆಯ್ಕೆ. ಇಂದಿನ ನಟರಲ್ಲಿ ದರ್ಶನ್ ಎಲ್ಲ ರೀತಿಯ ಚಿತ್ರಗಳಿಗೂ ನ್ಯಾಯ ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಅಭಿಪ್ರಾಯ ಇದೆ. ಈ ಚಿತ್ರದ ಮೂಲಕ ಆ ಅಭಿಪ್ರಾಯವನ್ನ ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಅವಕಾಶ ಇದಾಗಿದೆ. ಈ ಕಾರಣದಿಂದ ಕುರುಕ್ಷೇತ್ರ ದರ್ಶನ್ ಪಾಲಿಗೆ ಬಹುಮುಖ್ಯವಾಗಿದೆ.


Click it and Unblock the Notifications











