ಈ 3 ಚಿತ್ರಗಳು 'ಬೆಂಗಳೂರು ಚಿತ್ರೋತ್ಸವ'ಕ್ಕೆ ಯಾಕೆ ಆಯ್ಕೆಯಾಗಿಲ್ಲ?
ಫೆಬ್ರವರಿ 2 ರಿಂದ 9 ರವರೆಗೆ ಸಿಲಿಕಾನ್ ಸಿಟಿಯಲ್ಲಿ '9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ' ನಡೆಯಲಿದೆ. ಈಗಾಗಲೇ ಈ ಚಿತ್ರೋತ್ಸವಕ್ಕೆ ಎಲ್ಲಾ ತಯಾರಿ ನಡೆದಿದ್ದು, ಏಷ್ಯಾ ಮತ್ತು ಕನ್ನಡ ಸ್ಪರ್ಧಾ ವಿಭಾಗಗಳಲ್ಲಿ ಸ್ವರ್ಧಿಸುವ ಚಿತ್ರಗಳನ್ನ ಅಂತಿಮ ಮಾಡಲಾಗಿದೆ.
ಈ ಬಾರಿ ಬೆಂಗಳೂರು ಚಿತ್ರೋತ್ಸವದಲ್ಲಿ, 'ಆಕ್ಟರ್', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕಿರಗೂರಿನ ಗಯ್ಯಾಳಿಗಳು', 'ರಾಮಾ ರಾಮಾ ರೇ', 'ಉಪ್ಪಿನ ಕಾಗದ', 'ಪಲ್ಲಟ', 'ಕಹಿ', 'ಬೆಕ್ಕು','ಅಲೆಮಾರಿಯ ಆತ್ಮಕಥೆ', 'ಧ್ವನಿ', 'ಕಂದ', 6-3' ಚಿತ್ರಗಳು ಕನ್ನಡ ಸ್ಪರ್ಧೆಗೆ ಆಯ್ಕೆ ಆಗಿವೆ.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು? ]
ಈ ಮೇಲಿನ ಚಿತ್ರಗಳ ಆಯ್ಕೆ ಹೇಗೆ ಆಯ್ತು ಎನ್ನುವುದಕ್ಕಿಂತ, ಕೆಳಗೆ ನೀಡಲಾಗಿರುವ ಚಿತ್ರಗಳ ಆಯ್ಕೆ ಯಾಕೆ ಆಗಿಲ್ಲ ಎಂಬುದು ಸದ್ಯ ಚಿತ್ರವಲಯದಲ್ಲಿ ಪ್ರಶ್ನೆಯಾಗಿದೆ. ಯಾಕಂದ್ರೆ, ಬೆಂಗಳೂರು ಚಿತ್ರೋತ್ಸವಕ್ಕೆ ಈ ಚಿತ್ರಗಳು ಖಂಡಿತಾ ಆಯ್ಕೆಯಾಗುತ್ತೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಈ ಬೆಳವಣಿಗೆ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.

ಶಿವಣ್ಣನ 'ಕಬೀರ'!
ಶಿವರಾಜ್ ಕುಮಾರ್ ಅಭಿನಯಿಸಿದ್ದ ‘ಕಬೀರ' ಚಿತ್ರ ಈ ಬಾರಿ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವುದು ಖಚಿತ ಎನ್ನಲಾಗಿತ್ತು. ಯಾಕಂದ್ರೆ, 'ಸಂತ ಕಬೀರ' ಅವರ ಕಥೆಯನ್ನ ಹೊಂದಿದ್ದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ 'ಕಬೀರ' ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ್ದರು. ಈ ಚಿತ್ರವನ್ನ ಇಂದ್ರಬಾಬು ನಿರ್ದೇಶನ ಮಾಡಿದ್ದರು. ಇಸ್ಮಾಯಿಲ್ ದರ್ಬಾರ್ ಸಂಗೀತ ನೀಡಿದ್ದರು. ಆದ್ರೆ, ಅದ್ಯಾಕೋ ಆಯ್ಕೆ ಆಗಿಲ್ಲ.

ಐತಿಹಾಸಿಕ ಚಿತ್ರ 'ಬಬ್ಲುಷಾ'!
ವಿಜಯನಗರ ಸಾಮ್ರಾಜ್ಯದ ಕಥಾಹಂದರವನ್ನ ಹೊಂದಿದ್ದ 'ಬಬ್ಲುಷಾ' ಈಗಾಗಲೇ ಮೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಆದ್ರೆ, ‘ಬೆಂಗಳೂರು ಸಿನಿಮೋತ್ಸವ'ದಲ್ಲಿ ಕೈಬಿಟ್ಟಿರೋದು ಬೇಸರದ ಸಂಗತಿ. ಈ ಚಿತ್ರವನ್ನ ಹಿರಿಯ ನಿರ್ದೇಶಕ ಸಿ.ವಿ.ಶಿವಶಂಕರ್ ಅವರ ಪುತ್ರ ವೆಂಕಟ್ ಭಾರಧ್ವಾಜ್ ನಿರ್ದೇಶನ ಮಾಡಿದ್ದರು.

ಸುಂದರ್ ರಾಜ್ 'ಲಿಫ್ಟ್ ಮ್ಯಾನ್'!
ಹಿರಿಯ ನಟ ಸುಂದರ್ ರಾಜ್ ಅಭಿನಯದ 'ಲಿಫ್ಟ್ ಮ್ಯಾನ್' ಚಿತ್ರ ಆಯ್ಕೆಯಾಗದೇ ಇರುವುದು ನಿರಾಸೆಯಾಗಿದೆ. ಯಾಕಂದ್ರೆ, ಈ ಚಿತ್ರ ಈಗಾಗಲೇ ಗೋವಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ದುರದೃಷ್ಟಕ್ಕೆ ‘ಬೆಂಗಳೂರು ಸಿನಿಮಾ ಜಾತ್ರೆ'ಯಲ್ಲಿ 'ಲಿಫ್ಟ್ ಮ್ಯಾನ್' ಕಳೆದು ಹೋಗಿದೆ. ಕಾರಂಜಿ ಶ್ರೀಧರ್ ನಿರ್ದೇಶನ ಮಾಡಿದ್ದರು.

ಯಾಕೆ ಆಯ್ಕೆ ಆಗಿಲ್ಲ!
ಈ ಮೂರು ಚಿತ್ರಗಳ ಫೈಕಿ 'ಬಬ್ಲೂಷ' ಹಾಗೂ 'ಲಿಫ್ಟ್ ಮ್ಯಾನ್' ಈಗಾಗಲೇ ಬೇರೆ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಹೀಗಾಗಿ ಸುಲಭವಾಗಿ ಬೆಂಗಳೂರು ಚಿತ್ರೋತ್ಸವಕ್ಕೂ ಆಯ್ಕೆಯಾಗಬೇಕಿತ್ತು. ಆದ್ರೆ, ಆಯ್ಕೆ ಆಗದೆ ಇರುವುದು ಪ್ರಶ್ನೆಯಾಗಿದೆ. ಇನ್ನೂ 'ಕಬೀರ' ಚಿತ್ರದ ಮೇಲೂ ನಿರೀಕ್ಷೆ ಇತ್ತು. ಬಟ್, ಇದು ಯಾಕೆ ಆಯ್ಕೆ ಆಗಿಲ್ಲ ಎಂಬುದಕ್ಕೆ ಆಯ್ಕೆ ಸಮಿತಿಯೇ ಉತ್ತರಿಸಬೇಕಾಗಿದೆ.


Click it and Unblock the Notifications











